Tuesday, February 14, 2012

ಅಂಕಣ- ಕಂಡೆ ನಾನೊಂದು ಕನಸು-೨ (ಅಂತರ್ಗಮನ )

‘ಸಿಹಿಗಾಳಿ’ ಮಾಸ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಅ೦ಕಣ ಬರಹ - ‘ಕಂಡೆ ನಾನೊಂದು ಕನಸು’ವಿನ ಎರಡನೇ ಭಾಗವನ್ನು ಪ್ರಕಟಿಸುತ್ತಿದ್ದೇನೆ. ಓದಿ ಪ್ರೊತ್ಸಾಹಿಸುವೆರೆ೦ದು ನಂಬುವೆ...... :)



ಹಿ೦ದಿನ ಬರಹದಲ್ಲಿ ಬರೆದ೦ತೆ, ಬೆಳಕಿನ ತೀಕ್ಷ್ಣ ಕಿರಣ ಕಣ್ಣ ಮುದೆ ಸರಿದು ಪ್ರಶಾತತೆಗೆ ಎಡೆ ಮಾಡಿಕೊಟ್ಟ ಘಟನೆ ಸರಿದು ತಿಂಗಳುಗಳೇ ಉರುಳಿದ್ದವು. ನನಗೇಕೋ ನನ್ನ ನಿರಾಸಕ್ತಿಅನುಪಯುಕ್ತವೂ, ಜಡವೂ ಎನಿಸಲಾರಂಭಿಸಿ ಅದುವೂ ಬೇಸರ ಬಂದು ಹೋಗಿತ್ತು. ಖಾಯಿಲೆಗೆ ಮಾತ್ರ ಔಷಧವಲ್ಲ ಸ್ಥಿತಿಗಳಿಗೂ ಔಷಧವಿದೆಎಂಬುದನ್ನು ಬಲವಾಗಿ ನಂಬಿದ ಜಗತ್ತು ನೀಡಿದ ಔಷಧಗಳ ಚಾಚೂ ತಪ್ಪದೆ ತೆಗೆದುಕೊಳ್ಳುವುದಾಗಿತ್ತು. ಪ್ರತಿ ಬಾರಿಯೂ ಆಲೋಚನೆಯೊಂದು ಪುಟಿದು ನೀರಿನೊಳಗೆ ಕರಗುತ್ತಿತ್ತು - ಮನಸ್ಸು ಚಿಂತೆ ಮಾಡುತ್ತದೆ. ಖಿನ್ನವಾಗುತ್ತದೆ. ದೇಹವ ಪ್ರಚೋಧಿಸುತ್ತದೆ. ದೇಹ ಜಡವಾಗುತ್ತದೆ, ಬಲಹೀನ ವಾಗುತ್ತದೆ, ರೋದಿಸುತ್ತದೆ. ಔಷಧ ಜಡತೆಯ, ಆಲಸ್ಯವ ದೂರ ಮಾಡಿ ಮನಸ್ಸಿಗೆ ಎದುರೇಟು ನೀಡಬಹುದು ಆಹಾ! ನೀ ಹೇಳಿದಂತೆ ಇನ್ನು ನಡೆಯೆನುಎನಿಸಬಹುದು. ನಂತರದಲ್ಲೇ ಮನ ಚಿಗುರಿ ಜೀವನದ ಬಗೆಗೆ 'ಏಕೆ'ಗಳ ಶುರುವಿಟ್ಟರೆ ನನ್ನ ಮಾತ್ರೆಯ ಗೋಲಿ ಅದನ್ನುತ್ತರಿಸುವುದೇ?”

ನನ್ನ ಪಾಲಿಗೆ ಔಷಧವೂ ಟಾರ್ಚ್ ಉಪಮೆಯಂತೆಯೇ ಗೋಚರಿಸಲಾರಂಭಿಸಿತ್ತು. ಆದರೆ ಅದರ ತೊರೆಯುವ ಕುರಿತು ನಾನೇನು ಯೋಚಿಸಲಿಲ್ಲ. – ಬದುಕಿನ ಜವಾಬ್ದಾರಿಗಳ ಜವಾಬ್ದಾರರೆಂದು ಕರೆಸಿಕೊಳ್ಳುವವರ ಕೈ ಗಿಟ್ಟು ಅವರ ಸಮ್ಮತಿಯ ಕಾಯುವುದು ನಮ್ಮ ಜಾಯಮಾನವಲ್ಲವೇ?” ನನ್ನಲ್ಲಿ ಒಂದು ಪ್ರಶ್ನೆಯಿದೆ ಎಂದೂ ತಿಳಿಯಲಸಾಧ್ಯವಾದ ವೃತ್ತಿಪರರ ಕೈಗೆ ಬದುಕು ಕೊಟ್ಟು ನೀ ಹೇಳಿದಂತೆ ನಡೆಯುವೆಎನ್ನುವುದರಲ್ಲೇ ನನಗೂ ಸಮಾಧಾನವಿದ್ದಂತಿತ್ತು - ಚಿಕ್ಕವರು ದೊಡ್ಡದರ ಬಗೆಗೆ ತಲೆ ಕೆಡಿಸಿಕೊಳ್ಳಬಾರದೆಂದು ತಿಳಿ ಹೇಳುತ್ತಾ, ಹಾಗೆಯೇ ಜವಾಬ್ದಾರಿಯೆಂಬುದು ಬಹು ದೊಡ್ಡ ಕರ್ತವ್ಯವೆಂದು ಬಿಂಬಿಸುತ್ತಾ, ಆದರೆ ಅದನ್ನು ಮಾತ್ರ ನಾವು ಹೊತ್ತುಕೊಳ್ಳಲೆಬೇಕೆಂದು ಆಜ್ಞಾಪಿಸಿ ಬಹಳ ಸಾರಿ ವಿರೋಧಾಭಾಸವ ಮೆರೆಯುವ ಸಮಾಜದ ಕಟ್ಟುನಿಟ್ಟು ಪರಿಪಾಲಕಳಲ್ಲದಿದ್ದರೂ ಅಪ್ರಜ್ಞಾಪೂರ್ವಕವಾಗಿ ಹೊತ್ತ ಸಾಮಾಜಿಕ ಜವಾಬ್ದಾರಿಯಕಾರಣದಿಂದಲೋ ಏನೋ ನನಗೆ ಹಾಗೆ ಸಮ್ಮತಿಗೆ ಕಾಯುವುದರಲ್ಲೇ ಯಾತನಾದಾಯಕವಾದ ಮುದವಿತ್ತೆನಿಸುತ್ತದೆ!

ಬೇಸರದಲ್ಲೂ ಒಂದು ಅನುಭೂತಿಯಿರಬೇಕು! ಏಕೆಂದರೆ ಅದುವೂ ಅತಿಯಾದಾಗ ಬೇಸರವೇ ಆಗುತ್ತದೆ! ಹೀಗೆ ಬೇಸರವಾಗಿ ಒಮ್ಮೆ ಸುಮ್ಮನೆ ಕುಳಿತು ನನ್ನ ಆಲೋಚನೆಯನ್ನೆಲ್ಲಾ ಪರಿಶೀಲಿಸಲು ಶುರುವಿಕ್ಕಿದೆ – ಯಾವುದು ಹೇಗೋ ತಿಳಿಯದು. ಈ ಬೆಸರ ಮಾತ್ರ ಖಂಡಿತ ಅನಂತವೇ. ಅದಕ್ಕೆ ಆರಂಭ ಎಲ್ಲೋ ಆಗುತ್ತದೆ ಆದರೆ ಕಡೆ ಎಂಬುದು ಶತಾಯಗತಾಯ ಲಭಿಸಲೇ ಒಲ್ಲದು. ನಾವು ಬೇಸರದಿಂದ ಹೊರ ಬರುವುದರಿಂದ ಅದು ಅನಂತವೆನ್ನಲು ಸಾಧ್ಯವಾಗದು. ಕಾರಣ, ನಾವು ಅಲ್ಲಿ ಬೆಸರವ ಮುಕ್ತಾಯ ಮಾಡುತ್ತಿಲ್ಲ ಬದಲಿಗೆ ಮುಂದೂಡುತ್ತಿದ್ದೇವೆ. ಮತ್ತೆ ಮತ್ತೆ ಸವಿಯಲು,ಅನುಭವಿಸಲು.. ದಿಟವಲ್ಲವೇ?” ಈ ಎಲ್ಲಾ ಲಹರಿ ನನಗೆ ಆಗ ಹೊಳೆದದ್ದಲ್ಲವೆಂದು ಈಗಾಗಲೇ ತಿಳಿದಿರಬೇಕಲ್ಲವೆ? ಹ್ಞಾಂ, ನಾನು ಆಲೋಚನೆಯ ಪರಿಶೀಲಿಸುತ್ತಾ ಕಂಡುಕೊಂಡಿದ್ದು ಒಂದೇ ಅವೆಲ್ಲವೂ ನನ್ನ ವಿರುದ್ಧವೇ ಇವೆ. ಇರಲೇಬೇಕಿದೆ. ಏಕೆಂದರೆ ನಾನು ಅದರಂತೆಯೇ ಇದ್ದೇನೆಎಷ್ಟೇ ಬಾರಿ ನಾ ಅವನ್ನು ತಿರುಚಲು ಹೊರಟರು ಅವು ನನ್ನನ್ನೇ ತಿರುಚುವವು ಮತ್ತು ಮತ್ತೆ ಮತ್ತೆ ಆರ್ಭಟಿಸುತ್ತಾ ಸವಾರಿ ಮಾಡುವವು. ಕಡೆಗೆ ನಾನು ಹತಾಶಳಾಗಿ, ಶರಣಾಗಿ ಹೊದ್ದು ಮಲಗಿ ಬಿಡುತ್ತಿದ್ದೆ. ತಿಳಿಯದೇ ನೀಡಿದ ಆಮಂತ್ರಣದಿಂದಲೋ, ಸ್ವಪ್ರೇರಣೆಯಿಂದಲೋ ಅವು ಕನಸಿನಲ್ಲೂ ದಾಂಗುಡಿಯಿಡುವವು.!

ಈ ಪೈಶಾಚಿಕ ಕನಸುಗಳು ಬರುಬರುತ್ತಾ ನನ್ನ ಮೇಲಿನ ಕರುಣೆಯಿಂದಲೋ ಏನೋ ಎಂಬಂತೆ ತಮ್ಮ ರೌದ್ರತೆಯ ಪ್ರದರ್ಶನವ ತೊರೆದು ತಣ್ಣಗಾದವು. ಕ್ರಮೇಣ ಮಾಯವೇ ಆಗಿ ಹೋದವು. ಹಲವು ದಿನಗಳ ಕಪ್ಪು ಕತ್ತಲೆಯ ಗಾಢ ನಿದ್ರೆಯನ್ನು ಸೀಳಿ ಹಿಂದಿನ ಪೈಶಾಚಿಕ ಕನಸಿನ ದಿಗಿಲಿಗೆ ಪರ್ಯಾಯವ, ಸಮಾಧಾನವ ಒದಗಿಸಲು ಬಂದಂತೆ ಆಗಮಿಸಿದ್ದು ಆ ಕನಸು’. ಅದರ ಕಿರು ನೋಟ ಇಂತಿಷ್ಟು- ನಾನು ನನ್ನ ಹಿಂದೆ ಸರಿದ ಬಣ್ಣ ಬಣ್ಣದ ಕೊಡೆಯಿಂದ ಆಕರ್ಷಕಳಾಗಿ ಅದನ್ನು ಹಿಂಬಾಲಿಸುತ್ತೇನೆ. ಹಚ್ಚಹಸುರಿನ ವಾತಾವರಣದಲ್ಲಿದ್ದ ನನ್ನನ್ನು ಅಲ್ಲಿಂದ ಮುಂದೊಯ್ದ ಕೊಡೆ ಬಂಜರು ಬರ ಭೂಮಿಯಲ್ಲಿ ಮಾಯವಾಗಿ ನನ್ನನ್ನು ಹತಾಶೆಗೆ ಕೆಡವುತ್ತದೆ. ಅದು ಸರಿದ ಜಾಗದಿಂದ ಬರುವುದು ಈ ವಾಕ್ಯಗಳು ನೀನು ಓಡಿದೆ,ಓಡಿದೆ... ಅಂದು ಆ ಗಳಿಗೆಯಲ್ಲಿ ಅಗತ್ಯವೇ ಇಲ್ಲದ ವಸ್ತುವಿಗಾಗಿ! ಮಳೆಯಾಗಲೀ ಬಿಸಿಲಾಗಲೀ ಇಲ್ಲದಿದ್ದ ಜಾಗದಲ್ಲಿ ಒಂದು ಕೊಡೆಯ ಹಿಂದೆ! ಆ ಕ್ಷಣ ನಿನಗೆ ಒದಗಿಸಲಾಗಿದ್ದ ಸಂಪತ್ತನ್ನು ನೀನು ಮನಗಾಣಲೇ ಇಲ್ಲ, ಈಗ ನೀನು ಇಲ್ಲಿದ್ದೀಯ. ತನ್ನ ಒಣ ಹುಲ್ಲಿನಷ್ಟೇ ಬರಡಾದ ಆಲೋಚನೆಗಳನ್ನು ಆಹ್ವಾನಿಸುವ ಖಾಲಿಖಾಲಿ ಜಾಗದಲ್ಲಿ ಕೈ ಚೆಲ್ಲಿ ಕುಳಿತಿದ್ದೀಯ

ಇದರರ್ಥ ಅಂದಿಗೆನಿರಬಹುದೆಂದು ಇಂಧು ಚಿಂತಿಸಿದರೆ ಅದರ ಮಗ್ಗುಲುಗಳೂ ನನ್ನೆದುರು ತೆರೆದುಕೊಳ್ಳುವವು.. ಕನಸು ನನ್ನ ವರ್ತಮಾನವಲ್ಲ. ನನ್ನ ವರ್ತಮಾನ ಹೇಳ ಹೊರಟ ಭವಿಷ್ಯ. ಋಣಾತ್ಮಕತೆಯನ್ನೇ ತನ್ನ ಸ್ವಾಭಾವಿಕ ಲಯವೆಂದು ಭಾವಿಸುವ ಮನ ಸುಲಭದಾದುರೆಡೆಗೆ ಆಕರ್ಷಿತವಾಗಿ ಓಡುತ್ತಿರುತ್ತದೆ. ಸುಲಭವಾದುದೇನು? ನಾನು ಕೆಲಸಕ್ಕೆ ಬಾರದವಳುಎಂಬುದೇ ಅಲ್ಲವೆ? ಕೆಲಸಕ್ಕೆ ಬಾರದವಳೆಂದಮೇಲೆ ಯಾವ ಕೆಲಸಕ್ಕೂ ಕೈ ಹಾಕುವ ಗೋಜಿಗೇ ಹೋಗುವುದಿಲ್ಲ ನೋಡಿ. ಸ್ವ ಬದಲಾವಣೆಯ ಅವಕಾಶಗಳ ತೊರೆದು ಈ ಸರಳ ರೀತಿಯ ಹಿಂದೋಡಿದಾಗ ಅದು ನಿಜಕ್ಕೂ ಕೆಲಸಕ್ಕೆ ಬಾರದ ಜಾಗಕ್ಕೆ ತಾನೇ ಕರೆದೊಯ್ಯುವುದು? ಬಹುಷಃ ಆ ದಿನದ ಮಟ್ಟಿಗೆ ಅದರರ್ಥವದೇ ಇತ್ತೇನು. ಈ ಭವಿಷ್ಯದ ತಿಳಿವು ನನಗಾಗಿದ್ದು ಮಾತ್ರ ಆ ಕನಸು ಭೂತಾದಿ ಭೂತಕಾಲದ ನೆನಪಾಗಿ ತೆರೆದುಕೊಂಡಾಗಲೇ. ಅಂದೇ ತಿಳಿದಿದ್ದರೆ ನಾನು ಭವಿಷ್ಯವ ಮನಗಂಡು ಏನೋ ಆಗುತ್ತಿದ್ದೆ ಎಂದಲ್ಲ. - ಆಗುಹೋಗುಗಳ, ಆಶಾದಾಯಕವಲ್ಲದ ಸಂದರ್ಭಗಳ ಎದುರಿಸುವ ಮನೋಬಲವಿಲ್ಲದ ಮನಸ್ಸಿಗೆ ಅಂತಹ ಭವಿಷ್ಯ ತೋರುವುದು ಅಪಾಯಕಾರಿಯೇ ಆಗಿದೆ. ಬದುಕಿನ ಸತ್ಯಗಳನ್ನು ಕ್ರೂರಾತಿ ಕ್ರೂರವಾಗಿ ಕಾಣುವ ಮನಸ್ಸು ಯಾವುದನ್ನೂ ಸ್ವೀಕರಿಸಲಾರದು. ಅಷ್ಟಕ್ಕೂ ಭವಿಷ್ಯವೆಂಬುದೇನು ಮಾಯಾ ಕನ್ನಡಿಯಲ್ಲಿ ತೋರುವ ಮುಂದಿನ ಸನ್ನವೇಶಗಳ ದರ್ಶನವೇ? ಅದು ಇಂದಿನ ನಾಳೆ. ಇಂದನ್ನು ಹೀಗೆಯೇ ಕಳೆದರೆ ನಾಳೆ ಏನಾಗುತ್ತದೆಂಬುದರ ಅರಿವು. ಈಗಾಗಲೇ ರೂಪಿಸಲ್ಪಟ್ಟಿರುವ ಸಾರಾಂಶವ ಎಲ್ಲ ಜೀವಿಗಳಿಗೂ ಭೂತ, ವರ್ತಮಾನ, ಭವಿಷ್ಯ ಗಳೆಂದು ವಿಂಗಡಿಸಿ ಹಂತ ಹಂತವಾಗಿ ವಿತರಿಸುವ ಪ್ರಕೃತಿಯ ಯೋಜನೆಯಲ್ಲೊಂದಂಶ

ಏರು ಧನಿಯೂ ನಡುಕ ಹುಟ್ಟಿಸುವಷ್ಟರ ಮಟ್ಟಿಗೆ ಸುಕ್ಷ್ಮಾತಿ ಸೂಕ್ಷ್ಮಳಾದವಳಿಗೆ ಬಂದ ಆ ಕನಸೂ, ಕೇಳಿಸಿದ ಧನಿಯಲ್ಲಿದ್ದ ವಿಶ್ವಾಸ, ಗಾಂಭೀರ್ಯಗಳು ಅವಕ್ಕಾಗಿಸಿ ಮತ್ತಷ್ಟು ಪರಿಸ್ಥಿತಿಯ ಕಗ್ಗಂಟೇ ಆಗಿಸಿದವು,,,,

(ಸಶೇಷ)

(Image- Web)

Tuesday, January 31, 2012

‘ಕಂಡೆ ನಾನೊ೦ದು ಕನಸು’- ಅ೦ಕಣ ಬರಹ

ಆತ್ಮೀಯರೇ,
‘ಸಿಹಿಗಾಳಿ’ ಮಾಸಿಕದಲ್ಲಿ ಪ್ರಕಟವಾಗುತ್ತಿರುವ ಅಂಕಣ ‘ಕಂಡೆ ನಾನೊ೦ದು ಕನಸು’ ವಿನ ಬರಹಗಳನ್ನು ಕ೦ತಿನಲ್ಲಿ ಇಲ್ಲಿ ಪ್ರಕಟಿಸಲಿದ್ದೇನೆ.. ನಿಮ್ಮ ಪ್ರೋತ್ಸಾಹ ಹೀಗೇ ಮು೦ದುವರೆಯುವುದೆ೦ದು ಆಶಿಸುವೆ :)

೧. ಅಂತರ್ಗಮನ


ದಿನಗಳು ಬರುತ್ತವೆ- ಹೋಗುತ್ತವೆ. ಕೆಲವಂತೂ ಹೆಸರೂ ನೆನಪಿಡದಷ್ಟು ಸಾಮಾನ್ಯ ದಿನಗಳು. ಈ ದಿನಗಳ ಓಟದ ನಡುವೆ ಒಂದೊಂದು ಎಂತಹುದೋ ಒಂದು ವಿಶೇಷತೆಯನ್ನೋ, ವಿಕಾರವನ್ನೋ, ವಿಭಿನ್ನತೆಯನ್ನೋ, ಹೊತ್ತು ಬರುತ್ತವೆ. ಅದಕ್ಕೆಂದೇ ಅವು ಅಚ್ಚಾಗಿ ಉಳಿದು ಬಿಡುತ್ತವೆ. ಅದು ಅಂತಹುದೇ ದಿನ! ನಾನೀಗ ಅದನ್ನು ‘ವಿಭಿನ್ನ’, ‘ವಿಶಿಷ್ಟ’ ಎಂಬ ಹಣೆ ಬರಹದಡಿ ದಾಖಲು ಮಾಡಿರುವ, ಅಂದಿನ ಪಾಲಿನ ‘ವಿಚಿತ್ರ’ ದಿನ! ಅಂದಾದುದನ್ನು ನಾನು ‘ಅನುಭವ’ ಎನ್ನಲಾರೆ, ‘ಅನುಭೂತಿ’ ಎಂದು ಹೆಸರಿಸಲಾರೆ. ಏಕೆಂದರೆ ಕೆಲವು ‘ಘಳಿಗೆ’ಗಳಿಗೆ ಹೆಸರಿರುವುದಿಲ್ಲ, ಅವು ಬದುಕಿನ ‘ವಿಲಕ್ಷಣ’ತೆ ಗೆ ಸಾಕ್ಷಿಗಳಷ್ಟೇ!

ನಾನು ನನ್ನನ್ನು ಹೊತ್ತ ಬಸ್ಸಿನಲ್ಲಿ ಪ್ರಶ್ನೆಗಳ ಹೊತ್ತು ಪಯಣಿಸುತ್ತಿದ್ದೆ. ಹೋಗುತ್ತಿದ್ದದ್ದು ಉತ್ತರವನ್ನರಿಸಿ ಮಾನಸಿಕ ತಜ್ಞರ ಬಳಿ. ‘ಹೋಗುವಂತಹುದೇನಿತ್ತು?’ ಎನಿಸಬಹುದೇನೋ. ನಾನೀಗ ಹೇಳುವೆ, “ಎಲ್ಲಿಯೂ ಹೋಗಲು ತೋಚದೇ ಅಲ್ಲಿ ಹೋದೆ,’”ನೆಂದು. ಕಾರಣ- ಆಂತರಿಕ ಪಯಣದಿಂದ ಸಿಗಬಹುದಾದ ಉತ್ತರವ ಬಾಹ್ಯ ಪ್ರಯಾಣಗಳಿಂದ ಪಡೆಯಲು ಅಸಾಧ್ಯ! ಆದರೆ ಪ್ರತೀತಿಯಂತೆ ವಿವರಿಸುವುದಾದರೆ, ಆ ‘ಹೊರಗಿನ’ ಪ್ರಯಾಣ ಮಾತ್ರ ಒಳಗಿನ ‘ಪ್ರಯಾಣ’ಕ್ಕೆ ಹಸಿರು ನಿಶಾನೆ ತೋರಿಸಲು ಹೊರಟಂತಿತ್ತು ಎನ್ನಬಹುದೇನೋ. ವಿಷಯಕ್ಕೆ ಬರುವುದಾದರೆ, ನಾನು ೧೬ನೇ ವಯಸ್ಸಿನಲ್ಲಿ ಬದುಕು ಏಕೆ ಆಸಕ್ತಿಕರವಾಗಿರಬೇಕೆಂಬುದರ ಬಗೆಗೇ ಆಸಕ್ತಿ ಕಳೆದುಕೊಂಡು ಕಳವಳಿಸುತ್ತಿದ್ದೆ. ಆ ಸ್ಥಿತಿಯ ಕಾರಣವ ಹೊರ ಜಗತ್ತಿನ ವಿಷಯಗಳಲ್ಲಿ ಹುಡುಕ ಹೊರಟರೆ ಉತ್ತರ ಕಷ್ಟ ಸಾಧ್ಯ. ಏನೆಂದರೆ- ‘ನಾವೆಲ್ಲರೂ ಮಕ್ಕಳಿಗೆ ಪ್ರಪಂಚದ ವಿಚಾರಗಳ ಬಗೆಗೆ, ವಿಕಾರಗಳ ಬಗೆಗೆ, ಪರಿಕಲ್ಪನೆಗಳ ಬಗೆಗೆ ತಿಳಿಸಿಕೊಡುತ್ತೇವೆ. ಅದನ್ನು ಹೀಗೆ ಹೀಗೇ ಮಾಡಬೇಕು ಎಂದು ಹೇಳಿ ಕೊಡುತ್ತೇವೆ. ಆದರೆ ಅದೇಕೆ ಹೀಗೇ ಇರಬೇಕು ಎಂಬ ಗೊಂದಲ ಅವರಲ್ಲಿ ಮೂಡಿದರೆ ಅದಕ್ಕೆ ಸ್ಪಷ್ಟನೆಗಳಿಲ್ಲ! ಅದರರ್ಥ ನಮ್ಮಲ್ಲಿ ಉತ್ತರವಿಲ್ಲ ಎಂದಲ್ಲ. ಅದು ಉತ್ತರವ ಬಯಸಿದ ವ್ಯಕ್ತಿಯ ಪಾಲಿಗೆ ಎಷ್ಟು ಸಮರ್ಪಕ ಎಂಬುದು ಮುಖ್ಯವಾಗುತ್ತದೆ. ಕಾರಣ, “ಸಮರ್ಪಕ ಉತ್ತರವಿರುವುದು ಪ್ರಶ್ನೆ ಕೇಳಿಸಿಕೊಂಡವನಲ್ಲಲ್ಲ, ಪ್ರಶ್ನೆ ಕೇಳಿದವನಲ್ಲಿ!” ಇಂತಹ ಉತ್ತರವೊಂದು ನನ್ನಲ್ಲೇ ಅಡಗಿದೆ ಎಂಬ ಕುರುಹೂ ಇಲ್ಲದ ನಾನು ಒಳಗಿನ ಕತ್ತಲೆಯ ಹೊರಗಿಗೂ ವಿಸ್ತರಿಸಿಕೊಂಡಿದ್ದೆ!

ನಾನಿಷ್ಟೆಲ್ಲಾ ಹೇಳಿ ನನಗಾದ ಕ್ಷಣ ಮಾತ್ರದ ‘ವಿಲಕ್ಷಣತೆ’ಯ ವಿವರಿಸಿದರೆ ‘ಅದೇನು ಅಂತಹುದೇ?’ ಎಂದೆನಿಸಿದರೆ ಅದು ಸಹಜವೇ – “ಕೆಲವು ಘಳಿಗೆಗಳೇ ಹಾಗೆ, ಅನುಭವಿಸ ಹೊರಟರೆ ಬೃಹತ್ತಾಗಿಯೂ ವಿವರಿಸ ಹೊರಟರೆ ಯಕಃಚಿತ್ ಆಗಿಯೂ ಕಾಣಿಸಿ ಬಿಡುತ್ತವೆ.” ಹಣೆಪಟ್ಟಿ ಅಂಟಿಸುವುದೇ ಆದರೆ ಅದನ್ನು ಜೀವನದ ಹಲವು illusionಗಳಲ್ಲೊಂದೆಂದು ಪರಿಗಣಿಸಬಹುದು. ಪ್ರಯಾಣ ಮುಂದುವರಿದಂತೆ ನಿದ್ದೆ ಆವರಿಸಿದಂತಾಗಿ ಅಮ್ಮನ ಹೆಗಲ ಮೇಲೆ ಒರಗಿದ್ದೆ. ಸಹಜವಾಗೇ ಹೇಗೋ, ಎಲ್ಲಿಯೋ ಹೋದಂತೆ ಕವಿದಿದ್ದ ಮಂಪರನ್ನು ಅಸಹಜತೆಯೊಂದು ಥಟ್ಟನೆಬ್ಬಿಸಿತು. ಒಂದು ಅತಿ ತೀಕ್ಷ್ಣವಾದ ಕಿರಣವ ನನ್ನತ್ತಲೇ ಗುರಿಮಾಡಿ ಎಸೆದಂತೆ ಬೆಳಕು ಮುಚ್ಚಿದ ಕಣ್ಣ ಮುಂದೆ ಅದರ ವೇಗದಲ್ಲಿಯೇ ಹಾದು ಹೋಯಿತು. ದೇಹದ ಅಂಗಾಂಗಗಳ ಕಸುವನ್ನೆಲ್ಲಾ ಉಪಯೋಗಿಸಿ ಕಣ್ಣು ಬಿಟ್ಟವಳಂತೆ ನಾನು ಪಟ್ಟನೆದ್ದು ಕುಳಿತು ಆಗಿದ್ದನ್ನು ಅರುಹಿ ಅಮ್ಮನನ್ನು ದಿಗ್ಬ್ರಾಂತಳನ್ನಾಗಿಸಿದೆ. ‘ಆಗಿಸಿದೆ’ ಎನ್ನುವುದಕ್ಕಿಂತ ನನ್ನ ಸ್ಥಿತಿಯನ್ನೇ ‘ವರ್ಗಾಯಿಸಿದೆ’ ಎಂಬುದು ಹೆಚ್ಚು ಸೂಕ್ತ! ನನಗೆ ವಿಭಿನ್ನವೆನಿಸುವುದು ಈ ಅನುಭವ ಖಂಡಿತಾ ಅಲ್ಲ. ಅದು ಅದರ ಬೆನ್ನಿನಲ್ಲೇ ನನ್ನ ಮನಸ್ಸು ಆಘ್ರಾಣಿಸಿದ ಪ್ರಶಾಂತತೆ. ಅದು ಹೆಚ್ಚು ಕಾಲ ಆಗ ಉಳಿಯಲಿಲ್ಲವಾದರೂ ಅಂತಹ ಒಂದು ಲಯವನ್ನು ಹೊಂದಲು ಆಗಾಗ ನನ್ನ ಮನಸ್ಸು ಹವಣಿಸುತ್ತಿದ್ದುದಂತೂ ನಿಜ.

ಹಾಗೆಂದ ಮಾತ್ರಕ್ಕೆ ನಾನ್ಯಾವುದೋ ವರ್ಣಿಸಲಸಾಧ್ಯವಾದ ಕಷ್ಟಕ್ಕೆ ಸಿಲುಕಿಕೊಂಡೆನೆಂದೂ ಎದುರಿಗೆ ಕಂಡ ಬೆಳಕೇ ಉತ್ತರವಾಗಿ ಹೋಯಿತೆಂದೂ ಬಣ್ಣಿಸುತ್ತಾ ಕುಳಿತರದು ಅತಿಶಯೋಕ್ತಿಯಲ್ಲದೆ ಮತ್ತೇನಲ್ಲ. – “ದಂಡಿಗಟ್ಟಲೆ ಪ್ರಶ್ನೆ ಕೇಳಿ ರಚ್ಚೆ ಹಿಡಿದು ತಲೆ ಕೊರೆಯುತ್ತಿರುವ ಮಗುವಿನ ಕಣ್ಣಿಗೆ ಟಾರ್ಚ್ ಬಿಟ್ಟು ಪ್ರಶ್ನೆಗಳ ಹಾದಿ ತಪ್ಪಿಸಬಹುದಷ್ಟೇ. ಆ ಬೆಳಕದಕ್ಕೆ ಉತ್ತರವೇ? ಹೀಗೆ ನನ್ನ ಮುಂದಿನ ಬೆಳಕು ತಂದ ಸಮಾಧಾನ ನನ್ನ ಪ್ರಶ್ನೆಗಳ ಆಗರವಾಗಿದ್ದ ರಚ್ಚೆ ಹಿಡಿದ ಮನವ ಒಂದು ಕ್ಷಣ ಹಿಡಿದಿಡುವ, ‘ಇಲ್ಲಿ ನೋಡು..’ ಎಂಬಂತಹ ಬೆರಗನ್ನು ಸೃಷ್ಟಿಸುವ ಮಾನಸಿಕ ಮ್ಯಾಜಿಕ್‌ನ ಭಾಗವಷ್ಟೇ! ಮನಸ್ಸು ಪದೆಪದೇ ಹೊಂದಲು ಬಯಸುತ್ತಿದ್ದ ಈ ಪ್ರಶಾಂತತೆ ಮತ್ತೆ ಮತ್ತೆ ಬಂದೊದಗಲು ಬೇಕಿರುವುದು ಬೆಳಕಲ್ಲ, ತರ್ಕ-ಉತ್ತರ! ಎಂಬುದು ನನ್ನ ಅಂತರಂಗಕ್ಕೆ ಬಹುಬೇಗ ತಿಳಿದು ಬಿಟ್ಟಿತು. “ಅದಕ್ಕೆಂದೇ ಅದು ತನ್ನಾಗಮನದ ಮುನ್ಸೂಚನೆಯನ್ನು ನೀಡಿತು, ಪೂರ್ವ ನಿಗಧಿತವಾದ ಹಂದರವೊಂದರ ಸುಳಿವು ನೀಡಿತೆಂದು ನಾನು ಹೇಳುವುದಿಲ್ಲ.’ – ‘ನನಗನಿಸುವುವಂತೆ ಸಮಯ, ‘ಸಮಯ’ದ ಹೊರತಾಗಿ ಏನನ್ನೂ ಸೂಚಿಸುವುದಿಲ್ಲ. ಸೂಚಿಸಿಕೊಳ್ಳುವವು ಸೂಚನೆಯ ನಿರೀಕ್ಷೆಯಲ್ಲಿರುವ ಮನಗಳು. ಕಾಲ ಮುಂದೆ ಸರಿದಂತೆ ಹಿಂದೆ ನಡೆದವುಗಳೆಲ್ಲಾ ಸೂಚನೆಗಳಾಗಿಯೂ, ಪ್ರೇರಣೆಗಳಾಗಿಯೂ ಕಾಣುತ್ತಾ ಹೋಗುತ್ತವೆ’. ನಾನೂ ಈಗ ಆ ‘ಬೆಳಕ’ ಪ್ರೇರಣೆ ಎಂದು ಬಿಟ್ಟರೆ ನಾನು ಆ ಕಾಲಕ್ಕೂ, ಅಂದಿನ ಮನಃಸ್ಥಿತಿಗೂ ಮಾಡಿದ ಅವಮಾನವೆಂದೇ ಕಂಡುಬಿಡುತ್ತದೆ..
(ಸಶೇಷ)

(image - Web)

Thursday, December 1, 2011

'ಕಂಡೆ ನಾನೊಂದು ಕನಸು'- ಅಂಕಣ


ಆತ್ಮೀಯರೇ,

ನನ್ನ 'ಕನಸ ಕಥನ' ಅಂಕಣ ರೂಪದಲ್ಲಿ 'ಸಿಹಿಗಾಳಿ' ಮಾಸಿಕ ದಲ್ಲಿ 'ಕಂಡೆ ನಾನೊಂದು ಕನಸು' ಶೀರ್ಷಿಕೆಯಡಿ ಪ್ರಕಟಗೊಳ್ಳುತ್ತಿದೆ.

ಸಿಹಿಗಾಳಿ ಮುಕ್ತ ಚಿಂತನೆಯ, ಸೂಕ್ಷ್ಮ ಸ೦ವೇದನೆಯ ಹೊಸ ವೇದಿಕೆಯಾಗಿ ಹೊರ ಬರುತ್ತಿದೆ.

ಪ್ರತಿ ಹಾಗೂ ಚಂದಾ ವಿವರಗಳಿಗೆ ದಯವಿಟ್ಟು ಶ್ರೀಮತಿ ಹೆಚ್ .ಸಿ. ಭುವನೇಶ್ವರಿ, ಸಂಪಾದಕರು ಇವರನ್ನು ಸಂಪರ್ಕಿಸಿ ಪ್ರಯತ್ನವನ್ನು ಪ್ರೋತ್ಸಾಹಿಸಬೇಕಾಗಿ ಕೋರುತ್ತೇನೆ.
mb- 9739042243
email- bhuvanahc@gmail.com
sihigaali.masa@gmail.com

ಧನ್ಯವಾದ,
~ಸುಷ್ಮಸಿ೦ಧು

Thursday, October 20, 2011

ಕಲರವ

ಆ ಕನಸು ಹೀಗೆ ಸಾಗಿತು..


ನಾನು, ಸುಮ್ಮನೆ ಹೀಗೇ ತಿರುಗುವುದೇ ಕೆಲಸವೆನ್ನುವಂತೆ ಅಲೆಯುತ್ತಿದ್ದೆ..ನಡುವೆ ಏನೋ ಸಿಕ್ಕಿ ದಾರಿ ಮತ್ತೇನೋ ಆಗುತ್ತಲೋ, ನಾನು ಸಾಗುವ ದಾರಿಗೆ ಹಿಂದಿರುಗಿ ಹೇಗೆ ಸಮರ್ಥವಾಗಿ ಗುರಿಯೆಡೆಗೆ ಸಂಚರಿಸಬೇಕು ಎನ್ನುವುದನ್ನು ತಿಳಿಸುತ್ತಲೋ ಹಾದಿ ಸಾಗುತ್ತಿತ್ತು... ಹೀಗೇ ಹೋಗುತ್ತಿದ್ದ ನನ್ನಲ್ಲಿಗೆ ಚಿಲಿಪಿಲಿಗುಟ್ಟುತ್ತಾ ಎಲ್ಲಿಂದಲೋ ಒಂದಷ್ಟು ಹಕ್ಕಿಗಳ ಹಿಂಡು ಹಾರಿಬಂತು..ಅವು ತಮ್ಮಲ್ಲೇ ಏನೋ ಮಾತನಾಡಿಕೊಳ್ಳುವಂತೆ ನನಗೆ ಅನ್ನಿಸುತ್ತಿತ್ತು..ಅವು ನನ್ನ ತಲೆಯನ್ನು ಸುತ್ತುವರೆದು ತಮ್ಮ ಮಡಚಿದ್ದ ರೆಕ್ಕೆಗಳನ್ನು ತೆರೆದು ನನ್ನ ಮೇಲೆ ಹೂ ಮಳೆಗೈದವು.. ನನಗೆ ಏನೋ ಸಂತಸ..,ಆಶ್ಚರ್ಯ.. ನಾನು ಮಾಡಿರುವುದಾದರೂ ಏನು..? ಅವು ಏಕೆ ಹಾಗೆ ವರ್ತಿಸಿದವು? ಎಂದು ತಿಳಿಯುವುದರ ಮೊದಲೇ ಅವು ಮತ್ತೆ ತಮ್ಮ ‘ಮಾತು’ಮುಂದುವರೆಸುತ್ತಾ ಮತ್ತೆಲ್ಲಿಗೋ ಹೊರಟು ಹೋದವು...ನಾನು ಈ ಹಿಂದೆ ನಡೆದ ಘಟನೆಯ,ಆ ಕ್ಷಣದ ಗುಂಗಿನಲ್ಲಿ ತೇಲುತ್ತಿದ್ದೆನಾದರೂ ನನಗೇನೂ ಸ್ಪಷ್ಟವಾಗಲಿಲ್ಲ.. ಆ ಗಳಿಗೆಯಿನ್ನೂ ಮನದಲ್ಲಿ ನೆಲೆ ನಿಂತಿರುವಾಗಲೇ ನನಗೆ ಮತ್ತೆ ‘ಚಿಲಿಪಿಲಿ’ ಸದ್ದು ಮರುಕಳಿಸಿದಂತಾಯ್ತು.. ನಾನು ತಲೆಯೆತ್ತಿ ಶಬ್ದದ ಮೂಲವನ್ನು ಹುಡುಕುವಷ್ಟರಲ್ಲೇ ಮತ್ತೊಂದು ಹಿಂಡು ನನ್ನನ್ನಾವರಿಸಿತ್ತು.. ನಾನು ಎಚ್ಚೆತ್ತುಕೊಳ್ಳುವುದರಲ್ಲೇ ನನ್ನ ತಲೆಗೆ , ಮೈ ಕೈಗೆಲ್ಲಾ ತುಂಬಾ ನೋವಾದಂತಾಯ್ತು.....ಅವು ನನಗೆ ಕಲ್ಲಿನಿಂದ ಒಂದೇಸಮನೆ ಹೊಡೆಯುತ್ತಾ ಕಲ್ಲಿನ ಮಳೆಗರೆತ್ತಿದ್ದವು...(!) ನನ್ನ ನೋವು ನನಗೆ ಗ್ರಾಸವಾಗುವುದರಲ್ಲಿ ಆ ಹಿಂಡು ಕಣ್ಮರೆಯಾಯಿತು.. ಅಷ್ಟಕ್ಕೂ ನಾನು ಮಾಡಿದ್ದಿದ್ದಾದರೂ ಏನು? ದೇಹದೊಡನೆ ಮನಸ್ಸಿಗೂ ತಾಳಲಾರದಷ್ಟು ಪೆಟ್ಟಾಗಿತ್ತು..ಹೊಡತದ ನೋವು ಇಂಚಿಚ್ಚೇ ಅನುಭವವಾಗುತ್ತಾ ?ಹೊಡೆಯುವಂತದ್ದು ನಾನೇನು ಮಾಡಿದ್ದೆ??ಎಂಬ ಯೋಚನೆ ಮನಸ್ಸನ್ನು ತುಂಬಿ ಬಿಟ್ಟಿತ್ತು..ಮುಂದಿದ್ದ ದಾರಿಯಲ್ಲಿ ಹೆಜ್ಜೆ ಮರೆತವಳಂತೆ ಹೋಗುತ್ತಿದ್ದೆ...ದಾರಿಯ ಉಬ್ಬು ತಗ್ಗುಗಳು ನನ್ನ ಮನಸ್ಸಿನ ಭಾವನೆಗಳನ್ನು ಪುಷ್ಠೀಕರಿಸುತ್ತಲೇ ದೇಹದ ಸಮತೋಲನವನ್ನು ಏರುಪೇರಾಗಿಸುತ್ತಿದ್ದವು..

ನನ್ನ ಕಣ್ಣುಗಳು ಅತ್ತಿತ್ತ ನೋಡುವತ್ತಲೇ ನಿರತವಾಗಿದ್ದವು..ಹೀಗೇ ನೋಡುತ್ತಿದ್ದವಳಿಗೆ ಕಟ್ಟೆಯ ಮೇಲೆ ಅಕ್ಕ ಪಕ್ಕ ಕುಳಿತಿದ್ದ ಎರಡು ಹಕ್ಕಿಗಳು ಕಣ್ಣಿಗೆ ಬಿದ್ದವು.. ಆಶ್ಚರ್ಯವೆಂದರೆ ಅವೂ ನನ್ನನ್ನೇ ನಿಟ್ಟಿಸುತ್ತಿದ್ದವು... ನಾನು ದಾರಿಯಲ್ಲಿ ಸಾಗುತ್ತಲೇ ಕಟ್ಟೆಯನ್ನು ಸಮೀಪಿಸಿದೆ..ಅವು ಮಾತನಾಡಲಾರಂಭಿಸಿದವು(!) ನನ್ನ ಬಾಹ್ಯ ರೂಪ, ನನ್ನ ಕುಟುಂಬ ಮೂಲದ ಬಗೆಗೆ ಚರ್ಚೆ ಮಾಡುತ್ತಾ ಮಾತು ನನ್ನ ಕಿವಿಯನ್ನು ತಲುಪುವಂತೆ ಅರಚುತ್ತಿದ್ದವು...ಅವುಗಳ ಮನಃಸ್ಥಿತಿ ಕಂಡು ನಾನು ಮತ್ತೂ ಬೆರಗಾದೆ.. ತೀರ ಸಾಮಾನ್ಯವಾಗಿ ನನ್ನ ಹಿರಿಮೆ, ಕೊರತೆಗಳನ್ನು ತಮ್ಮ ಹಕ್ಕೆಂಬಂತೆ ಮಾತನಾಡುತ್ತಿರುವುದನ್ನು ಕಂಡು ಉಸಿರು ಏರುಪೇರಾಯಿತು(!)...ನಾನು ಅವುಗಳಿದ್ದ ಸ್ಥಳವನ್ನು ಮೀರಿ ಮುಂದೆ ನಡೆದು ಬಿಟ್ಟಿದ್ದೆ .ಮುಂದೆ ನಡೆಯುವಾಗ ಹಿಂದಿನಂತೆಯೇ ಇದ್ದ ಮತ್ತೊಂದು ಕಟ್ಟೆ ಎದುರಾಯಿತು... ಅಲ್ಲಿಯೂ ಎರಡು ಪಕ್ಷಿಗಳು ಪಕ್ಕ ಪಕ್ಕ ತಮ್ಮ ಮುಖವನ್ನು ನನ್ನ ವಿರುದ್ದ ದಿಕ್ಕಿಗೆ ತಿರುಗಿಸಿಕೊಂಡು ನನಗೆ ಬೆನ್ನು ಮಾಡಿ ಕುಳಿತಿದ್ದವು..ಅಸ್ಪಷ್ಟವಾಗಿ ನನ್ನ ಕಿವಿ ತಾಗುತ್ತಿದ್ದ ಅವುಗಳ ಮಾತು ನಾನು ಹತ್ತಿರ ಹತ್ತಿರವಾದಂತೆ ಸ್ಪಷ್ಟವಾಗತೊಡಗಿದವು.. ಅವು ನನ್ನ ಮುಗಿದ ಕೆಲಸದಲ್ಲಿ ಸೋಲುಗಳನ್ನು ಪಟ್ಟಿ ಮಾಡುತ್ತಾ.., ನಾನೇ ಮರೆತ ಹಲವನ್ನು ಹೆಕ್ಕಿ ತೆಗೆದು ಚುಚ್ಚಿ ಹೇಳುತ್ತಾ ‘ಇವಳ ಬಂಡವಾಳ ಇಷ್ಟೇ..’ ಎಂಬರ್ಥದಲ್ಲಿ ತಮ್ಮ ತಮ್ಮಲ್ಲೇ ಹರಟುತ್ತಿದ್ದವು..ನಾನಲ್ಲೆಲ್ಲೂ ನಿಲ್ಲಲಿಲ್ಲವಾದರೂ ಅವುಗಳ ಮಾತು ನನ್ನಲ್ಲಿ ನೆಲೆಯೂರಿ ನಿಂತು ಬಿಟ್ಟಿತ್ತು...ನಾನು ಮುಂದುವರೆಯುತ್ತಿದ್ದಂತೆ ಅಲ್ಲಿ ಮತ್ತೊಂದು ಕಟ್ಟೆ(!) ಅರೆ! ಬಂದ ದಾರಿಯಲ್ಲೇ ಮತ್ತೆ ಮತ್ತೆ ಬರುತ್ತಿದ್ದೀನೇನೂ ಎಂದೆನಿಸಿ ಸುತ್ತ ಒಮ್ಮೆ ತಲೆಯಾಡಿಸಿ ನೋಡಿ ನನ್ನ ಅನುಮಾನ ಪರಿಹರಿಸಿಕೊಂಡೆ...ಅಲ್ಲಿ ಸ್ವಲ್ಪ ದೊಡ್ಡದಾದ ಒಂದು ಹಕ್ಕಿ ತನ್ನ ಬದಿಯಲ್ಲಿ ತನಗಿಂತ ಆಕಾರದಲ್ಲಿ ಕಿರಯದಾಗಿದ್ದ ಹಕ್ಕಿಯನ್ನು ಕೂರಿಸಿಕೊಂಡು ಕುಳಿತಿತ್ತು..ದೊಡ್ಡ ಹಕ್ಕಿ ನನ್ನಲ್ಲಿರುವ ಸಾಮರ್ಥ್ಯ, ನನ್ನ ಹವ್ಯಾಸಗಳನ್ನು ಚಿಕ್ಕದಕ್ಕೆ ವಿವರಿಸುತ್ತಿತ್ತು ...ಅದೋ ದೊಡ್ಡಣ್ಣ ಹೇಳಿದ ಮಾತನ್ನು ‘ಹೌದಾ...ಹ್ಞೂಂ..’ಎಂಬ ಉದ್ಗಾರವನ್ನು ಹೊರಡಿಸಿ ಕೇಳಿಸಿಕೊಳ್ಳುತ್ತಾ ನನ್ನೆಡೆಗೆ ಒಂದು ಅಭಿಮಾನ ಪೂರ್ಣವಾದ ನೋಟವನ್ನು ಬೀರುತ್ತಿತ್ತು....ಅಲ್ಲಿಂದಲೂ ಮುಂದೆ ಹೋದದ್ದಾಯಿತು..ಇಷ್ಟೆಲ್ಲಾ ನಡೆದರೂ ನನ್ನ ತಲೆಯನ್ನು ‘ಕಲ್ಲು’ ಹೊಡೆದಿದ್ದ ಆ ದೊಡ್ಡ ಹಕ್ಕಿಗಳೂ, ನನ್ನ ಅಸಮರ್ಥತೆಯನ್ನು, ಸೋಲುಗಳನ್ನು ಪಟ್ಟಿಮಾಡುತ್ತಿದ್ದ ಆ ಎರಡು ಹಕ್ಕಿಗಳೇ ಆವರಿಸಿದ್ದವು....

ಇನ್ನೆಲ್ಲೂ ಯಾವ ಕಟ್ಟೆಯೂ ಕಾಣ ಸಿಗಲಿಲ್ಲ..ಆದರೆ ನಾನು ನಡೆಯುತ್ತಿದ್ದ ಸ್ವಲ್ಪ ಮುಂದೆ ಹಕ್ಕಿಯೊಂದು ನೆಲದ ಮೇಲಿದ್ದ ಮಣ್ಣಲ್ಲಿ ಬಿದ್ದು ಹೊರಳಾಡುತ್ತಿತ್ತು..ನಾನು ‘ಏನಾಗಿದೆಯೋ?’ ಎಂದು ಅದರ ಬಳಿಗೆ ಹೋಗುವಷ್ಟರಲ್ಲಿ ಪಟ್ಟನೆ ಎದ್ದು ನಿಂತು ನನ್ನ ಗಾಬರಿಗೊಡಿದ್ದ ಮೊಗವನ್ನು ನೋಡಿ ನಸುನಕ್ಕಿತು.. ನಾನೇನು ನಗಲಿಲ್ಲ(!) . ಅದನ್ನಲ್ಲಿಯೇ ಬಿಟ್ಟು ಮುಂದೆ ಹೋಗಿದ್ದ ನನ್ನ ಬೆನ್ನ ಮೇಲೆ ಕುಳಿತು, “ಏ.. ನಾನು ನಿನ್ನನ್ನು ಬಹಳ ಹೊತ್ತಿನಿಂದ ಹಿಂಬಾಲಿಸುತ್ತಿದ್ದೇನೆ..ನನಗೆ ನಿನ್ನ ಕಥೆಯೆಲ್ಲಾ ಗೊತ್ತು..(!)” ಎಂದಿತು. ನಾನು ಆಶ್ಚರ್ಯವನ್ನು ಮೊಗದ ಮೇಲೆ ಮೂಡಲು ಬಿಡಲಿಲ್ಲ..ಅದೇ ಮುಂದುವರಿದು “ಬಾ ನಿನಗೆ ನನ್ನ ಮನೆ ತೊರಿಸುತ್ತೇನೆ..” ಎಂದು ನಮ್ಮವರೇ ಕರೆಯುವಂತೆ ಆಹ್ವಾನಿಸಿತು...ನಾನು ಅದು ಹಾರಿದಲ್ಲಿಗೆ ಹೊರಟೆ..ಸ್ವಲ್ಪ ತಗ್ಗು ಪ್ರದೇಶದಲ್ಲಿದ್ದ ಗೀಜಗದ ಗೂಡನ್ನು ಹೋಲುತ್ತಿದ್ದ ಗೂಡಿನ ಬಳಿ ಬರುತ್ತಿದ್ದಂತೆ “ಇದು ನನ್ನ ಸ್ವಂತದ್ದಲ್ಲ.. ಇಲ್ಲೇ ಕೂರು ಬರುತ್ತೇನೆ..” ಎಂದು ಹೇಳಿ ಗೂಡಿನೊಳಗೆ ಕಣ್ಮರೆಯಾಯಿತು.. ನಾನು ಅಲ್ಲೇ ಕೆಳಗಿದ್ದ ಹುಲ್ಲುಹಾಸಿನ ಮೇಲೆ ಕುಳಿತೆ....ಅದೇನು ಮಾಡುತ್ತಿತ್ತೋ? ಗಂಟೆಗಳುರುಳಿದರೂ ಹಿಂದಿರುಗಲಿಲ್ಲ.. ನನಗೆ ಸಾಕಾಗಿ ಮೇಲೇಳಬೇಕೆನಿಸುವಷ್ಟರಲ್ಲಿ ಹೊರ ಬಂದು ತುಂಬಾ ಆತಿಥ್ಯ ಮನೋಭಾವವಿರುವಂತೆ ಮುಖ ಮಾಡಿಕೊಂಡು “ನಿನಗೆ ಸತ್ಕರಿಸಲು ಏನಾದರೂ ಇದೆಯೋ ಎಂದು ಹುಡುಕುತ್ತಿದ್ದೆ...ಕ್ಷಮಿಸು... ಬಾ ನನ್ನ ಮನೆಯನ್ನೊಮ್ಮೆ ನೋಡು..” ಎಂದಿತು. “ನಿನ್ನ ಸ್ವಂತದಲ್ಲವಲ್ಲ..” ಎಂದುಸುರುತ್ತಲೇ ಆ ಗೂಡಿನ ತೂತದೊಳಗೆ ಇಣುಕಿ ನೋಡಿದೆ...ಅಲ್ಲೇನಿದೆ..?ಅಲ್ಲಿನ ಮತ್ತೊಂದು ತೂತದಿಂದ ಮತ್ತೆ ಹೊರಗೇ ಕಾಣಿಸಿತು.. ಅಷ್ಟು ದೊಡ್ಡ ಪಕ್ಷಿ ಕುಳಿತುಕೊಳ್ಳುವುದಿರಲಿ..ಕತ್ತು ತೂರಿಸಲೂ ಅಲ್ಲಿ ಜಾಗವಿರಲಿಲ್ಲ.. ಮತ್ತೆ ಅದು ಹೋಗಿದ್ದಾದರೂ ಎಲ್ಲಿಗೆ? “ಇದೇನಿದು..?” ನಾನು ಉದ್ಗರಿಸಿದೆ ಅದು ಮುಗುಳ್ನಕ್ಕು “ಬಾ ನಾನು ನಿನ್ನೊಡನೆ ಕೆಲವು ವೈಯಕ್ತಿಕ ವಿಷಯಗಳನ್ನು ಚರ್ಚಿಸಬೇಕು..., ಹಿಗೇ ಸಾಗೋಣ..” ಹಾಗೆಂದೊಡನೆ “ಯಾರ ವೈಯಕ್ತಿಕ ವಿಷಯ..?”ಎನ್ನುತ್ತಲೇ ಆದರ ಆಹ್ವಾನದೆಡೆಗೆ ಆಸಕ್ತಿ ವಹಿಸಿ ಅದನ್ನು ಭುಜದಮೇಲೇರಲು ಅನುಮತಿ ನೀಡಿ ನಡೆದೆ..ಅದು ಮಾತಿಗೆ ಶುರುವಿಕ್ಕಿತು..
“ನಾನು ನಿನ್ನನ್ನು ಹಿಂಬಾಲಿಸುತ್ತಿರುವುದನ್ನು ನೀನು ಗಮನಿಸುತ್ತಿರಲಿಲ್ಲ ಎನಿಸುತ್ತೆ.. ನಾನು ನಿನಗೆ ಈ ಪ್ರಪಂಚದವರ ವಿಚಿತ್ರ ರೂಪ ದರ್ಶನ ಮಾಡಿಸಲು ಬಂದೆ..”ಎಂದಿತು. ಸ್ವಲ್ಪ ‘ಅತಿ’ ಎನಿಸಿದ್ದರೂ ಸಹಿಸಿಕೊಂಡೆ..
“ನೀನು ಮೂರು ಕಟ್ಟೆಗಳ ಮೇಲೆ ಕುಳಿತು ಮಾತಿನಲ್ಲಿ ತೊಡಗಿದ್ದನನ್ನ ಮಿತ್ರರನ್ನು ಹಾದು ಹೋದೆ ಅಲ್ಲವಾ?ಅವರ ಬಗ್ಗೆ ಹೇಳಬೇಕಿತ್ತು,ಮತ್ತಿನ್ನೂ ಇನ್ನೇನೇನೋ ಹೇಳುವುದಿತ್ತು.ನಾನು ಹೇಳುತ್ತೇನೆ..ಆದರೆ ಈ ಕ್ಷಣಕ್ಕೆ ನಾನೊಂದು ಪಕ್ಷಿ, ನೀನು ಮನುಷ್ಯಳು ಎನ್ನುವುದನ್ನು, ನಮ್ಮಿಬ್ಬರದ್ದೂ ಬೇರೆ ಬೇರೆಯದೇ ಆದ ನೆಲೆಗಳಿವೆ ಎಂಬುದನ್ನು, ನಾನು ‘ನಾನು, ನೀನು ‘ನೀನು’ ಎನ್ನುವುದನ್ನೂ ಸಹ ಮರೆತು ಬಿಡೋಣ. ಅಂತೆಯೇ ಒಂದು ಷರತ್ತು. ನೀನು ಯಾವುದೇ ಕಾರಣಕ್ಕೂ ನನ್ನೆಡೆಗೆ ನೋಡಬಾರದು.. “ ಎಂದಿತು.. “ಯಾಕೆ?” ಥಟ್ಟನೆ ಕೇಳಿದೆ..
“ಅದು ಷರತ್ತು... ಪ್ರಶ್ನಿಸಬಾರದು...” ನಾನೂ ಸಮ್ಮತಿಸಿದೆ. ಅದು ಮಾತುಗಳನ್ನು ನನ್ನ ಕಿವಿಯಲ್ಲಿ ಅರುಹುವುದು, ಆದರೆ ನಾನು ಯಾವ ಕಾರಣಕ್ಕೂ ಅದನ್ನು ನೋಡುವಂತಿರಲಿಲ್ಲ...
“ನೋಡು ನಾವು ದೂರದಲ್ಲಿ ಕುಳಿತಿರುವವರನ್ನು ನಮ್ಮ ಕಣ್ಣುಗಳಿಂದ ನೋಡುತ್ತೇವೆ... ಅವರ ಪಿಸು ಪಿಸುಮಾತನ್ನು ಕೇಳುವ ಕುತೂಹಲದಿಂದ ಕಿವಿಯನ್ನು ಹೊತ್ತು ಅವರನ್ನು ತಲುಪುತ್ತೇವೆ..ನಮ್ಮ ಕಣ್ಣಿನ ಪಾತ್ರ ಅಲ್ಲಿಗೆ ಮುಗಿಯುತ್ತದೆ. ಮಾತುಗಳು ಕಿವಿಯನ್ನು ತಾಕಿದಂತೆ ‘ನಾನು; ಎಂಬ ಪ್ರಜ್ಞೆ ಜಾಗೃತವಾಗುತ್ತದೆ ‘ನನ್ನ ಬಗ್ಗೆ ಏನಾದರೂ..?’ ಮನಸ್ಸು ಚುರಕಾಗುತ್ತದೆ ಅಲ್ಲೇನಾದರೂ ನಮ್ಮ ಬಗೆಗೆ ಮಾತು ಬಂದಿದ್ದರೆ ಮುಗಿಯಿತು.. ಕಿವಿಯ ಪಾತ್ರವೂ ಮುಗಿದರೂ ‘ಮನಸ್ಸು’ ಆ ಮಾತುಗಳನ್ನು ಬದುಕಿನುದ್ದಕ್ಕೂ ಹೊತ್ತುಕೊಂಡು ಸಾಗುತ್ತದೆ..
.ಪ್ರಪಂಚದಲ್ಲಿ ಮೂರು ತರಹದ ಜನರಿರುತ್ತಾರೆ.. ಕೆಲವರು ಮುಖ ನೋಡಿ ಮಾತನಾಡುತ್ತಾರೆ.., ಕೆಲವರು ತಲೆಯಿಂದ ಮಾತನಾಡುತ್ತಾರೆ ಮತ್ತೆ ಕೆಲವರು ಬೆನ್ನು ತೋರಿಸಿ ಮಾತನಾಡುತ್ತಾರೆ... ನನ್ನ ಸ್ನೇಹಿತರ ವಿಷಯವನ್ನೇ ನೋಡೋಣ..ಮೊದಲು ಪಕ್ಕ ಪಕ್ಕ ಕುಳಿತವರು ನಿನ್ನ ಮುಖವನ್ನು ನೋಡಿ ನಿನ್ನ ಜೀವನದ ಬಗೆಗೆ, ಕಣ್ಣಿಗೆ ನಿನ್ನ ಬಾಹ್ಯ ರೂಪ ಏನೋ ಅದನ್ನು ಹೇಳಿಕೊಳ್ಳುತ್ತಿದ್ದರು..., ನಂತರ ನಿನ್ನ ವಿರುದ್ದ ದಿಕ್ಕಿಗೆ ಮುಖಮಾಡಿ ಕುಳಿತವರು ‘ಬೆನ್ನು’ ತೋರಿಸುವ ಮಂದಿ ...ಅವರು ಪ್ರಪಂಚದ ಯಾವುದೇ ಜೀವಿಗೂ ತಮ್ಮ ಬೆನ್ನುತೋರುತ್ತಲೇ ಮಾತನಾಡಿಸುವವರು.., ಮತ್ತೆ ಬಂದವರು ತಲೆಯಿಂದ ಮಾತನಾಡುವ ಜನ.. ಅಲ್ಲಿ ಎರಡು ದೊಡ್ಡ, ಚಿಕ್ಕ ಪಕ್ಷಿಗಳು ಕುಳಿತಿದ್ದವು..ದೊಡ್ಡದು ತಾನು ಬೇರೆಯವರಲ್ಲಿ ಕಂಡ ಧನಾತ್ಮಕ ವಿಷಯಗಳನ್ನು ತಾನು ಗುರುತಿಸಿ, ಚಿಂತಿಸಿ...ತಲೆಯಲ್ಲಿ ಬರುವ ‘ಉನ್ನತ ಮಟ್ಟದ’ ವಿಚಾರಗಳನ್ನು ಚಿಕ್ಕದಕ್ಕೆ ಹೇಳುವುದು..ಅದು ಪುನಃ ವಿಷಯಗಳನ್ನು ಉಚ್ಚರಿಸಿ ತನ್ನ ತಲೆಯಲ್ಲಿ ತುಂಬಿಕೊಳ್ಳುವುದು....” ನಾನು ಶರತ್ತಿನಂತೆ ಎಲ್ಲೋ ನೋಡುತ್ತಾ ಹ್ಞೂಂಗುಟ್ಟಿದೆ.
“..ಪ್ರಪಂಚ ಮುಂದಕ್ಕೆ ಸಾಗುತ್ತಾ ಬಂತು.. ನಾವು.. ನಮ್ಮವರು ಈ ‘ಮನೆ’ ಕಟ್ಟುವ ಕಲೆಯನ್ನು ಎಂದಿಗೂ ನಮ್ಮ ಜನ್ಮದಲ್ಲೇ ಹೊತ್ತು ತಂದಿದ್ದೆವು.. ನೀವು ಬುದ್ದಿವಂತರೆನಿಸಿಕೊಂಡವರಿಗೆ ಅದರ ಪರಿಕಲ್ಪನೆ ಬರಲೇ ಸಾಕಷ್ಟು ವರ್ಷಗಳು ಬೇಕಾದವು.. ಅಷ್ಟಕ್ಕೂ ಮನೆಯೆಂದರೇನು? ಅದೊಂದು ಜಗತ್ತಲ್ಲವಾ ? ‘ಬಾಗಿಲು’ ನಮ್ಮ ಎರಡು ಜಗತ್ತುಗಳನ್ನು ಬೇರ್ಪಡಿಸುತ್ತಿರುತ್ತದೆ ನಾವು ಮನೆಯೊಳಗೆ ಕಾಲಿಡುತ್ತಿದ್ದೇವೆಂದರೆ ಒಂದು ಪ್ರಪಂಚದಿಂದ ಕಳಚಿ ಹೋಗಿ ಮತ್ತೊಂದನ್ನು ಸೇರಿಕೊಳ್ಳುತ್ತಿದ್ದೇವೆ ಎಂದರ್ಥವಲ್ಲವಾ?ಅದು ಬರೇ ನಾಲ್ಕು ಗೋಡೆಯಲ್ಲ.. ‘ಕೂಪ’ವಲ್ಲ.... ನೀನು ನನ್ನ ಮನೆಯಲ್ಲಿ ನೋಡಿದ್ದೂ ಅದನ್ನೇ. ಮತ್ತೊಂದು ‘ಜಗತ್ತ’ನ್ನು. ಆದರೆ ಅಲ್ಲಿದ್ದ ಬೆಳಕು ನೀನು ಅದು ನೀನು ನಿಂತಿದ್ದೇ ಪ್ರಪಂಚವೆನೋ ಎನ್ನುವಂತೆ ಮಾಡಿತು..?”
ನಾನೂ ಹ್ಞೂಂಗುಟ್ಟುತ್ತಾ ಸಾಗಿದೆ...
“ಜನ ಮುಂದುವರೆದಂತೆ ಮುಂದೆ ತಮ್ಮ ದಾರಿಯನ್ನು ಕಣ್ಣುಗಳಿಂದ ನೋಡುತ್ತಾ ಸಾಗುವ ಬದಲು ತಮ್ಮ ಬದುಕಿನೆಡೆಗೆ, ಗುರಿಯೆಡೆಗೆ ಬೆನ್ನು ತಿರುಗಿಸಿಕೊಂಡು ಹೋಗಲು ಪ್ರಾರಂಭಿಸಿ ಬಿಟ್ಟರು...”ಎಂದಿತು . ನಾನು ಪ್ರಶ್ನಾರ್ಥಕವಾಗಿ ಮುಖ ಮಾಡಿಕೊಂಡೆ..


“ಗಮನಿಸಿದಂತೆ ಹೇಳುತ್ತೇನೆ ಕೇಳು.. ಬೆಳವಣಿಗೆ ಯಾವಾಗಲೂ ಮುಮ್ಮುಖವಾಗಿರಬೇಕೇ ಹೊರತು ಹಿಮ್ಮುಖವಾಗಲ್ಲ..ನನ್ನ ಮಾತಿನ ಅರ್ಥ ಜನ ಹಿಂದೆ ಹೋಗುತ್ತಿದ್ದಾರೆಂದಲ್ಲ.. ತಮ್ಮ ತಾಂತ್ರಿಕತೆಯನ್ನು ತಮ್ಮ ಮನಸ್ಸಿನೊಡನೆ ಬೆಸೆದುಕೊಂಡು ಬಿಟ್ಟಿದ್ದಾರೆ.. ಹಿಮ್ಮುಖವಾಗಿ ನಡೆಯುತ್ತಾ ಯಾರು ನಮ್ಮಿಂದ ಎಷ್ಟು ದೂರದಲ್ಲಿದ್ದಾರೆ.. ಯಾವ ವೇಗದಲ್ಲಿ ಸಾಗುತ್ತಿದ್ದಾರೆ?, ಅವರ ವಯಸ್ಸು, ಅರ್ಹತೆ, ಸಾಧನೆಗಳೇನು ಎಂದು ಅಂದಾಜು ಮಾಡುವುದೇ ಅವರ ಪಾಲಿಗೆ ತಾಂತ್ರಿಕತೆಯಾಗಿದೆಯೇ ಹೊರತು ಅಲ್ಲಿ ನಿಂತಿದ್ದ ಮನುಜನ ಭಾವನೆಗಳು ಆ ‘ಯಂತ್ರ’ಗಳಿಗೆ ಮನವರಿಕೆಯಾಗುವುದೇ ಇಲ್ಲ.. ಅವರು ನಮ್ಮ ಬಗ್ಗೆ ಆಡುವ ಮಾತುಗಳು ಅವರ ಬೆನ್ನಿನಿಂದ ಬಂದವು .. ಅವರ ಕಣ್ಣುಗಳಿಗೆ ನೋಡುವ ಕಾತುರವಿಲ್ಲ.., ಕಿವಿಗಳಿಗೆ ಕುತೂಹಲವಿಲ್ಲ .. ತಮ್ಮ ಪಕ್ಕ ಕಣ್ಣುಬಿಟ್ಟು ಚಲಿಸುತ್ತಿರುವವರು ಅವರಿಗೆ ‘ಹಿಂದುಳಿದವರ’ಲೆಕ್ಕ...! ಸರಿ ಇದೆಲ್ಲವನ್ನೂ ನಿನಗೆ ಹೇಳುವುದು ನನ್ನ ಹಕ್ಕೇನು ಅಲ್ಲ ಆದರೂ ಹೇಳಬೇಕೆನಿಸುತ್ತೆ ಮುಂದುವರೆಸಲಾ?” ನಾನು ಸಮ್ಮತಿಸಿದೆ..
“ಕೇಳು , ಜೀವನದಲ್ಲಿ ಕೆಲವು ಅನುವಗಳು ತನ್ನಿಂತಾನೇ ನಮಗೆ ಅರಿವಿಲ್ಲದೇ ಆಗುತ್ತವೆ.. ಆದರೆ ಕೆಲವನ್ನು ನಾವೇ ಅರಸಬೇಕಾಗುತ್ತದೆ.. ಕೇಳಿ ತಿಳಿಯಬೇಕಾಗುತ್ತದೆ.. ಒಂದು ಕಲ್ಲಿನ ಮುಂದೆ ನಿಂತು , ಮರದ ಮುಂದೆ ನಿಂತು, ಕಡೆಗೆ ನಾವು ಮಲಗಿರುವ ಮಂಚದ ಕಾಲಿನ ಬಳಿ ಕಿವಿಗೊಟ್ಟು .. ಹೀಗೇ ನಿರ್ಜೀವಗಳಿಗೆ ನಮ್ಮ ಮಾತುಗಳಿಂದ ಜೀವ ತುಂಬುತ್ತಾ ಅವುಗಳೊಳಗೆ ನಮ್ಮ ಮನಸ್ಸನ್ನು ತೂರಿ ಬಿಟ್ಟು ಅದರಿಂದಾದ ಅನುಭವವನ್ನು ಅನುಭವಿಸುವುದೂ ಒಂದು ಅನುಭವವೇ ಅಲ್ಲವಾ ‘ನಾವು‘, ‘ನಾನೇನು ಗೋಡೆಯೊಡನೆ ಮಾತನಾಡಲಾ ?’ ಎಂದು ಎಷ್ಟೋ ಬಾರಿ ಪ್ರಶ್ನಿಸಿರುತ್ತೇವೆ.. ಗೋಡೆಯೊಡನೆ ಮಾತನಾಡುವುದೂ ಒಂದು ಕಲೆ.. ನಾವು ಬೋರೆದ್ದು ಆಡುವ ಮಾತುಗಳಿಗೆ ಪ್ರಶ್ನೆಗಳಿಗೆ ಗೋಡೆ ಉತ್ತರಿಸಿಬಿಟ್ಟರೆ ಅದಕ್ಕಿಂತ ಮತ್ತೊಂದು ಸಮಾಧಾನ ಎಲ್ಲೂ ಸಿಗಲು ಸಾದ್ಯವೇ ಇಲ್ಲ... ನಾಲ್ಕು ಗೋಡೆಗಳನ್ನು ಒಂದಕ್ಕೊಂದು ನಾವೇ ಸೇರಿಸಿ ಬಿಟ್ಟು ಅದರೊಳಗೆ ಕುಳಿತು ಇಲ್ಲವೋ ‘ನಾನು ಬಂಧಿ’ ಎನ್ನುತ್ತಲೋ ಅಥವಾ ಆ ಗೋಡೆಯಾಚೆಗಿನ ಬದುಕನ್ನು ಕನಸುತ್ತಲೊ ಕಾಲ ಕಳೆಯುತ್ತೇವೆ.. ಹೊರಗಿನ ಬದುಕು ಬಂಗಾರವೆಂದುಕೊಂಡೇ ಕಾಲಿಡುತ್ತೇವಾದರೂ ಅಲ್ಲಿರುವ ಸಮಸ್ಯೆಗಳೂ ಮುಳ್ಳಾಗಿ ಬಂದು ಎಷ್ಟೋ ಬಾರಿ ಚುಚ್ಚುತ್ತಲೇ ಇರುತ್ತವೆ.. ಆದರೆ ನಾವು ಆ ಮುಳ್ಳುಗಳನ್ನು ನೆನೆಪಿಸಿಕೊಳ್ಳುವಷ್ಟು ಸುಂದರ ಕ್ಷಣಗಳನ್ನು ನೆನೆಪಿಸಿಕೊಳ್ಳುತ್ತೇವಾ? ಆ ಮುಳ್ಳುಗಳು ಪದೇ ಪದೆ ಚುಚ್ಚಿದಾಗಲೇ ನಮಗೆ ನಮ್ಮ ಗೋಡೆಯ, ಕಲ್ಲಿನ ನೆನಪಾಗುವುದು.. ನಮ್ಮ ಮಾತು ನಾವೇ ಕೇಳುವ ವ್ಯವಧಾನ ವಿರಬೇಕಲ್ಲವಾ? ನಾವು ಎಲ್ಲೆಲ್ಲೋ ಹೋದಾಗ ಮುಖ ನೋಡುವ,ಬೆನ್ನು ತಿರುಗಿಸಿದ ಜನ ನಮ್ಮ ಬಗ್ಗೆ ಸಾವಿರ ಕೊಂಕಾಡಬಹುದು.. ನಮ್ಮ ತೆರೆದ ಕಣ್ಣುಗಳನ್ನು ಕಂಡು ಏನೂ ಅರಿಯದ ಮೂಡರು ಎನ್ನಬಹುದು..., ಆದರೆ ನಾವು ವಿಷಯಗಳನ್ನು ಕಣ್ಣಿನಿಂದ ನೋಡಿ ಹೃದಯದಲ್ಲಿಟ್ಟುಕೊಳ್ಲುವಷ್ಟು ‘ಹೃದಯವಂತರು’ ಎನ್ನುವುದು ನಮ್ಮ ವಿಶ್ವಾಸವಲ್ಲವಾ..? ಅಲ್ಲದೇ ತಾಂತ್ರಿಕತೆ ನಮ್ಮ ಕಣ್ಣುಗಳ ‘ಬದಲಿ’ಯಾಗಬಾರದಲ್ಲ....
ನಾನು ನಿನಗೆ ನನ್ನ ಕಡೆಗೆ ಯಾಕೆ ನೋಡದಿರಲು ಹೇಳಿದೆ ಗೊತ್ತಾ? ನನ್ನ ಮುಖದ ಭಾವನೆಗಳಲ್ಲ ನಿನಗೆ ಅರ್ಥವಾಗಬೇಕಿರುವುದು... ನನ್ನ ಭಾವನೆಗಳ ಆಳ...ಈ ಮಾತುಗಳನ್ನು ನಿನಗೆ ತಲುಪಿಸಿರುವುದು ಒಂದು ಹಕ್ಕಿಯಲ್ಲ...ಅದು ನಿನ್ನ ಕಿವಿಗೆ ಕೇಳಿಸಿದ ‘ಸತ್ಯ’ವಷ್ಟೇ. ನಿನ್ನದೇ ಆದ ಕಲ್ಪನೆಯೊಂದು ಈ ಮಾತುಗಳಲ್ಲಿ ಬೆಸೆದುಕೊಡಿದೆ. ಅದು ಈ ಮಾತುಗಳಿಗೆ ಜೀವ ತುಂಬಬೇಕಿದೆ... ನಮಗೀಗ ಸಮಸ್ಯೆಗಳು ಒಂದೆಡೆ ಜಡವಾಗಿ ಕುಳಿತಿರುವ ಬಂಡೆಯಾಗಬೇಕಿಲ್ಲ..ಅದು ರೆಕ್ಕೆಪುಕ್ಕ ಬಂದಿರುವ ಬಣ್ಣ ಬಣ್ಣದ ಹಕ್ಕಿಯಾಗಿ ಎಲ್ಲೆಲ್ಲೋ ಸುತ್ತಿ ನಮಗೆ ಸೂಕ್ತ ಪರಿಹಾರವನ್ನು ನಮ್ಮ ಕಿವಿಗೆ ತಲುಪಿಸಬೇಗಾಕಿದೆ...ನನಗೊಂದು ಆಕಾರ ಬಂದಿದ್ದೇ ‘ಸಮಸ್ಯೆ’ಯಿಂದ. ನಿನ್ನನ್ನು ಬೆಂಬತ್ತಿದಂತೆ ಆ ಕಲ್ಲುಗಳು,ಮಾತುಗಳು ಎಲ್ಲವೂ ನನಗೆ ಬಣ್ಣಬಳಿದು ಜೀವ ತುಂಬಿದವು.. ನಾನು ನನಗೆ ತಿಳಿದದನ್ನು ಹೇಳುವ ಕಾತರದಿಂದ ಬಂದೆ.. ಮಾತುಗಳು ಮುಗಿದಂತೆ ನಾನು ಇಂಚಿಂಚಾಗಿ ಕರಗಿ..ಕುಬ್ಜಳಾಗಿ ಹೋಗುತ್ತಿದ್ದೇನೆ...ನನ್ನ ಮಾತಗಳು ನಿನ್ನ ಕಿವಿಯ ಮುಖಾಂತರ ನಿನ್ನ ತಲೆಯನ್ನು ತಲುಪಿದ್ದರೆ ಸಾಮಾಧಾನ...ಮುಂದಾದರೂ ಸಮಸ್ಯೆಯನ್ನು ಬಂಡೆಗಲ್ಲು ಮಾಡಿಕೊಂಡು ನಿನ್ನ ತಲೆಯ ಮೇಲೆ ನೀನೇ ಎತ್ತಿ ಹಾಕಿಕೊಳ್ಳುತ್ತೀಯೋ...ಅಥವಾ ಅದನ್ನೊಂದು ವಿಹರಿಸುವ ಪಕ್ಷಿ ಮಾಡಿ ‘ಪರಿಹಾರಕ್ಕೆ’ ಜಾಗ ನೀಡುತ್ತಿಯೋ ನಿನಗೆ ಸೇರಿದ್ದು... ನಿನ್ನೊಳಗೊಂದು ಬಣ್ಣದ ಹಕ್ಕಿ ಸದಾ ಜಾಗೃತವಾಗಿರಲಿ...”


ನನ್ನ ತಲೆಯನ್ನುತೂರಿ ಬೆರೆತು ಹೋದಂತಾಯ್ತು....ಅದರ ಧನಿ ಪುನಃ ಕೇಳಿಸಲಿಲ್ಲ.. ನನ್ನ ಭುಜ ಖಾಲಿಯಾಗಿತ್ತು.. ಆದರೆ ಅದರ ಧನಿಯ ‘ಕಲರವ’ ಮನಸಲ್ಲಿ ಪ್ರತಿಧ್ವನಿಸುತ್ತಲೇ ಇತ್ತು...


(Image Courtesy - Net)



Tuesday, April 26, 2011

ಬೇಲಿ???






೦೬ ನೇ ಇಸವಿಯ೦ದು ಬರೆದು, 'ಕರ್ಮವೀರ'ದಲ್ಲಿ ಪ್ರಕಟಗೊ೦ಡ ಕನಸಿದು...

Wednesday, March 2, 2011

‘ಫಲಾ’ಪೇಕ್ಷೆ!


೨೪-೦೬-೧೦ ರಂದು ಕಂಡ ಕನಸಿನ ನಿರೂಪಣೆ...

ನನ್ನ ಒಂದು ಕೈಯಲ್ಲಿ ಒಂದು ಸುಂದರವಾದ ಹಣ್ಣಿದೆ, ಅತ್ಯಂತ ಯೋಗ್ಯವಾದ ಹಣ್ಣನ್ನು ತಿನ್ನಲು ಇದು ಪ್ರಶಸ್ತ ಗಳಿಗೆಯಾಗಿದೆ. ನಡುವೆ ನಾನು ಅತ್ತ ಗಮನವೀಯದೇ, ಮೇಲೆಲ್ಲೋ ಅಲ್ಲೆಲ್ಲೋ ಮರದ ತುತ್ತ ತುದಿಯಲ್ಲಿ ದುಂಡು ದುಂಡಾಗಿ ಕಂಗೊಳಿಸುತ್ತಿರುವ ಹಣ್ಣನ್ನು ನನ್ನದಾಗಿಸುವ ಯತ್ನದಲ್ಲಿ ಸಂಪೂರ್ಣವಾಗಿ ನಿರತಳಾಗಿಬಿಟ್ಟಿದ್ದೀನಿ. ಅದು ನನಗೆ ಬೇಕೇಬೇಕು ಎನ್ನುವಷ್ಟು ನನಗದು ಹಿಡಿಸಿ ಇಟ್ಟಿದೆ. ನಾನು ಇನ್ನಿಲ್ಲದಂತೆ ಆ ಹಣ್ಣನ್ನು ದಕ್ಕಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನೆಲ್ಲಾ ಗಮನವನ್ನು ಈಗ ‘ಏಕೈಕ’ ಎನಿಸುತ್ತಿರುವ ಗುರಿಯೆಡೆಗೆ ನೆಟ್ಟುಬಿಟ್ಟಿದ್ದೇನೆ. ಮೇಲಿಂದ ಮೇಲೆ ಕಲ್ಲುಗಳನ್ನಾಯ್ದು ಎಸೆದೆಸೆದು ನನಗೆ ಸುಸ್ತಾಗುತ್ತಿದೆ. ಇನ್ನು ಇದು ಅಸಾದ್ಯವೆನಿಸಿದಾಗ ಬಾಯಾರಿ, ಬಸವಳಿದು, ದೈಹಿಕವಾಗಿ ಮಾನಸಿಕವಾಗಿ ಕುಗ್ಗಿ-ನಲುಗಿ ನಾನಲ್ಲೇ ಕುಸಿದು ಕುಳಿತುಕೊಳ್ಳುತ್ತೇನೆ. ಕತ್ತು ಹಾಗೇ ಕೆಳ ಬಾಗಿ ನನ್ನ ಅಂಗೈಯೊಳಗೆ ಬೆಚ್ಚಗೆ ಕುಳಿತಿರುವ ಹಣ್ಣು ಕಾಣುತ್ತಿದೆ, “ಛೆ ಇದನ್ನಾದರೂ ತಿನ್ನೋಣ..” ಎಂದೆಂದುಕೊಳ್ಳುತ್ತಾ ಬಾಯಿಯ ಬಳಿ ತಂದೊಡನೇ ಮೂಗು ತಾಗುವ ಅಸಹನೀಯವಾದ ವಾಸನೆ, ಅದರ ಮೇಲೆ ಮೂಡಿರುವ ನೆರಿಗೆಗಳು, “ಇನ್ನು ಇದು ನಿನ್ನ ಪಾಲಿಗಿಲ್ಲ..” ಎಂಬುದನ್ನು ಸಾರಿ ಹೇಳಿಬಿಡುತ್ತವೆ. ಹಾಗೆಂದು ಅಲ್ಲೆಲ್ಲೋ ಕಂಡ ಹಣ್ಣಿನ ಮೇಲಿನ ಮೋಹಕ್ಕೆ ಬಿದ್ದು ಹೀಗಾಯ್ತು ಹಾಗೆ ಮಾಡಿದ್ದೇ ತಪ್ಪು, ಆ ಹಣ್ಣಿನ ಮೇಲಿನ ಆಸೆಯನ್ನು ಸಂಪೂರ್ಣವಾಗಿ ಬಿಟ್ಟು ಪಾಲಿಗೆ ಬಂದ ಇದೇ ಸಾಕೆಮದುಕೊಂಡಿದ್ದರೆ ಆಗಿತ್ತೆಂಬ ಆಲೋಚನೆಯನ್ನು ಮನಸ್ಸು ಒಪ್ಪುತ್ತಿಲ್ಲ.. ಮತ್ತೇನು ಮಾಡಬಹುದಿತ್ತು? ಗೊಂದಲಗಳು ಎಬ್ಬಿಸಿದ್ದ ಧೂಳನ್ನು ಅರಿವಿನ ತಂಗಾಳಿಯೊಂದು ಹಾಗೇ ಶಮನಗೊಳಿಸಲು ಯತ್ನಿಸುತ್ತಾ ಹೀಗೆ ಪಿಸುಗುಟ್ಟುತ್ತದೆ..

“ಈ ಕ್ಷಣದ ಸತ್ಯದೊಡನೆ ವ್ಯವಹರಿಸುವ ಜಾಣ್ಮೆಯಿಲ್ಲದಿರುವಾಗ ಮತ್ಯಾವುದೋ ಸತ್ಯದ ನಿರೀಕ್ಟೆಯಲ್ಲಿ, ಅದನ್ನು ತನ್ನದಾಗಿಸಿಕೊಳ್ಳುವ ಯತ್ನದಲ್ಲಿ ಕಳೆಯುವ ಸಮಯವೆಲ್ಲಾ ವ್ಯರ್ಥ. ಆ ಹಣ್ಣಿನ ಮೇಲಿಟ್ಟ ಅಪರಿಮಿತ ವ್ಯಾಮೋಹವೇ ಕಡೆಗೆ ಕೈಲಿದ್ದುದನ್ನೂ ಅನುಭವಿಸಲಾಗದ ಪರಿಸ್ಥಿತಿಗೆ ತಳ್ಳಿತೆಂಬುದು ಮೇಲ್ನೋಟಕ್ಕೆ ದಿಟವೇ. ವರ್ತಮಾನ ಅತ್ಯಂತ ಅತ್ಯಮೂಲ್ಯವಾದುದ್ದೇ ಸರಿ. ಅದರರ್ಥ ಕೈಲಿದ್ದ ಹಣ್ಣಿಗೇ ಅಂಟಿಕೊಂಡು ಮತ್ಯಾವುದನ್ನೂ ಕಣ್ಣೆತ್ತಿಯೂ ನೋಡಬಾರದೆಂದಾಗಲೀ, ಯಾವುದರದೋ ಮೇಲಿನ ಹಂಬಲದಿಂದ ಇಲ್ಲಿರುವುದನ್ನೆಲ್ಲಾ ಅಲಕ್ಷಿಸಿ ಹೊರಟುಬೆಡಬೇಕೆನ್ನುವುದಾಗಲೀ ಅಲ್ಲ. ಮನಸ್ಸಿನ ಒಂದು ಭಾಗವನ್ನು ಸಂಪೂರ್ಣವಾಗಿ ತನ್ನದಾಗಿರುವದರ ಮೆಲಿರಿಸಿ ಅದನ್ನನುಭವಿಸುತ್ತಾ, ಮತ್ತೊಂದನ್ನು ಗುರಿಯೆಡೆಗೆ ನೆಟ್ಟುಬಿಟ್ಟರಾಯಿತು. ಕಲ್ಲುಹೊಡೆದ ಆಯಾಸ ನೀಗಿ ಪುಷ್ಟಿ ಕೊಡಲು ಹಣ್ಣಿರುತ್ತದೆ. ಮತ್ತೊಂದು ಗುರಿಯ ಸಾಕಾರ ಮಾಡಿಕೊಳ್ಳುವ ಹಂಬಲ ರುಚಿಯ ಏಕತಾನತೆಯನ್ನು ನೀಗುತ್ತದೆ. ಕಡೆಗೊಮ್ಮೆ ಮರದ ಮೇಲಿನ ಹಣ್ಣು ಆ ಕ್ಷಣಕ್ಕೆ ದಕ್ಕದಿದ್ದರೂ ನಮ್ಮ ಪಾಲಿನದನ್ನು ಆಹ್ಲಾದಿಸಿದ ‘ಅನುಭವ’ ಸಂತೃಪ್ತಿಯೊಡನೆ, ಮತ್ತೊಂದು ಪ್ರಯತ್ನಕ್ಕೆ ಮನಸ್ಸನ್ನು ಅಣಿಗೊಳಿಸುತ್ತದೆ.”
(image- net)

Monday, November 22, 2010

ಅನಿಸಿಕೆ..

‘ಸುಧಾ’ ವಾರ ಪತ್ರಿಕೆಯ ಮೂಲಕ ಎಲ್ಲರಿಗೂ ಚಿರಪರಿಚಿತರಿರುವ ಖ್ಯಾತ ಮನೋ ಚಿಕಿತ್ಸಕರಾದ ಡಾ.ವಿನೋದ ಛೆಬ್ಬಿ ಯವರು ನನ್ನ ‘ಕನಸು’ಗಳ ಮೇಲಿನ ಅಭಿಪ್ರಾಯವನ್ನು ‘ಕವನ’ದ ಮೂಲಕ ಸೆರೆಹಿಡಿದಿದ್ದಾರೆ. ಅವರಿಗೆ ಅನೇಕಾನೇಕ ವ೦ದನೆಗಳನ್ನು ಸಲ್ಲಿಸುತ್ತಾ ಕೃತಜ್ಞತಾ ಭಾವದೊ೦ದಿಗೆ ಅವರ ಕವನವನ್ನು ನಿಮ್ಮ ಮು೦ದಿಡುತ್ತಿದ್ದೇನೆ..

Poem To Sushma-

ಹೇಗೆ ಬಣ್ಣಿಸಲಿ ನಿನ್ನ ಕನಸಿನ ಸ೦ಭ್ರಮವ
ಅಸ್ಪಷ್ಟತೆಯಲ್ಲಷ್ಟೊ0ದು ಸ್ಪಷ್ಟತೆ
ಅಮೂರ್ತತೆಯಲ್ಲೊಂದು ಮೂರ್ತತೆ
ಮೋಡ ಕರಗಿ ಮಾನವನಾಗಿ ಮಾತಾಡಿದ೦ತೆ.
ಗೋಡೆ ಕರಗಿ ಚಿತ್ರವಾಗಿ
ಚಿತ್ರ ಕರಗಿ ವಿಚಿತ್ರವಾಗಿ
ನಕ್ಷತ್ರ ಸಿಡಿದು ಸಾಸುವೆಯಾಗಿ
ಸಾಸುವೆ ಮಲ್ಲಿಗೆಯಾಗಿ
ಕೊನೆಗೆ,
ಗೂಢ ಕರಗಿ ನಿಗೂಢವಾಗಿ...
ಹೇಗೆ ಬಣ್ಣಿಸಲಿ ನಿನ್ನ ಕನಸಿನ ಸ೦ಭ್ರಮವ!