Thursday, December 13, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 8



ಒಮ್ಮೊಮ್ಮೆ ಸಂದರ್ಭಕ್ಕೆ ಹೊಂದಿಕೊಂಡಂತೆ, ಇಲ್ಲವಾದಲ್ಲಿ ಹಲವು ಕಾಲ್ಪನಿಕ ಸನ್ನಿವೇಶಗಳ ತಾನೇ ಅಪ್ರಯತ್ನಪೂರ್ವಕವಾಗಿ ರೂಪಿಸಿಕೊಂಡು ಅದರ ಭಾಗವಾಗಿ ಕಾಡುವ ‘ಭಯ’ವನ್ನು ತೊರೆಯಲು ಸಾಕಷ್ಟು ಪ್ರಯತ್ನವೂ ಸಮಯವೂ ಬೇಕಾಗುವುದು. ಈ ಭಯವೆನ್ನುವುದು ಒಂದೇ ರೂಪ,ಲಕ್ಷಣಗಳ ಹೊಂದಿರುವಂತದಲ್ಲ. ಕಾಲಕ್ಕೆ ತಕ್ಕಂತೆ ವೇಷ ಬದಲಿಸುತ್ತಾ ಅತ್ಯಂತ ಆಪ್ತಮಿತ್ರನಂತೆ, ಹಿತ ಚಿಂತಕನಂತೆ ಆಗಮಿಸಿ ಆಕ್ರಮಿಸಿಕೊಳ್ಳುವ ವಿಶೇಷತೆ ಅದಕ್ಕಿದೆ. ಅದ್ಯಾವ ಪರಿ ಹೊಸ ರೂಪಗಳ ಪಡೆಯುವುದೆಂದರೆ ಮೊದಮೊದಲು “ನನಗದನ್ನು ಮಾಡುವುದೆಂದರೆ ಭಯ” ಎನ್ನುವಂತಿರುವ ನಮ್ಮ ಹೇಳಿಕೆಗಳು ಕಡೆಗೆ, “ ಅಲ್ಲಾ.. ಅದನ್ನು ಮಾಡಲಾಗೋದಿಲ್ಲ ಎಂದೇನಿಲ್ಲ. ನನಗೇ ಮಾಡೋದು ಇಷ್ಟವಾಗದು” ಎಂಬ ಅಚ್ಚರಿಯ ತಿರುವನ್ನು ಪಡೆದು ಬಿಡುತ್ತವೆ.. ಈ ಹಂತಕ್ಕೆ ತಲುಪಿಬಿಟ್ಟೆವೆಂದರೆ ಕೈ ಮೀರಿತೆಂದೇ ಅರ್ಥ! ಅಲ್ಲಿಗೆ, ಭಯಗಳಿಗೂ ಆಯ್ಕೆಗಳಿಗೂ ಇರುವ ವ್ಯತ್ಯಾಸವೇ ಕಾಣದ ಶೋಚನೀಯ ಸ್ಥಿತಿ ಬಂದೊದಗಿ ಬಿಡುತ್ತದೆ. ‘ಆಯ್ಕೆ’ಯೆಂದಾದದ ಮೇಲೆ ಇನ್ಯಾವ ಬದಲಾವಣೆ? ಯಾವುದರಿಂದ ಹೊರ ಬಂದು ಏನು ಸಾಧಿಸಲಿಕ್ಕಾಗಿ? ಈ ಹಂತ ಪ್ರಗತಿಯ ಪಾಲಿಗೆ ಪೂರ್ಣ ವಿರಾಮ...  ಇನ್ನು, ಮತ್ತೆ ನನ್ನ ಭಯಗ್ರಸ್ಥ ಬದುಕಿನತ್ತ ಇಣುಕುವುದಾದರೆ, ಹಿಂದೆ ಮುಂದೆ ಬೆಂಬಿಡದೇ ಕಾಡಿದ್ದ ಭಯ ಮೇಲಿನ ನಿಯಮಕ್ಕೇನು ಹೊರತಾಗಿರಲಿಲ್ಲ. ಅದುವೂ ನಾನು ಒಂದರಿಂದ ಹೊರಬಂತೆಂದರೆ ಮತ್ತೊಂದು ಮಗದೊಂದು ರೂಪದಲ್ಲಿ ತನ್ನ ವೇಷಗಳ ಬದಲಿಸುತ್ತಾ ಕಾಲಕ್ಕೆ ತಕ್ಕಂತೆ ಎದುರಾಗುತ್ತಲೇ ಸಾಗಿತು.ಆಗಿನ ‘ನನಗೆ’ ಭಯದ ಬೇರೆಯ ಅವತಾರಗಳು ಅತ್ಯಂತ ಸಹಜವಾಗಿ ‘ಆಯ್ಕೆ’ಗಳಂತೆಯೇ ಕಂಡುಬಿಟ್ಟವು.
ಹೀಗೇ ಭಯದ ನೆರಳಲ್ಲಿ ಬೆಳೆಯುತ್ತಾ , ಈ ನೆರಳಿಗೆ ಕಾರಣವಾಗಿರುವ ಮೂಲ ವೃಕ್ಷದ ಹುಡುಕಾಟದಲ್ಲಿರುವಾಗಲೇ ಮತ್ತೊಂದು ಅಚ್ಚರಿಯ ಕನಸಿನನುಭವ ಕಾದಿತ್ತು..  ಬಣ್ಣ ಬದಲಿಸುತ್ತಿದ್ದ ಭಯದೊಡನೆ ಗುದ್ದಾಡುತ್ತಿರುವಾಗ, ಬಣ್ಣಗಳೇ ತಾನಾಗಿರುವ ಕನಸೊಂದು ರೆಕ್ಕೆಬಿಚ್ಚಿ ಹಾರಿಬಂತು. ಹಾಗೆ ‘ಹಾರಿ’ ಬಂತೆನ್ನಲೂ ಕಾರಣವಿಲ್ಲದಿಲ್ಲ. ಕಾರಣ, ಹಾಗೆ ಕನಸಿನಲ್ಲಿ ಹಾರಿ ಬಂದದ್ದು ‘ಹಕ್ಕಿ’ಯೇ ಆಗಿತ್ತು! ಹೀಗೆ ಕನಸಿನಲ್ಲಿ ಅಂದು ಮೂಡಿದ ಹಕ್ಕಿಯ ?ಅಂತರಂU?ದಿಂದ ಎಂಬಂತೆ ಈ ವಾಕ್ಯಗಳು ಕೇಳಿದವು-
“ಹಾಡು ಹಕ್ಕಿಯ ಕೊರಳ ಧನಿಯು ನಾನಾದರೆ
ಕೊರಳು ನೀನಾಗುವೆಯ ಗೆಳತಿ...?
ನಾನು ಥಟ್ಟನೆ ಕಣ್ಣು ಬಿಟ್ಟೆ! ಸಾಲುಗಳು ಅರ್ಥವಾಗಲಿಲ್ಲ. ಇಷ್ಟವಂತೂ ಆದವು!!! ಆದರೆ ಗಾಬರಿ ಸ್ವಲ್ಪ ಹೆಚ್ಚೇ ಆವರಿಸಿದ್ದರಿಂದ ಹಕ್ಕಿಯ ‘ಆಗಮನ’ ಮನಕ್ಕೆ ಆಹ್ಲಾದಕರವಾಗಿರಲಿಲ್ಲ
ಈ ಹಕ್ಕಿಯೇ ಮುಂದಿನ ದಿನಗಳಲ್ಲಿ ನನ್ನ ‘ಸ್ವಪ್ನಗಳಲ್ಲಿನ ಆಪ್ತ ಸಖಿ’ಯಾಯಿತು. ಪದೇ ಪದೇ ಹಾರಿ ಬರುತ್ತಾ ತನ್ನೊಡನೆ ಹಲವು ವಿಚಾರಗಳನ್ನೂ, ಸಮಸ್ಯೆ-ಸಮಾಧಾನಗಳನ್ನು ಹೊತ್ತು ತಂದು ಕನಸಿನ ‘ನನ್ನೊಡನೆ’ ದ್ವಂದ್ವಗಳ ಅವಲೋಕಿಸಿ ಚರ್ಚೆಗಿಳಿಯುತ್ತಾ,  ನನ್ನೊಳಗೆ ಸ್ಪಷ್ಟತೆಯನ್ನು ನೆಲೆಯೂರಿಸಿ ಹಾರಿ ಹೋಗುತ್ತಿತ್ತು. ಈಗೆನಿಸುವುದು- ಆ ಹಕ್ಕಿ ಹೊತ್ತು ತಂದ ಬಣ್ಣಗಳು ಅಂದಿನ ‘ನಾನು’ ಬದುಕಿನಲ್ಲಿ ಗುರುತಿಸಲಾಗದ್ದೇ ಆಗಿವೆ. “ಹಕ್ಕಿಯೇ ಏಕೆ?’ ಎಂದು ನನಗೆ ಸಾಕಷ್ಟು ಅನಿಸಿದ್ದಿದೆ- ‘ಹಕ್ಕಿಯಂತೆ ಪುರ್ರನೆ ಹಾರುತ್ತಾ...’ ಎಂದು ನನಗೆ ನಾನೇ ಮನದಲ್ಲಿ ಆರಂಭಿಸಿಕೊಂಡು ‘ಈ ಸ್ಕೂಲಿನ ಗೋಡೆಯೊಡೆದು ಹಾರಬೇಕು.’ ಎಂದು ಸರಿ ಸುಮಾರು ಹತ್ತು - ಹನ್ನೆರಡು ವರ್ಷ ಎಡಬಿಡದೇ ಶಾಲಾದಿನಗಳಲ್ಲಿ ಕಂಡ ಹಗಲುಗನಸು ಒಂದು ಕಡೆ ನೆನಪಾದರೆ ಮತ್ತೊಮ್ಮೆ ಎನಿಸುವುದು- ಮನುಷ್ಯ ಕಲ್ಪಿಸಿಕೊಂಡ ಅತಿ ರಂಜಕ, ಆನಂದ ದಾಯಕ ಪ್ರಯಾಣ ಎಂದರೆ ಹಾರುತ್ತಾ ಸಾಗುವುದು. ಹಾರುವುದು ‘ಸ್ವಾತಂತ್ರ್ಯಾಭಿಲಾಷೆ’ಯ ಸಂಕೇತ. ‘ಹಕ್ಕಿ’ ಒಮ್ಮೆ ಈ ಸ್ವಾತಂತ್ರ್ಯದ ಸಂಕೇತವಾಗಿ ತೆರೆದುಕೊಂಡರೆ ಇನ್ನೊಮ್ಮೆ ಅದು ಹೊತ್ತು ತರುವ ವಿಚಾರಗಳ ವೈವಿಧ್ಯತೆಯನ್ನವಲೋಕಿಸಿದಾಗ, “ಹಕ್ಕಿ ಎಲ್ಲೆಲ್ಲೂ ಸುತ್ತಾಡಿ  ವಿಷಯಗಳ ಹೆಕ್ಕಿ ತರುತ್ತದೆ” ಎಂದು ಎನಿಸುವುದೇ ಅದರ ಆ ರೂಪಕ್ಕೆ ಸಿಗಬಹುದಾದ ವಿವರಣೆ ಎನಿಸಿ ಬಿಡುವುದು
ಪಕ್ಷಿ ಅರುಹಿದ ಅವತ್ತಿನ ಎರಡು ಸಾಲುಗಳನ್ನು ಈಗ ‘ಪೀಠಿಕೆ’ ಎಂದು ಬೇಕಾದರೆ ಹೆಸರಿಸಬಹುದು, ಆದರೆ ಹಾಗೆ ಮಾಡುವುದೇನು ಬೇಡ! ಆದರೆ ಪಕ್ಷಿಯೊಡನೆ ಮುಂದೆಯೂ ಅನುಭವವಾಗಿರದಿದ್ದ ಹಂತದಲ್ಲಿ ನಾನು ಅದಕ್ಕೆ ಬಹಳ ಹೆದರಿಬಿಟ್ಟಿದ್ದಿದ್ದಂತೂ ನಿಜ!
ನಂತರದ ಕನಸುಗಳ ಮಧ್ಯೆ ಪಕ್ಷಿ ಮತ್ತೆ ತೂರಿ-ಹಾರಿ ಬಂತು. ಕನಸು ಹೀಗಿತ್ತು...
...ಬಹಳ ಆರಾಮವಾಗಿ, ಸುಲಲಿತವಾಗಿ, ಸರಾಗವಾಗಿ ಹಾರುತ್ತಾ ಅಂದು ಕನಸಿನಲ್ಲಿ ನನ್ನ ಭುಜದ ಮೇಲೆ ಕುಳಿತ ಹಕ್ಕಿ ನನ್ನನ್ನು ಕುರಿತು ಹೇಳಿದಂತೆಯೇ ಹೇಳಿತು, “ನೋಡು.. ಪರಿಸ್ಥಿತಿಯ ಕಗ್ಗಂಟಿನಿಂದ  ಬಿಡಿಸಿಕೊಂಡು ಅದಕ್ಕಿಂತ ಮೇಲೇರಬೇಕೆಂದು ಕನಸುವವರು ‘ಎತ್ತರ’ಕ್ಕೆ ಹೆದರಿದರೆ ಆಗುತ್ತದೆಯೇ? ಎತ್ತರಕ್ಕೆ ಅಂಜುವುದು ‘ಪರಿಹಾರಕ್ಕೆ’, ಉಪಾಯಗಳಿಗೆ, ಸಾಧ್ಯತೆಗಳಿಗೆ, ಇನ್ನೂ ವಿಸ್ತಾರಗೊಳಿಸುವುದಾದರೆ, ಬದುಕುವುದಕ್ಕೇ ಅಂಜಿದಂತೆ! “
ಪಕ್ಷಿಯ ಗುರುತು ಹಿಡಿದು ನಾನೆನ್ನುವೆ-, “ಓ ನೀನು! ಬಾ... ಅದು ನಿಜ..., ಆ ವಿಷಯ ಹಾಗಿರಲಿ. ನಾನೂ ಹಾರಬೇಕು.. ನಿನ್ನಂತೆ!”
ಪಕ್ಷಿ- “ಕಾಲ್ನಡಿಗೆ ಹೇಗೆ ಒಂದು ‘ಸ್ಥಿತಿ’ಯೋ ಹಾಗೇ ಹಾರುವಿಕೆಯೂ ಒಂದು ಸ್ಥಿತಿ! ನಾನು ಹಾರಲು ಮಾಡಲ್ಪಟ್ಟಿರುವೆ. ನೀನು ನಡಿಯಲಿಕ್ಕೆ. ನಮ್ಮ ಸ್ಥಿತಿಗಳನ್ನು ದೈಹಿಕವಾಗಿ ಬದಲಾಯಿಸಿಕೊಂಡರೆ ನಾವಿಬ್ಬರೂ- ‘ನಡೆಯಲಾರೆ’ನೆಂದು ನಾನು, ‘ಹಾರಲಾರೆ’ಎಂದು ನೀನು ಕೊರಗಿಯೇ ಸಾಯಬೇಕಾಗುತ್ತದೆ. ನಾನು ಆಗಲೇ ಪ್ರಸ್ತಾಪಿಸಿದ್ದು ಮಾನಸಿಕ, ಭೌತಿಕ ಹಂತವನ್ನ. ಮನಸ್ಸಿಗೆ ಪಕ್ಷಿಯ ದೇಹದ ಆಶ್ರಯದ ಹಂಗಿಲ್ಲದೇ ‘ಅನಂತತೆ’ಯೆಂಬ ಶಬ್ದಕ್ಕೂ ನಿಲುಕದೆತ್ತರಕ್ಕೆ ಏರುವ ಅಪರಿಮಿತ ತಾಕತ್ತಿದೆ. ಆ ಮನಸ್ಸು ಹೀಗೆ ಕಗ್ಗಂಟಿನಲ್ಲಿ ಒದ್ದಾಡುತ್ತಾ ,ಮೇಲೇರಲು ಹೆದರುತ್ತಾ ಪರಿಹಾರಕ್ಕೇ ವಿಮುಖವಾಗಿದೆ.  ‘ಏರಬೇಕು, ಹಾರಬೇಕು’ ಎಂಬ ವಾಂಛೆ ಮೊರಟಿ ಹೋದ ನಿನ್ನಂತಹವರ ಮನಸ್ಸಿಗೆ ಎಂದು ಬರುವುದೋ ಅಂದು ಎತ್ತರದ ಮಿತಿಯನ್ನೂ ದಾಟಿ ಅದು ಸಾಗುವುದು ಮತ್ತು ಸಾಗುತ್ತಲೇ ಇರುವುದು. ಯೋಚಿಸು..”
ಪಕ್ಷಿ ತನ್ನದೇ ವಿಶೇಷ ಲಯದಲ್ಲಿ ಹಾರಿ ಮರೆಯಾಗುವುದು.....
ಒಂದೊಂದು ಕನಸು ಮುಗಿದಾಗಲೂ ದಿಗಿಲಾಗಿ ಏಳುವುದು ನನಗೆ ಅಭ್ಯಾಸವಾಗಿಹೋಗಿತ್ತು! ಹಾಗಾಗಿ ಈ ಕನಸಿನ ನಂತರದ ನನ್ನ ಪ್ರತಿಕ್ರಿಯೆ ಹೇಳುವುದೇನು ಬೇಡ.. ಆದರೂ ಹೇಳಲೇಬೇಕೆಂದರೆ ಹಿಗೆ ಹೇಳಬಹುದು- ಎಲ್ಲವೂ ಬಹಳ ವಿಚಿತ್ರ. ಹೆದರಿದ ಮಗುವಿಗೆ ‘ಹೆದರಬೇಡ’ವೆಂದು ಹೇಳಲು ಶಿಕ್ಷಕರು ಕರೆಸಿದ್ದರೂ, ಕರೆಸಿದ ಕ್ಷಣದಿಂದಲೇ ಮತ್ತೆ ಹೆದರಿಕೆಯೇ ಆಗುವುದು! ನನ್ನನುಭವವೂ ಹಾಗೆಯೇ ಇತ್ತೆನ್ನಬಹುದೇನೋ.
ಆ ಕನಸಿನತ್ತ ಬರುವುದಾದರೆ, ಪಕ್ಷಿಯ ಸಂವಾದದ ಕುರಿತು ನಾನೇನು ಹೇಳುವುದಿಲ್ಲ. “ಉದ್ದೇಶವೇ ಸಂವಹನ ಮಾಡುವುದಾಗಿರುವಾಗ, ಸಂಹವನದಲ್ಲೇ ಉದ್ದೇಶವೂ ಇರುವಾಗ ಸಂವಹನದ ಬಗೆಗೆ ಹೇಳಲೇನೂ ಉಳಿದಿರುವುದಿಲ್ಲ”
ಇನ್ನು ನನ್ನ ಪ್ರತಿಕ್ರಿಯೆಯ ಬಗ್ಗೆ- ನನ್ನದೇ ಪರಿಸ್ಥಿತಿಯ ಉದ್ದೇಶಿಸಿದಂತೇ ಪಕ್ಷಿ ಮಾತನಾಡಿದರೂ ನಾನು ಅಸಂಬದ್ಧವಾಗಿ ಪ್ರತಿಕ್ರಿಯಿಸುವೆ. ಅದು ನನಗೆ ವಾಸ್ತವವ ಒಪ್ಪಿಕೊಳ್ಳದೇ ಭ್ರಮಾಲೋಕವ ಅಪ್ಪಿಕೊಂಡು ಬದಲಾವಣೆ ಬಯಸುವ, ಸಂತಸವನ್ನು ಅನುಭವಿಸುವ ಹೊರಡುವ ಮನದ ಒಂದು ‘ಹಂತ’ ದಂತೆ ಕಾಣುವುದು. ಅದು ನನ್ನ ಮನದ ಹಂತವೇ ಆಗಿತ್ತು! ಎಷ್ಟು ಅಸಾಧ್ಯಕರವಾದ ಹಂತವದು ಎಂದರೆ ಈ ಕನಸಿನ ಅಂತ್ಯದಲ್ಲಿ ಪಕ್ಷಿ ‘ಯೋಚಿಸು’ ಎಂದಿತ್ತಲ್ಲಾ, ನಾನೂ ಅಂತೂ ಯೋಚಿಸಿದೆ. “ನನಗೇ ಗೊತ್ತಾಗದ್ದನ್ನು ಇದು ನನಗೇ ಬಂದು ಹೇಳುತ್ತದಲ್ಲಾ. ಹೇಗೆ?- ಎಂದಿಗೂ ಪ್ರಶ್ನೆಗಳು “ಚಿಂತೆಯ ಮೊದಲಿಗೂ ಚಿಂತನೆಯ ಕಡೆಗೂ ಇದ್ದಾಗ ಮಾತ್ರ ಉತ್ತರ ಲಭಿಸುತ್ತದೆ”. ನನ್ನದು ಚಿಂತೆಯಾಗಿತ್ತು ಮತ್ತು ಪ್ರಶ್ನೆ ಕಡೆಯಲ್ಲಿತ್ತು! 

(¸À±ÉõÀ)

(Image Courtesy- Web)

Saturday, November 24, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 7



 ಒಳಗಿನ ಕತ್ತಲೆಯನ್ನು ಹೊಡೆದೋಡಿಸುವುದರ ಬಗೆಗೆ ಕೇಳುತ್ತಿರುತ್ತೇವೆ. ಆದರೆ ಕತ್ತಲೆ ಓಡಿದಸ್ಥಿತಿಯೆಂಬುದಿಲ್ಲ. ಕತ್ತಲೆ ಹೋಗುವುದು ಎನ್ನುವುದು ಬೆಳಕನ್ನು ಅದರ ಜಾಗದಲ್ಲಿ ತುಂಬುತ್ತಾಬಂದಂತೆ ಆಗುವಂತದ್ದು. ಇದು ನನಗೆ ಅಚ್ಚುಕಟ್ಟಾಗಿ ಅನ್ವಯವಾಗುವುದಾಗಿತ್ತು. ಅಂದು ಮನೋಬಲವೇ ಮನಕ್ಕೆ ಅತ್ಯುತ್ತಮ ಔಷಧವೆಂದು ಕನಸುಬಂದಿದ್ದು ಗುಳಿಗೆಯನ್ನು ನಿಲ್ಲಿಸುವಷ್ಟು ಬಲವನ್ನೊದಗಿಸಿದ್ದಂತೂ ಹೌದೇ ಆದರೂ ಸಮಸ್ಯೆಯ ಹೆಸರಲ್ಲಿ ಪದರ ಪದರವಾಗಿ ನೆಲೆಸಿರುವ ಕತ್ತಲೆಯನ್ನು ಕಳೆಯಲು ಬೆಳಕು ಮೂಡಿ ಹೋದರೆ ಸಾಲದು, ಅದು ಅಲ್ಲೇ ನೆಲೆಸಬೇಕು! ಹಾಗೆ ನೋಡ ಹೊರಟರೆ ಶಾಶ್ವತವಾದ ಕತ್ತಲೆಯಾಗಲೀ ಸಂಪೂರ್ಣ ಬೆಳಕಾಗಲೀ ಇರುವಂತಹದ್ದು ಕಾಣಸಿಗುವುದಿಲ್ಲ- ಕತ್ತಲೆ ಬೆಳಕನ್ನೂ ಬೆಳಕು ಕತ್ತಲೆಯನ್ನೂ ಒಂದಕ್ಕೊಂದು ತಳಕು ಹಾಕಿಕೊಂಡು ಹೋಗುತ್ತಿರುವುದು ನೈಜವೆನಿಸುತ್ತದೆ. ಬಹಳ ಸಲ ಕತ್ತಲೆಯ ಕೂಪದೊಳಗೆ ಸಿಲುಕಿ ನರಳುವುದೋ ಅಥವಾ ಶಾಶ್ವತ ಬೆಳಕನ್ನು ಮೂಡಿಸಿಕೊಳ್ಳುವುದರತ್ತ ಹವಣಿಸುವುದೋ ಮಾಡುವುದೇ ದುಃಖದ ಮೂಲವಾಗಿ ತೋರುತ್ತದೆ
ಅಸಹಾಯಕತೆಎಂಬ ಪದದ ವ್ಯಾಪ್ತಿ ವಿಸ್ತ?ತವಾದುದ್ದು. ನಾನು ಔಷಧಿಯ ಮೇಲೆ ಅವಲಂಬಿತಳಾಗಿದ್ದವಳು, ಅದನ್ನು ಬಿಟ್ಟು ಸ್ವಾವಲಂಬಿಯಾಗುವ ಬದಲು ಅಸಹಾಯಕಳಾಗಿಬಿಟ್ಟೆ. ಔಷಧಿಯ ನೆಪದಲ್ಲಿ ಮರೆಯಾಗಿದ್ದ ಸಮಸ್ಯೆಗಳೆಲ್ಲಾ ಹಾಗೆಯೇ ಇದ್ದವಲ್ಲಾ ಅವು ಜೋರಾಗಿ ಎದ್ದೆದ್ದು ಕುಣಿದವು! ಅಥವಾ ಕುಣಿಯುವಂತೆ ಕಂಡವು ಎಂಬುದು ಸೂಕ್ತವೇನೋ. ಮಗುವು ತನ್ನ ಕಾಲಮೇಲೆ ನಡೆದರೆ ಸಾಕಪ್ಪಾ ಎಂಬುದು ಪಾಲಕರ ಮೊದಲ ಆಶಯವಷ್ಟೇ. ನಂತರದಲ್ಲಿ ಅದು ನಡೆದರಷ್ಟೇ ಸಾಲದು. ತನ್ನ ಕಾಲಮೇಲೆ ನಡೆಯುತ್ತಾ ಅದು ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂಬುದೇ ಅತ್ಯಂತ ಮುಖ್ಯವಾಗಿ ಬಿಡುವುದು! ಹಾಗೆಯೇ ದಿಕ್ಕುದೆಸೆ ಇಲ್ಲದ ಮನಸ್ಸು ಬಹಳ ಅಪಾಯಕಾರಿಯಾದುದು. ನಾನಿಲ್ಲಿ ಅತ್ಯಂತ ಉನ್ನತ ಗುರಿಯನ್ನಿರಿಸಿ ಅದರ ಬಳಿ ಹೋಗಲು ತವಕಿಸುವ ಮನದ ಬಗೆಗೆ ಹೇಳುತ್ತಿಲ್ಲ, ಬದಲಿಗೆ ಬೆಳಗಿನ ಜಾವ ಎದ್ದ ಮೇಲೆ ಈಗೇನು ಮಾಡುವುದು?’ ಎಂದು ಆತಂಕಿಸುವ ಮನದ ಬಗೆಗೆ ಮಾತನಾಡುತ್ತಿರುವೆ. ನನ್ನ ಮನ ಅಂತಹುದೇಆಗಿತ್ತು.. ಅದನ್ನು ದಾರಿಗೆ ತರುವುದು ನನ್ನ ಕೈಲಿಲ್ಲ ಎಂಬುದನ್ನು ನಾನು ನಿಷ್ಠಳಾಗಿ ನಂಬಿದ್ದರಿಂದ ಅದರ ಕೈಹಿಡಿದು ನಡೆಸುವ ಪ್ರಯತ್ನವನ್ನು ನಾನು ಮಾಡಲೇ ಇಲ್ಲ..
ಹೀಗಿರುವಾಗ ಕನಸಿನ ಅನುಭವವೊಂದು ನನ್ನನ್ನೆಚ್ಚರಿಸಲು ಕಾಣಿಸಿದಂತೆ ತೋರಿತು-
ಒಬ್ಬ ಮಧ್ಯವಯಸ್ಕರು ನನ್ನ ಮನೆಗೆ ಬಂದಿಹರು. ನನಗೆ ಅವರೆಂದರೆ ಬಹಳ ಗೌರವವಿರುವುದು. ಅವರು ನನ್ನನ್ನು ಕೋಣೆಯಲ್ಲಿ ಕುಳಿತುಕೊಂಡು ಸಮಯ ಹಾಳು ಮಾಡುವ ಬದಲು ನಡುಮನೆಗೆ ಬರುವಂತೆ ಸಲಹೆ ನೀಡುವರು. ನಾನು ನಿರಾಕರಿಸಿ ನಂತರ ಒಪ್ಪಿ ನಡೆಯುವೆ. ನಂತರ ಅಲ್ಲಿಂದ ವರಾಂಡಕ್ಕೆ, ಮನೆಯ ಗೇಟ್‌ಗೆ ಹೀಗೇ ಮುಂದೆ ಮುಂದೆ ನಡೆದಂತೆ ನನ್ನ ಮನೆಯ ಆವರಣದಿಂದ ಹೊರಗೆ ನಾನು ಕಾಲಿರಿಸುವೆ. ಅಲ್ಲಿಗೆ ಹೋದೊಡನೇ- ಹಂತ ಹಂತವಾಗಿ ಹೋಗುತ್ತಾ ಹೋಗು ಇಲ್ಲೊಂದು ಪ್ರಪಂಚವಿದೆ. ಅದು ಎಲ್ಲರನ್ನೂ ಸ್ವೀಕರಿಸುತ್ತದೆಎಂದು ಹೇಳಿ ನಡೆದು ಹೊರಟು ಹೋಗುವರು..
ಇದೇ ಕನಸು ನನಗೆ ಕೆಲ ದಿನಗಳು ಪದೇಪದೇ ಬರುತ್ತಲೇ ಇತ್ತು.. ನಾನು ನನ್ನನ್ನೇ ಕೇಳಿಕೊಂಡೆ ಅಲ್ಲಾ, ಹಂತಹಂತವಾಗಿ ಹೊರಹೋಗೋದೇನೋ ಸರಿ. ಹೋಗೇನು ಮಾಡುವುದು?’. ನನ್ನ ಮನಸ್ಸು ತನಗೆ ಬೇಕಾದ ಹಾಗೆ ಎಲ್ಲಾ ನೀತಿಗಳನ್ನೂ ತಿರುಚಿ ಬಿಡುತ್ತಿತ್ತು! ಆದರೆ ಆ ಕನಸು ಪದೇಪದೇ ಬರುತ್ತಿತ್ತೆಂದೆನಲ್ಲ. ಕಡೆಗೊಂದು ಬಾರಿ ಸಣ್ಣ ಪ್ರಮಾಣದಲ್ಲಿ ನನಗೆನಿಸಿತ್ತು- ನಾನು ಹೀಗಿರಬಾರದು’. ಹೇಗಿರುವೆ ನಾನು? ಮನೆಯಿಂದ ಹೊರಹೋಗಲು ರುಚಿಸದು, ಯಾರೂ ಏನೂ ಹೇಳಬಾರದು, ನನ್ನ ಭವಿಷ್ಯದ ಬಗ್ಗೆ ಚಿಂತಿಸುವುದೆಂದರೆ ನನಗಾಗದು, ಈ ಪ್ರಪಂಚ ಸರಿ ಇಲ್ಲದಿರುವುದರಿಂz, ಎಲ್ಲರೂ ಸ್ವಾರ್ಥಿಗಳಾಗಿರುವುದರಿಂದ ಯಾವುದೂ ನನಗೆ ಬೇಡ....   ಇದು ಸಣ್ಣ ಪಟ್ಟಿಯಷ್ಟೇ. ನನ್ನ ಬಳಿ ಸಾಕ್ಷ್ಯಾಧಾರ ಸಮೇತ ಇವೆಲ್ಲವನ್ನೂ ನಿರೂಪಿಸುವಂತಹಾ ದೊಡ್ಡ ಪಟ್ಟಿಯೇ ಇತ್ತು. ನಾನೀಗ ಅದನ್ನು ಕ್ಷುಲ್ಲಕ ಎನ್ನುವುದಿಲ್ಲ. ಅದು ಆರ್ಥಹೀನ ಎಂದು ಟೀಕಿಸಲು ಹೋಗುವುದೇ ಇಲ್ಲ- ನಾವು ಸಣ್ಣ ಪುಟ್ಟದ್ದುಎಂದು ಪರಿಗಣಿಸುವ ಕೆಲ ವಿಷಯಗಳು ಮೊದಲ ಹಂತದಲ್ಲಿ ದೊಡ್ಡದಾಗಿ ಕಾಣಿಸಿಕೊಂಡು ನಂತರದ ಹಂತದಲ್ಲಿ ಸಣ್ಣಪುಟ್ಟದಾಗಿರುತ್ತದೆ. ಈ ಮೊದಲ ದೊಡ್ಡಹಂತವನ್ನು ಪಾರುಮಾಡಲಾಗದ ದುರ್ಬಲ ಮನಸ್ಸಿಗೆ ಆಯುಧಗಳ ಅವಶ್ಯಕತೆಯಿರುತ್ತದೆ. ಈ ಆಯುಧಗಳು ಸಬಲತೆಯೆಡೆಗೆ ಮನಸ್ಸನ್ನು ಕೊಂಡೊಯ್ಯುತ್ತದೆ. ಬಹಳಷ್ಟು ಜನರಿಗೆ ಸರಾಗವಾಗಿ ಅನುಭವಗಳು ಸನ್ನದ್ಧರನ್ನಾಗಿಸಿ ಬಿಡುವುದರಿಂದ ಅದನ್ನು ಹೊಂದದಿರುವುದು ವಿಚಿತ್ರವಾಗಿ ತೋರುವುದು ಸಾಮಾನ್ಯವಾಗಿದೆ..ಈ ತೆರನಾಗಿ ಶಸ್ತ್ರಾಸ್ತ್ರ ಸಜ್ಜಿತಳಾಗುವುದು ಅಂದಿನ ಅವಶ್ಯಕತೆಯಾಗಿತ್ತು. ಮನವರಿಕೆ ಮಾತ್ರ ಆ ರೂಪದಲ್ಲಿ ಆಗಿರಲಿಲ್ಲ.
 ನಮ್ಮಲ್ಲಿರುವ ಲೋಪದೋಷಗಳನ್ನು ಗುರುತಿಸುವುದು ಬೆಳವಣಿಗೆಯ ಮೊದಲ ಹೆಜ್ಜೆಯೇ ಆದರೂ ಆ ಹೆಜ್ಜೆಯಲ್ಲೇ ಉಳಿದು ಬಿಡುವುದು ಖಾಯಿಲೆಯ ಲಕ್ಷಣದಂತೆ ಗೋಚರಿಸಲಾರಂಭಿಸುತ್ತದೆ. ಬದಲಾವಣೆಯ ಪ್ರೇರಣೆಯ ನೆರಳಲ್ಲಿ ಗುರುತಿಸಲ್ಪಡುವ ಲೋಪದೋಷಗಳಿಗಷ್ಟೇ ಬೆಳೆಸುವ, ಬದಲಾಯಿಸುವ ಶಕ್ತಿಯಿರುವುದು. ಆ ತರಹದ ವೇದಿಕೆಯೊಂದು ಸೃಷ್ಠಿಯಾಗುವುದು ಅತಿ ಮುಖ್ಯವಾದುದು. ಅಂತಹ ಪ್ರಜ್ಞೆ  ಯಾವುದೋ ಸಮಯದಲ್ಲಿ ಉದಯಿಸಿ ಜೀವನದ ದಿಕ್ಕನ್ನೇ ಬದಲಾಯಿಸಿದ ಉದಾಹರಣೆಗಳು ಗಮನಕ್ಕೆ ಬರುತ್ತಲೇ ಇರುತ್ತವೆ. ನನಗನಿಸುವುದು - ಕಿಡಿಯನ್ನು ಹಚ್ಚಿಸುವುದರಷ್ಟೇ ಮುಖ್ಯ ಬೆಂಕಿಯನ್ನು ಕಾಯ್ದು ಕೊಳ್ಳುವುದು! ಈ ರೀತಿ ಕಾಯ್ದುಕೊಳ್ಳುವಿಕೆಆದಾಗ ಮಾತ್ರ ಉರಿಯ ಮುಂದಿನ ಉಪಯೋಗವಾಗಲು ಸಾಧ್ಯವಿದೆ. ಅದರ ಬಗೆಗೆ ಮಾತನಾಡದೇ ಕಿಡಿ ಹೊತ್ತಿದಗಳಿಗೆಯನ್ನಷ್ಟೇ ಉಲ್ಲೇಖಿಸುವುದರಿಂದ ಸಂದೇಶ ಪೂರ್ಣವಾಗದು. ನನ್ನಲ್ಲಿ ಹೀಗೆ ಬದಲಾವಣೆಯ ಸಮಯವನ್ನು ಕಿಡಿ ಹೊತ್ತಿದಸಂದರ್ಭವೆಂದು ನಾನು ಹೇಳಿದರೆ ಅದು ಸತ್ಯವನ್ನು ದೂರ ತಳ್ಳಿದಂತೆಯೇ ಸರಿ. ಅದನ್ನು ನಾನು ಬೋರೆನಿಸುವ ಬೋರಿನ ಬಗ್ಗೆ ಬೋರುಬಂದ ಕ್ಷಣಎನ್ನಲು ಇಚ್ಛಿಸುವೆ- ಅಂದು ನನ್ನದೇ ಪ್ರತಿಬಿಂಬವನ್ನು ನಿರುಕಿಸುತ್ತಾ ಎಂದಿನಂತೆ ನನ್ನ ಬಗೆಗೆ- ನಾ ಕಂಡ ಪ್ರಪಂಚದ ಬಗೆಗೆ ದೋಷಾರೋಪ ಸಲ್ಲಿಸುತ್ತಿದ್ದವಳು ಅಚಾನಕ್ಕಾಗಿ ಅರುಹಿಕೊಂಡೆ ಅಂತಹದ್ದು ನನಗೇನಾಗಿದೆ?’. ಇಷ್ಟು ದಿನ, ‘ಅಂತಹದ್ದು ನಿನಗೇನಾಗಿದೆ?’ ಎಂಬ ದೃಷ್ಟಿಕೋನವನ್ನು ಎದುರಿಸುತ್ತಿದ್ದವಳಲ್ಲಿ ಅಷ್ಟು ಮಟ್ಟದ ಮಾರ್ಪಾಟಾಗಿತ್ತು. ಇದರಲ್ಲಿ ಹೇಳಿಕೊಳ್ಳುವುದೇನಿದೆ? ಎನಿಸಿದರೆ ಅದು ಬಹಳ ನಿಜ. ಏಕೆಂದರೆ ಈಗ ಬರೆಯ ಹೊರಟರೆ ನನಗೂ ಹಾಗೇ ಎನಿಸುವುದುಂಟು! ಆದರೆ ಒಂದಂತೂ ನಿಜ- ಎಲ್ಲರಿಗೂ ತಿಳಿದಿರುವ ಸಾಮಾನ್ಯ ವಿಷಯಗಳು ಸಮಸ್ಯೆ ಇರುವವರಿಗೆ ಒಮ್ಮಮ್ಮೆ ಅವರಿಗಿಂತಲೂ ಚೆನ್ನಾಗಿಯೇ ತಿಳಿದಿರುತ್ತದೆ. ಉದಾಹರಿಸುವುದಾದರೆ, ದುರಭ್ಯಾಸಗಳು ಕೆಟ್ಟವೆಂದು ಯಾವ ಆಭ್ಯಾಸಿಗಾದರೂ ತಿಳಿದಿರದೇ ಇರುವುದೇ? ಇನ್ನೂ ಆಳವಾಗಿ ಮಾತನಾಡಿ ನೋಡಿಸಿದರೆ ಅವರಿಗೆ ಅದರಿಂದುಂಟಾಗುವ ದುಷ್ಪರಿಣಾಮಗಳು ಕೆಲವೊಮ್ಮೆ ವೈದ್ಯರ ಸಮನಾಗೇ ತಿಳಿದಿರುವುದೂ ಉಂಟು! ಆದರೆ ಅಲ್ಲಿ ಇರುವ ಕೊರತೆ ಇದರಿಂದ  ಹೊರಬರಲು ಸಾಧ್ಯವಾಗದಂತಹದ್ದು ನನ್ನಲ್ಲಿ ಏನಿದೆ?’ ಎಂಬ ಬಲವಾದ ಪ್ರಶ್ನೆಯ ಬಲದ್ದು. ಇದನ್ನು ನನಗೆ ಅನ್ವಯಿಸ ಹೊರಟರೆ ಅಂತಹದ್ದು ನನಗೇನಾಗಿದೆ?’ ಎಂದೆದ್ದ ಪ್ರಶ್ನೆಯ ಮಹತ್ವ ಸ್ವಲ್ಪ ಸ್ಪಷ್ಟವಾಗುವುದೇನೋ. ಆದರದು ಮತ್ತು ಅದೇ ಮುಖ್ಯವಾದುದು, ಬದುಕ ಬದಲಾಯಿಸುವಂತದ್ದು ಎನ್ನುವಂತಿಲ್ಲ- ಬದುಕ ಏಕೆ ಬದಲಾಯಿಸಿಕೊಳ್ಳಬೇಕಿದೆ ಎಂಬ ಪ್ರಶ್ನೆಗೆ ಉತ್ತರ ದೊರೆಯುವವರೆಗೂ ಅದು ಬದಲಾಗುವುದಿಲ್ಲ ಮತ್ತು ನಾವು ಕೇಳಿಕೊಂಡ ಪ್ರಶ್ನೆ ಸರಿಯಾಗಿದೆ ಎನಿಸುವವರೆಗೂ ಉತ್ತರವೇ ದೊರೆಯುವುದಿಲ್ಲ!
ನಾನಂತೂ ನನಗೆ ನಾನೇ ಅಪ್ರಯತ್ನಪೂರ್ವಕವಾಗಿ ಹೇಳಿಕೊಂಡು ಬಿಟ್ಟಿದ್ದೆ. ಅದರ ಹಿಂದೆಯೇ ನಿಧಾನವಾಗಿ ಉಪಾಯಗಳೂ ದೊರೆಯಲಾರಂಭಿಸುತ್ತಾ ನಡೆದವು. ನಾನು ಅದನ್ನನ್ವಯಿಸಲು ಹೊರಡುವೆ, ಎಡವುವೆ, ಬೀಳುವೆ, ಏಳಲು ತುಂಬ ಸಮಯ ತೆಗೆದುಕೊಳ್ಳುವೆ. ಅಂತೂ ಏಳುವೆ. ಈ ನಿಟ್ಟಿನಲ್ಲಿ, ನನ್ನ ಭಯಗಳಲ್ಲೊಂದಾದ ಹಿಂದೆ ಯಾರದೋ ನೆರಳಿದೆಯೆಂಬ ಭಯದಲ್ಲಿ ಅತ್ತಿತ್ತ ನೋಡಲು ಅಂಜುತ್ತಿದ್ದವಳಿಗೆ ಮನಸ್ಸಿನ ಮೂಲೆ ಕೂಗಿ ಹೇಳುವುದು- ಸರಿ, ಅದೇನಿದೆಯೋ ನೋಡೇ ಬಿಡೋಣ. ಪ್ರಾಣ ಹೋದರೆ ಹೋಗಲಿ’. ಪದೇ ಪದೇ ಅನಿಸುತ್ತಿದ್ದ ಸೂಚನೆಯ ಮೇರೆಗೆ ನಾನು ಚೂರು ಚೂರೇ ಧೈರ್ಯ ತಂದುಕೊಳ್ಳಲಾರಂಭಿಸಿದೆ. ಯಾವ ಕೋಣೆ ಭಯ ತರುವುದೋ ಅಲ್ಲಿಯೇ ಹೋಗಿ ಕೂತೆದ್ದು ಬರುವೆ.  ಎಲ್ಲೇ ಶಬ್ದವೆನಿಸಿದರೂ ಅದರ ಆಕರ ತಿಳಿಯುವವರೆಗೂ ಮುಂದುವರಿಯುವೆ. ಹಗಲಿರಲಿ ರಾತ್ರಿಯಿರಲಿ ನನ್ನ ಪ್ರಯತ್ನ ಸಾಗುವುದು. ಈಗ ಇದನ್ನೋದಿ ಎನಿಸಬಹುದು- ಇಷ್ಟು ಮಾಡುವುದನ್ನು ಕಂಡುಕೊಳ್ಳಬೇಕಾಯಿತೇ, ಯಾರೂ ಹೇಳಲಿಲ್ಲವೇ ಎಂದು. ನಮ್ಮಲ್ಲಿ ಎಲ್ಲರೂ ಹೇಳುವವರೇಆಗಿರುವುದರಿಂದ ಸಲಹೆ ಬರಲಿಲ್ಲ ಎಂದರ್ಥವಲ್ಲ- ಯಾವ ಮನಸ್ಸು ಪ್ರಪಂಚವೇ ಸರಿಯಿಲ್ಲವೆಂದು ನಿರ್ಧರಿಸಿರುವುದೋ ಅದು ಎಲ್ಲಾ ಸತ್ಯಗಳಿಗೂ, ಸೌಂದರ್ಯಕ್ಕೂ ಕಿವುಡು ಹಾಗೂ ಕುರುಡಾಗಿರುತ್ತದೆ. ಅದು ತನ್ನಲ್ಲೇ ನಿಜವನ್ನು ಕಾಣಬೇಕಿರುವುದು. ಹಾಗೆ ಕಂಡುಕೊಂಡಾಗ ಮಿಥ್ಯಗಳಿಗೂ, ಕುರೂಪಕ್ಕೂ ಕಿವುಡು- ಕುರುಡಾಗುವ ಹಂತಕ್ಕೆ ಅದು ಬೆಳೆಯಬಲ್ಲದು

  (ಸಶೇಷ)
(Image Courtesy- Web)

Thursday, September 20, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 6


ನಾನು ಹಿಂದಿನ ಬರಹದಲ್ಲಿ ಹೇಳಿದಂತೆ ನನ್ನ ಖಿನ್ನಮನಃಸ್ಥಿತಿಗೆ ಔಷದೋಪಚಾರ ನಡೆದೇ ಇತ್ತು. ನಾನು ಎಷ್ಟರ ಮಟ್ಟಿಗೆ ಒಂದು ಕಾಳಿನ ಗಾತ್ರದ ಗುಳಿಗೆಗೆ ನನ್ನ ಮನಸ್ಸನ್ನು ಒಗಿಸ್ಗಿ ಕೊಂಡಿದ್ದೆನೆಂದರೆ ಅದುವೇ ಜೀವನ. ಅದಿಲ್ಲದಿದ್ದರೆ ನಾನಿಲ್ಲಎಂಬ ಆತಂಕ ಬಂದೊದಗಿತ್ತು. ಅದರ ಛಾಪು ಮನೆಯವರ ಮುಖದಲ್ಲೂ ಎದ್ದು ಕಾಣುತ್ತಿತ್ತು. ಯಾವ ದೈಹಿಕ ಸಮಸ್ಯೆಯೂ ಇಲ್ಲಎಂಬ ಬಲವಾದ ಆಧಾರವಿದ್ದರೂ. ಮಾನಸಿಕವಾಗಿ ಮಾತ್ರಯೇ ಆಧಾರಎಂದು ನಾನು ಪರಿಗಣಿಸಿಯಾಗಿತ್ತು. ಅದು ನನಗೇನು ಉಪಕಾರ ಮಾಡುತ್ತಿದೆ? ಎಂಬುದು ಎಲ್ಲರಿಗೂ ಯಕ್ಷ ಪ್ರಶ್ನೆಯೇ ಆಗಿದ್ದಂತೆ ನನ್ನ ಸ್ವಬಾವವಿದ್ದರೂ, ಅದನ್ನು ತೆಗೆದುಕೊಳ್ಳದಿದ್ದರೆ ನಡೆಯದುಎಂದು ನನ್ನನ್ನೂ ಸೇರಿದಂತೆ ಎಲ್ಲರೂ ನಂಬುತ್ತಿದ್ದರು - ಬಹುಷಃ ಈ ಚಟಗಳು ಒದಗಿಸುವಷ್ಟು ಮಾನಸಿಕ ಆಧಾರವನ್ನು ಮತ್ತೇನೂ ಒದಗಿಸಲಾರದು. ಏಕೆಂದರೆ ನಾವು ಚಟಗಳಿಗೆ ಅಂಟುಕೊಂಡೆವೆಂದರೆ ನಮ್ಮ ದೇಹ- ಮನಸ್ಸನ್ನು ಅದಕ್ಕೆ ಸಂಪೂರ್ಣ ಅರ್ಪಿಸಿಬಿಟ್ಟಂತೆ. ಮನಸ್ಸು ಇನ್ಯಾವ ಧನಾತ್ಮಕವಾದ ಸಾಧ್ಯತೆಗಳ ಕಡೆಗೂ ವಿಚಲಿತವಾಗದಂತೆ ಚಟವನ್ನು ಆದರಿಸಿ, ಆರಾದಿಸುತ್ತಾ ಒಂದು ರೀತಿಯ ಧ್ಯಾನಸ್ಥ ಸ್ಥಿತಿಯಲ್ಲಿದ್ದುಬಿಡುತ್ತದೆ! ಯಾವ ಸಕಾರಾತ್ಮಕ ಬದಲಾವಣೆಗಳಿಗೂ ಗಮನವೀಯದ ಮಹಾನ್ ಧ್ಯಾನಸ್ಥಸ್ಥಿತಿಯದು!
ಮಾತ್ರೆಗೂ ಆತಂಕಕ್ಕೂ ಬಹಳ ಗಟ್ಟಿ ಸಂಬಂಧವಿದೆ. ಕಾಯಿಲೆಯಿದ್ದಾಗ ಓ ನನಗೆ ಅದಿದೆಎಂಬ ಆತಂಕವಾಗುವುದೆಂದಿಟ್ಟುಕೊಳ್ಳೋಣ. ಆಗ, ಕಾಯಿಲೆ ಹಾಗೂ ಆತಂಕಕ್ಕೆಂದು ಮಾತ್ರೆ ತೆಗೆದುಕೊಳ್ಳುತ್ತಿದ್ದರೂ, ಅಪ್ಪಿ ತಪ್ಪಿ ಮಾತ್ರೆ ತಪ್ಪಿಸಿದಾಗ ಅದಕ್ಕಿಂತ ದುಪ್ಪಟು ಆತಂಕವಾಗುತ್ತದೆ. ಅದನ್ನು ಮತ್ತೆ ತಪ್ಪಿಸಲು ಮಾತ್ರೆಯೇ ಬೇಕಾಗಿ ಬಿಡುತ್ತದೆ. ಒಟ್ಟಾರೆ, ಕಾಯಿಲೆಗೆ ಮಾತ್ರೆಯಾದರೆ ಅದು ಬೇರೆಯ ವಿಚಾರ. ಆದರೆ ಈ ಆತಂಕ-ಮಾತ್ರೆಗಳು ಒಟ್ಟಾದವೆಂದರೆ ಅದನ್ನು  ಬೇರ್ಪಡಿಸುವುದು ಸುಲಭದ ಮಾತಲ್ಲ. ರೋಗ ತಂದುಕೊಳ್ಳುವ ಸಂಪೂರ್ಣ ಶಕ್ತಿ ಮಾತ್ರ ನಮ್ಮಲ್ಲಿದೆ. ಆದರೆ ಅದನ್ನು ಗುಣ ಪಡಿಸುವ ಶಕ್ತಿ ಕೇವಲ ಮಾತ್ರೆಗಳಲ್ಲಿದೆಎಂದು ನಮ್ಮಲ್ಲಿರುವ ಬಲವಾದ ನಂಬಿಕೆಯ ಶಕ್ತಿಯನ್ನೂ ಮತ್ತು ಅದು ರೋಗಗ್ರಸ್ತ  ದೇಹದ ಸ್ಥಿತಿಯನ್ನು ಮತ್ತೂ ಹದಗೆಡಿಸುವಷ್ಟರ ಮಟ್ಟಿಗೆ ಮೂಡಿಸುವ ಅಸಹಾಯಕತೆಯನ್ನು ಅನುಭವಿಸಿಯೇ ನೋಡಬೇಕು!

ಹ್ಞಂ, ನನ್ನ ಹಾಗೂ ಗುಳಿಗೆಗಳ ನಂಟು ಈ ಪಾಟೀ ಬಲವಾಗಿದ್ದ ಸಂದರ್ಭದಲ್ಲಿ ನಾ ಕಂಡ ಕನಸುಉಲ್ಲೇಖಿಸಲು ಬಹು ಯೋಗ್ಯವಾದುದು ಎಂದೆನಿಸುವುದು. ಅದರ ಸಾರಾಂಶ ಹೀಗಿತ್ತು- ನಾನು ತೆಗೆದು ಕೊಳ್ಳುವ ಗುಳಿಗೆಗಳೆಲ್ಲಾ ನನ್ನ ಮುಂದೆ ನರ್ತಿಸುವುವು! ಇಷ್ಟೇ ಇಷ್ಟುದ್ದವಿರುವ ಗುಳಿಗೆಗಳು ನನ್ನನ್ನು ಅವುಗಳ ಆಕಾರವನ್ನಾಗಿಸಿ, ಅವು ಕ್ಷಣದಿಂದ ಕ್ಷಣಕ್ಕೆ ಬೃಹತ್ತಾಗಿ ಬೆಳೆದು ನನ್ನನ್ನು ಅಣಕಿಸುವವು. ನಂತರ ಸನ್ನಿವೇಶ ಬದಲಾದಂತಾಗಿ ಅವು ನನ್ನ ವ್ಯಂಗ್ಯವಾಡುವುದನ್ನು ಬಿಟ್ಟು ತಮ್ಮ ಆಕಾರ ಕ್ಷೀಣಿಸಿ ಕೊಳ್ಳುತ್ತಾ ಸಾಗುವವು. ಅವು ಕೃಶವಾಗುತ್ತಿದ್ದಂತೆ ನನ್ನ ಕುರಿತ ಆಶಯ ಹೀಗೆ ಮೂಡುವುದು- ಬಿಟ್ಟು ಬಿಡು ನಮ್ಮನ್ನು, ತೊರೆದು ಬಿಡು.. ನಮ್ಮೊಳಗಿನ ಶಕ್ತಿಯೆಲ್ಲಾ ನಿನ್ನಲ್ಲೇ ಇದೆ. ಮನಗಾಣು.. ಸಾಕೀ ಅವಲಂಬನೆ.

ಅದು ಸಾಕಷ್ಟು ಉದ್ದವಾಗಿದ್ದ ಕನಸು. ನನಗೆ ಅಲ್ಲಿಯವರೆಗೆ ಚುಟುಕು ಕನಸುಗಳ ದರ್ಶನವಾಗಿತ್ತೇ ವಿನಃ ಹೀಗೆ ಉದ್ದುದ್ದದ ಕನಸು, ಅದೂ ನನ್ನದೇ ಸಮಸ್ಯೆಯನ್ನು ನೇರವಾಗಿ ವಿಶ್ಲೇಷಿಸಿದ ರೂಪಕ ಬಂದೊದಗಿದ್ದು ಇದೇ ಮೊದಲು. ನಾನು ಆ ಕನಸಿನಿಂದ ಪ್ರಭಾವಿತಳಾಗಿದ್ದು ನಿಜವೇ ಆದರೂ ಅದನ್ನು ತತ್ತಕ್ಷಣವೇ ಕಾರ್ಯ ರೂಪಕ್ಕೆ ತರಲು ಹಿಂದೇಟು ಹಾಕಿದೆ. ನನ್ನೊಲುಮೆಯ ಗುಳಿಗೆಯನ್ನು ಅಷ್ಟು ಬೇಗ ಹಾಗೆ ಧೈರ್ಯವಾಗಿ ತೊರೆಯಲು ಮನಸ್ಸಾಗಲಿಲ್ಲವೇನೋ. ಆದರೂ ಒಂದಂತೂ ಹೇಳಲೇಬೇಕು, ಮನಸ್ಸಿನ ಮಾತನ್ನು ನಾವೇ ಹುಟ್ಟಿಸಿಕೊಂಡಿರುವ ವಿವರಣೆಗಳಿಂದ ದಿಕ್ಕರಿಸಿ ಬಿಡಬಹುದು. ಆದರೆ ವಿವರಣೆಗಳು ಅಸಮರ್ಪಕವಾದಾಗ ಮನಸ್ಸಿನ ಸಲಹೆಯಿಂದ ಹೆಚ್ಚು ದಿನ ತಪ್ಪಿಸಿ ಕೊಳ್ಳಲಾಗದು. ನನ್ನ ಸ್ಥಿತಿ ಕತ್ತಲಿನಲ್ಲಿರುವಾಗ ದೀಪವ ಧಿಕ್ಕರಿಸಿದಂತೆಆಗಿತ್ತಷ್ಟೆ! ಕ್ರಮೇಣ ನಾನು ದೀಪಕ್ಕೆ ನನ್ನ ಕೋಣೆಯೊಳಕ್ಕೆ ಅನುವು ಮಾಡಿ ಕೊಟ್ಟೆ!

ಅಮ್ಮಾ, ನಾನು ನಾಳೆಯಿಂದ ಮಾತ್ರೆ ತಗೋಳೋದಿಲ್ಲ", ಧೈರ್ಯವ ಒಗ್ಗೂಡಿಸಿಕೊಂಡು ಹೇಳಿದೆ. ಅಂದೇ ನನಗನಿಸಿದ್ದು- ಧೈರ್ಯವು ಭಯದ ನೆರಳಲ್ಲೇ ಬೆಳೆಯುತ್ತಿರುವ ಮಗುವೂ ಆಗಿರಲು ಸಾಧ್ಯವೆಂದು. ಮುಂದಿನ ಕತ್ತಲಿಂದ ಹೊರ ಬರುವ ನನ್ನೆಲ್ಲಾ ದಿಟ್ಟ ಹೆಜ್ಜೆಗಳನ್ನು ನಾನು ಪೋಷಿಸಿದ್ದು ನನ್ನನ್ನು ಪ್ರೀತಿಯಿಂದ ಆವರಿಸಿದ್ದ ಭಯದ ಛಾಯೆಯಲ್ಲಿಯೇ!
ಅವತ್ತು, ಒಂದಿಡೀ ದಿನ ಮಾತ್ರೆಯಿಲ್ಲದೆ ಕಳೆದ ನನ್ನ ಸ್ಥಿತಿ ತಾನು ಎಂದೆಂದಿಗೂ ತನ್ನದೇ ದೇಹದ ಭಾಗದಂತೆ ಇರಿಸಿಕೊಂಡಿದ್ದ ಊರುಗೋಲನ್ನು ತೊರೆದು ಊರು ಸುತ್ತಿದ ವೃದ್ಧೆಯ ರೀತಿಯಂತಾಗಿತ್ತು. ಹಾಗೇ ಮಾತ್ರೆ ತೊರೆದ ದಿನಗಳು ಕಳೆದಂತೆ ನಾನು ಕಂಡು ಕೊಂಡಿದ್ದು- ಆಕೆ ನಿಜವಾದ ವೃದ್ಧೆಯಲ್ಲ. ಊರುಗೋಲುಆಕೆಯನ್ನು ವೃದ್ಧೆಯನ್ನಾಗಿಸಿತ್ತು... ! 

(¸À±ÉõÀ)


(Image Courtesy- Web)