
ಬಹಳ ದಿನಗಳು ಹೀಗೇ ಕಳೆದವು.. ಅರಳಿ ನರ್ತಿಸುತ್ತಿದ್ದ ಹೂವಿನ ಲಯ ಎಲ್ಲೋ ತಪ್ಪಿದಂತಾಗಿ, ಒಡಲ ಶಕ್ತಿಯೆಲ್ಲಾ ಎಲ್ಲೋ ಉಡುಗಿ ಹೋದಂತೆ, ತನ್ನ ದೇಹ ತನಗೇ ಭಾರವಾದ೦ತೆ ಭಾಸವಯಿತು. ಎಷ್ಟೋ ದಿನ ತನುಮನವ ರಂಜಿಸುತ್ತಿದ್ದ ಹೂವು ಕೆಲವೇ ಗಂಟೆಗಳಲ್ಲಿ ತನ್ನ ಕಾಲುಗಳಿ೦ದ ಬೇರ್ಪಟ್ಟು ಮಣ್ಣಿನ ನೆಲದ ಮೇಲೆ ದೊಪ್ಪನೆ ಬಿದ್ದು ಬಿಟ್ಟಿತು. ಮತ್ತೆ ಮೇಲೇಳಲಾರದೇ ಅತ್ತಿತ್ತ ಹೊರಳಲಾರದೇ ಗಾಳಿಯ ಆರ್ಭಟಕ್ಕೆ ಬಲಿಯಾಗಿ ತತ್ತರಿಸಲ್ಪತ್ತಿತು. ಜೋರಾಗಿ ರೋದಿಸುತ್ತಾ, "ಅಯ್ಯೋ ನನ್ನ ಕರ್ಮ, ನನ್ನ ಸ್ಥಿತಿ ಯಾರಿಗೂ ಬರದಿರಲಿ.. ಇದೇನಾಗಿ ಹೋಯಿತು..?" ಎನ್ನಲು ಈ ಎಲ್ಲ ಘಟನೆಗಳನ್ನು ಮೌನಧಾರಿಯಾಗಿ ಗಮನಿಸುತ್ತಿದ್ದ ಗಿಡಕ್ಕೆ ಕರುಳು ಚುರ್ರೆ೦ದಿತು. ಅದು ಹೂವಿಗೆ ಹೇಳಿತು, "ನನ್ನ ಸುಂದರ ಪುಷ್ಪವೆ, ಇಲ್ಲಿ ನೋಡು. ನಿನ್ನ ಸ್ಥಾನವನ್ನು ಬೇರೆ ಯಾರೋ ಆಕ್ರಮಿಸಲು ಯತ್ನಿಸುತ್ತಿರುವುದನ್ನು... ನಾನು ನಿನ್ನನ್ನಣುಕಿಸಲು ಹೀಗೆ ಹೇಳುತ್ತಿಲ್ಲ. ಆದರಿದು ಪ್ರಕೃತಿ ನಿಯಮ. ನಮ್ಮ ಶ್ರೇಷ್ಠತೆಗೆ ನಾವೇ ತಲೆದೂಗುತ್ತಾ.., ತೂಗುತ್ತಾ ತಲೆಯೇ ಕಿತ್ತು ಬಿದ್ದರೆ...? ಅ ಸಂಕಟ ಯಾರಿಗೂ ಬೇಡ. ನೀನು ಅಂದು ಹೇಳಿದ ಮಾತು ನಿನ್ನ ಗರ್ವದಿಂದ ಉಧ್ಬವಿಸಿದ್ದು. ಅದಕ್ಕಂದು ಜಂಬದ ಲೇಪವೊ೦ದನ್ನು ಬಿಟ್ಟರೆ ಮತ್ಯಾವ ಅರ್ಥವಾಗಲಿ, ಸತ್ಯಾ೦ಶವಾಗಲೀ ಇರಲಿಲ್ಲ. ಆದರೆ ಇಂದು ಅದೇ ನಿಜವಾಗಿದೆ. ಖ೦ಡಿತ ಇದೀಗ ನೀನೇ ನನ್ನ ಅಸ್ತಿತ್ವಕ್ಕೆ ಕಾರಣಳಾಗಬಲ್ಲೆ.. ನನ್ನ ಇರುವಿಕೆಯನ್ನು ಭದ್ರಪಡಿಸಬಲ್ಲೆ.. ಮತ್ಯಾಕೆ ಈ ವೇದನೆ. ಬಾ ಈ ಕ್ಷಣದಿಂದ ನೀನೇ ನನ್ನ ಸಮರ್ಥ ಇರುವಿಕೆಗೆ ಕಾರಣಳಾಗುವ ಗೆಳತಿ..." ಎನ್ನುತ್ತಾ ತನ್ನ ಪರ್ಣಹಸ್ತವನ್ನು ಚಾಚಿ 'ಪುಷ್ಪ'ವನ್ನು ತನ್ನೆಡೆಗೆ ಸೆಳೆದುಕೊಂಡು ತನ್ನ ಬುಡಕ್ಕೆ ಒರಗಿ ಕೂರಿಸಿ ಸಮಾಧಾನ ಪಡಿಸಿತು. ಅದರ ಜೀವಕ್ಕೆ ಪರಿಪೂರ್ಣತೆ ನೀಡಿತು....
*೨೦೦೬ ರ ಕನಸು
(image courtesy- web)