Friday, July 20, 2012

ಕಂಡೆ ನಾನೊಂದು ಕನಸು ಅಂಕಣ (ಸಿಹಿಗಾಳಿ ಮಾಸ ಪತ್ರಿಕೆ)- ಭಾಗ 4


ಕನಸಿನ ಲಹರಿಯ ಮತ್ತೆ ಸೇರಿದಂತೆ..
                 ‘ದಿನಕ್ಕೊಂದು ಮಕ್ಕಳ ಕಥೆಯಂತೆ ದಿನಕ್ಕೆ ಒಂದೋ, ಎರಡು.. ಹೀಗೇ ಹಲವು ಪ್ರಸಂಗಗಳು ಕೆಲ ಸಲ ಸರಣಿಯಲ್ಲಿ ಬಿಚ್ಚಿಕೊಳ್ಳುತ್ತಾ ಮನಸ್ಸಿಗೆ ಅದರ ಮೂಲದ ಕುರಿತಾದ ಆಘಾತವನ್ನೂ, ನೀತಿಯ ಕುರಿತಾದ ಆಹ್ಲಾದವನ್ನೂ ನೀಡುತ್ತಾ ನಡೆದವು.
ಮತ್ತೊಂದು ಕನಸಿನ ಸಂಭಾಷಣೆ ಈ ರೀತಿಯಿತ್ತು...
ಧನಿ ಪ್ರಶ್ನಿಸುವುದು-
ಮೌನವಿದ್ದಾಗಲೂ ಮನಸ್ಸು ಸುಮ್ಮನಿರುತ್ತದೆ. ಅದರ ಹಾಗೆಯೇ ಸಾವೂ ಸುಮ್ಮನಿರುವುದೇ ತಾನೇ? ಮೌನಕ್ಕೂ, ಸಾವಿಗೂ ಏನು ವ್ಯತ್ಯಾಸ?”
ಅವಲೋಕನ- ಹೊರಗೆ ಸುಮ್ಮನಿದ್ದು ಒಳಗೆ ಜಾಗೃತವಾಗಿರುವುದು ಮೌನ. ಹೊರಗೂ ಸುಮ್ಮನಿದ್ದು ಒಳಗೂ ಸುಮ್ಮನಿರುವುದು ಸಾವು!
                ...ಆ ಹೇಳಿಕೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಮೌನ’, ಸಾವುಗಳನ್ನು ಯಾವ ಬಂಧಗಳಿಗೂ, ಬಾಂಧವ್ಯಗಳಿಗೂ ಅನ್ವಯಿಸದೇ ಸ್ಥಿತಿಗೆಮಾತ್ರ ಅನ್ವಯಿಸಿದ್ದರಿಂದಲೋ ಏನೋ ನನಗದು ಬಹಳ ಕಿರಿಕಿರಿಯಾಗೇ ತೋರಿತ್ತು. ಒಮ್ಮೊಮ್ಮೆ ಎನಿಸುತ್ತಿತ್ತು ಬದುಕು- ಸಾವುಗಳ ಕುರಿತ ಸಮವೆಂದು ಕರೆಯಲ್ಪಡುವ, ‘ವಿಮುಖವೆಂದು ತೋರುವ ಭಾವ ತೋರುವುದು ಸರಿಯೆ? ಒಂದು ಸಾರಿ ಮನಸ್ಸು ಪಿಸುಗುಟ್ಟಿತು. ಸಾವು- ನೋವುಗಳು ಪ್ರಕೃತಿದತ್ತವಾದವು. ಹಾಗೇ ದುಃಖ-ದುಮ್ಮಾನಗಳೂ ಸಹ. ಅದರಂತೆಯೇ ಈ ವಿಮುಖ- ಸಮಭಾವವೂ ಪ್ರಕೃತಿಯಂಶವೇ. ಯಾರಲ್ಲಿ ಯಾವ ಅಂಶ ವ್ಯಕ್ತಗೊಂಡರೆ ಅವರ ಜೀವ ಸಮಾಧಾನಗೊಳ್ಳುವುದೋ ಅದು ವ್ಯಕ್ತಗೊಳ್ಳುವುದಷ್ಟೇ
                 ಈ ತೆರನಾದ ಸಂಭಾಷಣೆಗಳು ನನಗೆ ಉತ್ತರದಂತೆ ಕೆಲವು ಸಾರಿ ಕಂಡರೆ, ಮತ್ತೊಮ್ಮೆ ಒಳಗೆ ಅಪ್ರಯತ್ನ ಪೂರ್ವಕವಾಗಿ ನಡೆಯುತ್ತಿರುವ ಯುದ್ಧವೊಂದರ ಪ್ರತೀಕವಾಗಿ ತೋರುತ್ತವೆ.  ಆಗಿನ ಸಂದರ್ಭದಲ್ಲಿ ಅದಕ್ಕೆ ಉತ್ತರ’, ‘ಯುದ್ಧಎಂಬ ಶೀರ್ಷಿಕೆಗಳ ನೀಡದೇ, ಸರಿಯೆನಿಸಿದರೆ ಕ್ಷಣಿಕವೆಂದಷ್ಟೇ ತೋರುವ ಸಮಾಧಾನವನ್ನು, ಇಲ್ಲವೆನಿಸಿದರೆ ಬಿಡದಂತೆ ಕಾಡುವ ದ್ವಂದ್ವವನ್ನು ಅನುಭವಿಸಿ ಸುಮ್ಮನಾಗುತ್ತಿದ್ದೆ.
                 ಬರೀ ಒತ್ತಡಗಳ ಅನುಭವಿಸಿ ಸುಮ್ಮನಾಗುವುದಾಗಿದ್ದರೆ ಅಂತಹ ಸಮಸ್ಯೆ ಇರುತ್ತಿರಲಿಲ್ಲನೋ. ನಿಜವಾದ ಒತ್ತಡದ ಅನುಭವವಾಗುವುದು ಒತ್ತಡದ ಮೂಲವನ್ನು ಒತ್ತಿ ವಿಸ್ತರಿಸುತ್ತಾ ಪರರೊಡನೆ ಚರ್ಚಿಸಿದಾಗಲೇ. ನಮಗೆ ಕಷ್ಟ ಎನಿಸಿದ್ದು, ಅವರಿಗೂ ಅಷ್ಟೇ ಪ್ರಮಾಣದ ಕಷ್ಟವಾಗಿ ಕಂಡರೆ ಒತ್ತಡ ನಿವಾರಣೆ ಸ್ವಲ್ಪ ಮಟ್ಟಿಗೆ ಸಾಧ್ಯವೇನೋ. ಅದನ್ನು ಬಿಟ್ಟು,ನಮ್ಮ ಕಷ್ಟಗಳು ಅದೇನು ಮಹಾ!ಅಷ್ಟೇನು ಕಷ್ಟವಲ್ಲಎಂದೋ, ‘ಅಬ್ಬ! ಅತ್ಯಂತ ಕ್ಲಿಷ್ಟಕರವೆಂದೋ ಏನಾದರೂ ಎನಿಸಿದರೆ ನಮ್ಮ ಕೋಟಲೆಗಳಿಗೆ ಮತ್ತಷ್ಟು ಕೊಂಕು ಸೇರಿಸಿದಂತೆಯೇ! ಕನಸು ಶುರುವಾದಾಗಿನ ಕಾಲದ ನನ್ನ ಸಮಸ್ಯೆ ಏನಾಗಿತ್ತೆಂದರೆ ನನಗೆ ಪ್ರಯಾಸಕರವಾಗಿ ಕಾಣುತ್ತಿದ್ದ ನನ್ನ ಸ್ಥಿತಿ ನೋಡುಗರಿಗೆ ಅಷ್ಟೇನು ಕಷ್ಟಕರವಾಗಿ ಕಾಣದೇ, ನನಗೆ ತಮ್ಮ ಉತ್ತರಗಳಿಂದ ದಾರಿಯೊಂದಕ್ಕೆ ಹರಿಬಿಡಲು ಬರುವಂತಿದ್ದ ಕನಸುಗಳು ಕ್ಲಿಷ್ಟಕರವಾಗಿ ಗೋಚರಿಸುತ್ತಿದ್ದವು! ಅದು ಬರುತ್ತದೆಎನ್ನುವುದು ನನಗೂ ಆಗ ಆಘಾತ ತರುತ್ತಿತ್ತೇ ವಿನಃ ಅಲ್ಲಿ ಬಂದದ್ದಲ್ಲ.
                   ಈಗಲೂ ಕನಸಿನ ಮೂಲದ ಕುರಿತಂತೆ ವಿಸ್ಮಯ, ಅಚ್ಚರಿಗಳು ಎಲ್ಲರಂತೆ ನನಗೂ ಉಳಿದಿರುವುದು ನಿಜವಾದರೂ ಬದುಕಿನ ಎಲ್ಲಾ ಇರುವಿಕೆ- ಆಗುವಿಕೆಗಳ ಮೂಲವೇ ಆಶ್ಚರ್ಯ, ಪ್ರಶ್ನೆ, ಗೊಂದಲಗಳ ಗೂಡಾಗಿರುವಾಗ ಕನಸನ್ನೂ ಆ ಗೂಡಿನೊಳಗೇ ಹಾಕಿ ಕಾಣದ, ತೋರದವಿಚಾರಗಳಲ್ಲಿ ಕಾಣುವ ಸೊಬಗನ್ನು ಕಾಣುವ ಕನಸುಗಳ ಕುರಿತಂತೆಯೂ ವಿಸ್ತರಿಸಿದ್ದೇನೆ!
                   ಹೀಗೇ ಪುಟ್ಟಪುಟ್ಟ ಪ್ರಶ್ನೋತ್ತರಗಳ ಸಾಲು ಸಾಲು ಮೂಡಿ ಮರೆಯಾಗುತ್ತಿರುವಾಗ ನನಗೆ ಪದೇ ಪದೇ ಎನಿಸುತ್ತಿದ್ದುದು ಪ್ರಜ್ಞಾಪೂರ್ವಕವಾಗಿ ಈ ಪ್ರಶ್ನೆಯೂ ನನ್ನಲ್ಲಿರಲಿಲ್ಲ, ಉತ್ತರವನ್ನೂ ನಾ ಬಯಸಿರಲಿಲ್ಲ‘ ಎಂಬುದು. ಏಕೆಂದರೆ ನನ್ನ ಅಂದಿನ ಖಿನ್ನ ಮನಃಸ್ಥಿತಿ ‘ನಿರಾಸಕ್ತಿ’ಯ ಹೊಂದಿದೆ ಎಂಬುದೊಂದನ್ನು ಬಿಟ್ಟು ಇನ್ನೇನೂ ನನಗೇ ಹೊಳೆದಿರಲಿಲ್ಲ. ಅವ್ಯಾವುವೂ ನಾನು ಆ ಸಮಯದ ಆಜುಬಾಜಿನಲ್ಲಿ  ಯೋಚಿಸಿದ ವಿಚಾರಗಳೂ ಅಲ್ಲ!
                   ಬಹಳಷ್ಟು ದಿನ ‘ನನ್ನ ಕನಸುಗಳು ನಾನು ಯೋಚಿಸದ ವಿಚಾರಗಳ ಹೊಂದಿರುತ್ತವೆ’ ಎಂದೇ ಭಾವಿಸಿದ್ದವಳಿಗೆ ಒಮ್ಮೆ  ಹೀಗನ್ನಿಸಿತು- “ನಾನೆಂದರೇನು? ಪ್ರಮುಖ, ಪ್ರಾಥಮಿಕವಾಗಿ ‘ಮನುಜ’ಳು ತಾನೆ? ಮನಷ್ಯ ಹೊತ್ತು ತಂದ ಪ್ರಶ್ನೆಗಳೇ ಅಲ್ಲವೇ ನನ್ನಲ್ಲಿ ಉದ್ಭವಿಸುತ್ತಿಹುದು? ‘ಅದು ಹೇಗೆ  ಬೇರೆಯವರಲ್ಲಿ ಮೂಡದ್ದು ನನಗೆ ಮೂಡಿತು?’ ಎಂಬುದು ಪ್ರಶ್ನೆಯಲ್ಲ. ಕಾರಣ, ಎಲ್ಲರಲ್ಲೂ ಮೂಡುವ ‘ಎಲ್ಲವೂ’ ಮತ್ತು ?ಅವೇ ನಮ್ಮಲ್ಲೂ ಉದಯಿಸಬೇಕು ಎನ್ನುವುದಾಗಿದ್ದರೆ ಒಂದೇ ಮಾದರಿಯ ವ್ಯಕ್ತಿಗಳು ಒಂದೇ ತೆರನಾದ ಕೆಲಸಗಳನ್ನು ಒಂದೇ ಸಮಯದಲ್ಲಿ ಮಾಡುತ್ತಿರಬೇಕಿತ್ತು! ಒಬ್ಬಬ್ಬರ ಆಸಕ್ತಿ ಒಂದೊಂದು ತೆರನಾದುದು. ತನ್ನ ಮೂಲಕ ಇತರರಲ್ಲಿ, ‘ಇತರೆ’ಗಳಲ್ಲಿ ಆಸಕ್ತಿ ಹೊಂದುವಂತೆ ತನ್ಮೂಲಕ ತನ್ನಲ್ಲೇ ಆಸಕ್ತಿ ಹೊಂದುವುದೂ ಒಂದು ಬಗೆಯೇ! ಈ ತರಹದ ‘ಆಸಕ್ತಿ’ಕರ ಪಯಣವೇ ಈ ಕನಸಾಗಿದೆ!?
                  ಮತ್ತೆ ಚಟುಕು ಪ್ರಶ್ನೋತ್ತರಗಳ ಸಾಲಿಗೆ ಮರಳುವುದಾದರೆ ಅವುಗಳಲ್ಲಿ ಅಂದು ಮರೆಯಾಗಿದ್ದ ಅರ್ಥಗಳು ತೆರೆದುಕೊಳ್ಳುವುವು.. 
(¸À±ÉõÀ)

(Image- Web)