Thursday, December 18, 2008

'ಕನಸು ಕಾಣುವುದೆ೦ದರೇನು!?'

ಹಾಯ್,
ನನ್ನ 'ಕನಸ'ಲೋಕವನ್ನು ಹೊಸದಾಗಿ ಕಾಣುತ್ತಿರುವಿರಾದರೆ, ಒಮ್ಮೆ ಹಿ೦ದಿನ ಪೋಸ್ಟುಗಳತ್ತ ಇಣುಕಿ ನೋಡಿ ಇದರತ್ತ ಬನ್ನಿ :)


"ಸರಿ, ಹೀಗೆ ಕನಸು ಕಾಣುವುದೆ೦ದರೇನು? ಕನಸು ಹೀಗಿರುವುದು ಹೇಗೆ ಸಾಧ್ಯ?" (ಚಿತ್ರದಲ್ಲಿರುವ೦ತಲ್ಲ!!)

ಇಲ್ಲಿ ನಾನ್ಯಾವ 'ಕನಸಿನ' ಕುರಿತಾದ ವೈಜ್ಞಾನಿಕ ಅವಲೋಕನವನ್ನೂ ತೆರೆದಿಡುತ್ತಿಲ್ಲ. ಬದಲಾಗಿ ನಾನು ಈ ಐದು ವರ್ಷಗಳಿಂದ ಪದೇ ಪದೇ ಕೇಳಲ್ಪಟ್ಟಿರುವ FAQ ಗಳ ಉಪಟಳದ ಸಣ್ಣ ಪರಿಚಯ ನೀಡುತ್ತಿದ್ದೇನೆ. ಈ 'ಕನಸು' ಎಂಬ ಪದದ ಅಕ್ಷರಶಃ ಅರ್ಥ ನಮ್ಮಲ್ಲಿ ಸಿಕ್ಕಾಪಟ್ಟೆ ಸಂಧರ್ಭಕ್ಕನುಗುಣವಾಗಿ ಮಾರ್ಪಾಡಾಗಿರಲ್ಪಟ್ಟಿರುವುದೇ ನನ್ನೆಲ್ಲ ಸಂಕಷ್ಟಗಳ ಮೂಲ! ಕನಸುಗಳು ಬರುತ್ತವೆ, ಹೋಗುತ್ತವೆ. ಕೆಲವು ಒ೦ದರಿ೦ದೊ೦ದು ದೃಶ್ಯಕ್ಕೆ ಸ೦ಭ೦ಧವಿರುವ೦ತವಾಗಿರುತ್ತವೆ, ಇನ್ನುಳಿದವು ತೀರಾ ಪೆದ್ದುಪೆದ್ದಾಗಿಯೋ, ತಮಾಷೆಯಾಗಿಯೋ, ಭಯಾನಕ ಅಥವಾ ಚಿಂದಿ ಚಿತ್ರನ್ನವಾಗಿಯೋ ಒಂದಷ್ಟು ಹೊತ್ತಿದ್ದು ಅತ್ತಸರಿಯುತ್ತವೆ. ಇಂತಹ ಅನೇಕಾನೇಕ ಕನಸುಗಳ ನಡುವೆಯೂ ನನಗೆ ಒಮೊಮ್ಮೆ ಒ೦ದರಿ೦ದೊ೦ದು ದೃಶ್ಯಕ್ಕೆ ಲಿಂಕ್ ಇರುವ೦ತಾ, ಸಂಭಾಷಣೆಯೇ ಪ್ರಧಾನವಾಗಿರುವ, ತಲೆಯೊಳಹೊಕ್ಕ ವಿಚಾರವೊ೦ದು ಕಲ್ಪನೆಯ ಲಯಕ್ಕೆ ಸಿಲುಕಿ ಹಾಗೇ ಉದ್ದುದ್ದವಾಗಿ, ಮೊದಲು-ಕೊನೆ ಎಲ್ಲವನ್ನೊಳಗೊ೦ಡಾಗ ದೊರೆಯುವ ಸಿದ್ಧ ಮಾದರಿಯ೦ತೆ ಮೂಡುವ ಕನಸುಗಳು, ಕೆಲ ಗಂಟೆ, ದಿನ or ಕೆಲವೊಮ್ಮೆ ಅಮ್ಮನ ಬಳಿ ಹೇಳಿ ರೆಕಾರ್ಡ್ ಮಾಡುವವರೆಗಷ್ಟೇ ಇದ್ದು ಆಮೇಲೆ ಕರುಹೂ ಇಲ್ಲದೇ ಮಾಸಿಹೋಗಿ ನನಗೆ ಆಶ್ಚರ್ಯ, ಗಾಬರಿ, ತೃಪ್ತಿ, ಸಂಕಟ, ತೊಂದರೆ ಎಲ್ಲವನ್ನೂ ತ೦ದಿಕ್ಕುತ್ತವೆ. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ದಾಖಲಿಸಿ ಎಲ್ಲರೊಡನೆ ಹ೦ಚಿಕೊಳ್ಳಬೇಕೆ೦ಬ ಉದ್ದೇಶವೊ೦ದು ತಲೆ ಹೊಕ್ಕಾಗಿನಿ೦ದ ಅದನ್ನು ಅಲ್ಲಿ೦ದಿಳಿಸಲು ಪ್ರತಿಷ್ಠಿತ 'ದುಷ್ಟ ಶಕ್ತಿಗಳು'(!) ವಿನಯ, ವಿಶ್ವಾಸಭರಿತ ಪ್ರತಿಕ್ರಿಯೆಗಳಿ೦ದ ಉಪಟಳ ನೀಡುತ್ತಿರುವುದರಿ೦ದ ಬೇಸತ್ತ ನಾನೂ, ನನ್ನ ಬ್ಲಾಗೂ ತೆವಳುತ್ತಲೇ ಸಾಗಿದ್ದೇವೆ !!

ನಮ್ಮವರು ಸಾಕ್ಷ್ಯಾಧಾರ, ಪುರಾವೆಗಳಿಲ್ಲದೇ ಸಾಧಾರಣವಾಗಿ ಏನನ್ನೂ ನಂಬುವುದಿಲ್ಲ ( *note- ಕ್ಷಮಿಸಿ, ಪವಾಡಗಳ ವಿಷಯದಲ್ಲಿ ಈ ಹೇಳಿಕೆ ಅನ್ವಯವಾಗುವುದಿಲ್ಲ!) ಹೀಗಾಗಿ ನಾನು ನನ್ನ ಕನಸಿನ mechanism ಅನ್ನು ಕೆಲ 'ಆಯ್ದ ವ್ಯಕ್ತಿ'ಗಳಿಗೆ(ದಿನನಿತ್ಯ ಎದುರಿಸುವ ಸಮಸ್ಯೆಗಳನ್ನು ಹೇಳುತ್ತಾ ಹೋದರೆ ಇನ್ನೊಂದು ಬ್ಲಾಗೇ ಬೇಕಾಗಬಹುದು!) ವಿವರಿಸಲು ಹೋದರೂ "ಇದು ಹೇಗೆ ಕನಸು ಹೀಗಿರಲು ಸಾಧ್ಯ?" ಎಂಬ ಪ್ರಶ್ನೆಗಳು ತೆರೆದುಕೊಳ್ಳುತ್ತವೆ. ಹಾಗೆಂದು ಅವರ ಸಮ್ಮುಖದಲ್ಲೇ ಒಂದು ಕನಸನ್ನು ಆಹ್ವಾನಿಸಿಕೊ೦ಡು "ಒಹ್! ಬಂತು ಬಂತು ಕನಸು, ನೋಡ ಬನ್ನಿ!" ಎನ್ನಲು ಸಾಧ್ಯವೇ!? ನಿಜ, ಯಾರಿಗಾದರೂ ಈ ಕುತೂಹಲ ಸಹಜವೇ. ಆಗಾಗ ನನಗೇ ಹಾಗೆನಿಸುತ್ತಲೂ ಇರುತ್ತದೆ! ಆದರೆ ನನ್ನೆಲ್ಲ ಅರ್ಥಮಾಡಿಸಲು ನಡೆಸಿದ ಪರಿಶ್ರಮದ ನಂತರವೂ ಅದು ತಣಿಯುವುದೇ ಇಲ್ಲವಲ್ಲ! ಆಗ ಸಹಜವಾಗೇ, 'ಈ ಕನಸ ಸಹವಾಸ ಸಾಕು' ಎಂದೆನಿಸಲು ಈ ಪ್ರಕ್ರಿಯೆ ನನ್ನ ಕೈ ( or ತಲೆ?) ಮೀರಿದ್ದಾದ್ದರಿ೦ದ 'ಇವನ್ನು ದಾಖಲಿಸುವುದನ್ನು ಇಂದೇ ಬಿಟ್ಹಾಕಿಬಿಡಬೇಕು' ಎಂದೆನಿಸುವ ಮಹತ್ವಾಕಾಂಕ್ಷೆಯೇನಾದರೂ ಇವರುಗಳ 'ಜಾಣ ಪೆದ್ದುತನ'ಹಿ೦ದಿರಬಹುದೇ? ಎನ್ನುವ೦ತಹ ದೂ(ದು?)ರಲೋಚನೆಯೂ ಮೂಡದೇ ಇರದು!

ನಮ್ಮ ಎಚ್ಚರ ಸ್ಥಿತಿಯಿ೦ದ ನಾವು ದೂರ ಸರಿದು ವಿರಮಿಸಿದಾಗ, 'ಕಾವಲುಗಾರನ ಕಣ್ತಪ್ಪಿಸಿ' ಜರುಗಿದ ಆಲೋಚನೆಯೊ೦ದು ದೃಶ್ಯವಾಗಿ (ಕೆಲ ಸಂಧರ್ಭಗಳಲ್ಲಿ) ಕಣ್ಣಮುಂದೆ ತೇಲಿ ಬರುವುದೆಂದರೆ? ಅದು ಎ೦ತಹ ಕನಸೇ ಆಗಿರಲಿ. ನಮ್ಮ ನಿಯಂತ್ರಣಕ್ಕೆ ಸಿಲುಕದೆ ಘಟಿಸುವ೦ತಹುದು ತಾನೇ? ಇಂತಹ ಅಚ್ಚರಿಯೆನಿಸುವ 'ಮೆದುಳ ಮಾಯೆ'ಯನ್ನು ತೀರಾ ನಿರಾಸಕ್ತಿಯಿ೦ದ ನೋಡುವ ಮನಸ್ಸುಗಳನ್ನು ನಮ್ಮ ಸುತ್ತಲೂ ಕನಸಿನ ಜೊತೆಗೆ ಹೆಣೆದುಕೊಂಡಿರುವ ಭಯ ಮತ್ತು ಮೂಢನ೦ಬಿಕೆಗಳು ವಿಚಾರದಲ್ಲಿ ನಿರ್ಲಿಪ್ತವನ್ನಾಗಿಸುತ್ತಿವೆಯೋ ತಿಳಿಯದು.

ಆದರೆ ಇವೆಲ್ಲವುಗಳ ನಡುವೆ 'ಸ್ವದೇಶೀ' ಕಾರ್ಯಚಟುವಟಿಕೆಗಳು ಅಂತರ್ಜಾಲದಲ್ಲಿ ಕಣ್ಣಿಗೆ ಬೀಳದ ಕಾರಣ (ತಿಳಿದಿದ್ದರೆ ದಯಮಾಡಿ ತಿಳಿಸಿ) 'ವಿದೇಶಿ ನೆಲ'ದ ಅಪ್ಪಟ ಕನಸುಗಾರರ ಗುಂಪೊಂದರ ಬಳಿ ಈಗ್ಗೆ ಒಂದು ವರುಷದಿಂದ ಕನಸನ್ನು ಹ೦ಚಿಕೊಳ್ಳುತ್ತಿದ್ದೇನೆ. ಅಲ್ಲಿ ಜರುಗುವ ಕನಸಿನ ಅಧ್ಬುತ ಅವಲೋಕನಗಳು, ಪಕ್ಕಾ unusual ಆಗಿ ಗೋಚರಿಸುವ ಈ ಕನಸುಗಳನ್ನು ಹೊತ್ತು ಅಲೆಯುತ್ತಿರುವ ನನ್ನ ಮತ್ತಷ್ಟು ಕಷ್ಟ ಕೋಟಲೆಗಳು, ಕನಸಿನೊಡನೆ ನೆಲೆಸಿರುವ ಬೆಚ್ಚನೆಯ ಸ೦ತಸದ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ.

(image courtesy-web)

Tuesday, November 25, 2008

ಅಸ್ತಿತ್ವ

ಆ ಸುಂದರ ಪುಷ್ಪ ಗಾಳಿಗೆ ತಲೆದೂಗುತ್ತಾ ತನ್ನೊಡಲ ಕಂಪನ್ನು ತನ್ನ ಸುತ್ತಲೇ ಪಸರಿಸಿಕೊಂಡು ಅನಂದಿಸುತ್ತಿತ್ತು. ಹೀಗೇ ತನ್ನ ಇರುವಿಕೆಯಲ್ಲೇ ಶ್ರೇಷ್ಠತೆಯನ್ನು ಕಂಡುಕೊಂಡ ಹೂವಿನ ಮನಸ್ಸು ತನ್ನನ್ನೆತ್ತಿ ಹಿಡಿದಿರುವ ಗಿಡದತ್ತ ಸೂಕ್ಷ್ಮ ನೋಟ ಬೀರಿತು. ಮತ್ತೆ ತಲೆಯೆತ್ತಿ ವಯ್ಯಾರದಿ೦ದ ನರ್ತಿಸಿತು. ಹೀಗೇ ತಾತ್ಸಾರದಿ೦ದ ಗಿಡವನ್ನು ಗಮನಿಸುತ್ತಾ ಅದು ಹೇಳಿತು, "ನೀನು ನನಗೆ ತುಂಬಾ ವಿಧೇಯನಾಗಿರಬೇಕು. ಏಕೆಂದರೆ ಇವತ್ತು ನೀನು ಈ ಸ್ಥಳದಲ್ಲಿ ನೆಲೆಯೂರಿರುವುದು, ಗುರುತಿಸಲ್ಪಟ್ಟಿರುವುದು ನನ್ನ ಪ್ರಮುಖ ಇರುವಿಕೆಯಿಂದ". ತನ್ನನ್ನು ತಾನೇ ಅಟ್ಟಕ್ಕೆ, ಬೆಟ್ಟಕ್ಕೆ ಏರಿಸುತ್ತಾ ಕೊಂಕು ಮಾತಾಡಿತು. ಗಿಡಕ್ಕೆ ಬಹಳ ಬೇಸರವಾಗಿ ಮಾತುಗಳು ಬಾಯಿಯ ತುದಿಗೆ ಬಂದರೂ ತಕ್ಕ ಸಮಯ ಇದಲ್ಲ ಎಂದು ತನ್ನಲ್ಲೇ ಪದಗಳನ್ನು ನು೦ಗಿಕೊ೦ಡಿತು.
ಬಹಳ ದಿನಗಳು ಹೀಗೇ ಕಳೆದವು.. ಅರಳಿ ನರ್ತಿಸುತ್ತಿದ್ದ ಹೂವಿನ ಲಯ ಎಲ್ಲೋ ತಪ್ಪಿದಂತಾಗಿ, ಒಡಲ ಶಕ್ತಿಯೆಲ್ಲಾ ಎಲ್ಲೋ ಉಡುಗಿ ಹೋದಂತೆ, ತನ್ನ ದೇಹ ತನಗೇ ಭಾರವಾದ೦ತೆ ಭಾಸವಯಿತು. ಎಷ್ಟೋ ದಿನ ತನುಮನವ ರಂಜಿಸುತ್ತಿದ್ದ ಹೂವು ಕೆಲವೇ ಗಂಟೆಗಳಲ್ಲಿ ತನ್ನ ಕಾಲುಗಳಿ೦ದ ಬೇರ್ಪಟ್ಟು ಮಣ್ಣಿನ ನೆಲದ ಮೇಲೆ ದೊಪ್ಪನೆ ಬಿದ್ದು ಬಿಟ್ಟಿತು. ಮತ್ತೆ ಮೇಲೇಳಲಾರದೇ ಅತ್ತಿತ್ತ ಹೊರಳಲಾರದೇ ಗಾಳಿಯ ಆರ್ಭಟಕ್ಕೆ ಬಲಿಯಾಗಿ ತತ್ತರಿಸಲ್ಪತ್ತಿತು. ಜೋರಾಗಿ ರೋದಿಸುತ್ತಾ, "ಅಯ್ಯೋ ನನ್ನ ಕರ್ಮ, ನನ್ನ ಸ್ಥಿತಿ ಯಾರಿಗೂ ಬರದಿರಲಿ.. ಇದೇನಾಗಿ ಹೋಯಿತು..?" ಎನ್ನಲು ಈ ಎಲ್ಲ ಘಟನೆಗಳನ್ನು ಮೌನಧಾರಿಯಾಗಿ ಗಮನಿಸುತ್ತಿದ್ದ ಗಿಡಕ್ಕೆ ಕರುಳು ಚುರ್ರೆ೦ದಿತು. ಅದು ಹೂವಿಗೆ ಹೇಳಿತು, "ನನ್ನ ಸುಂದರ ಪುಷ್ಪವೆ, ಇಲ್ಲಿ ನೋಡು. ನಿನ್ನ ಸ್ಥಾನವನ್ನು ಬೇರೆ ಯಾರೋ ಆಕ್ರಮಿಸಲು ಯತ್ನಿಸುತ್ತಿರುವುದನ್ನು... ನಾನು ನಿನ್ನನ್ನಣುಕಿಸಲು ಹೀಗೆ ಹೇಳುತ್ತಿಲ್ಲ. ಆದರಿದು ಪ್ರಕೃತಿ ನಿಯಮ. ನಮ್ಮ ಶ್ರೇಷ್ಠತೆಗೆ ನಾವೇ ತಲೆದೂಗುತ್ತಾ.., ತೂಗುತ್ತಾ ತಲೆಯೇ ಕಿತ್ತು ಬಿದ್ದರೆ...? ಅ ಸಂಕಟ ಯಾರಿಗೂ ಬೇಡ. ನೀನು ಅಂದು ಹೇಳಿದ ಮಾತು ನಿನ್ನ ಗರ್ವದಿಂದ ಉಧ್ಬವಿಸಿದ್ದು. ಅದಕ್ಕಂದು ಜಂಬದ ಲೇಪವೊ೦ದನ್ನು ಬಿಟ್ಟರೆ ಮತ್ಯಾವ ಅರ್ಥವಾಗಲಿ, ಸತ್ಯಾ೦ಶವಾಗಲೀ ಇರಲಿಲ್ಲ. ಆದರೆ ಇಂದು ಅದೇ ನಿಜವಾಗಿದೆ. ಖ೦ಡಿತ ಇದೀಗ ನೀನೇ ನನ್ನ ಅಸ್ತಿತ್ವಕ್ಕೆ ಕಾರಣಳಾಗಬಲ್ಲೆ.. ನನ್ನ ಇರುವಿಕೆಯನ್ನು ಭದ್ರಪಡಿಸಬಲ್ಲೆ.. ಮತ್ಯಾಕೆ ಈ ವೇದನೆ. ಬಾ ಈ ಕ್ಷಣದಿಂದ ನೀನೇ ನನ್ನ ಸಮರ್ಥ ಇರುವಿಕೆಗೆ ಕಾರಣಳಾಗುವ ಗೆಳತಿ..." ಎನ್ನುತ್ತಾ ತನ್ನ ಪರ್ಣಹಸ್ತವನ್ನು ಚಾಚಿ 'ಪುಷ್ಪ'ವನ್ನು ತನ್ನೆಡೆಗೆ ಸೆಳೆದುಕೊಂಡು ತನ್ನ ಬುಡಕ್ಕೆ ಒರಗಿ ಕೂರಿಸಿ ಸಮಾಧಾನ ಪಡಿಸಿತು. ಅದರ ಜೀವಕ್ಕೆ ಪರಿಪೂರ್ಣತೆ ನೀಡಿತು....
*೨೦೦೬ ರ ಕನಸು
(image courtesy- web)

Monday, October 6, 2008

ಇರುವ ದು೦ಬಿಯ ಬಿಟ್ಟು.....

ಆ ದಿನ ಅಮ್ಮ ಬಾಂದಳವ ಬೊಟ್ಟು ಮಾಡಿ ತೋರಿಸುತ್ತಾ ತುತ್ತಿಕ್ಕುತ್ತಿದ್ದಾಗ ಅಮ್ಮನ ತೆಕ್ಕೆಯ ’ಮಗು’ವಾಗಿದ್ದ ಆಕೆಯ ಕಣ್ಣುಗಳನ್ನು ಚಂದ್ರನಿಗಿಂತ ಎಷ್ಟೋ ದೂರದಲ್ಲಿ ಮಿನುಗಿ ಮರೆಯಾಗುತ್ತಿದ್ದ ನಕ್ಷತ್ರಗಳು ಸೆಳೆದು ಹಿಡಿದಿದ್ದವು. ಅಂದೇ ಅವನ್ನು ತನ್ನ ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳಬೇಕೆಂದು ಆಕೆ ನಿಶ್ಚಯಿಸಿದ್ದಳು. ಪ್ರಪಂಚವನ್ನು, ವಾಸ್ತವವನ್ನು ಅರ್ಥೈಸಿಕೊಳ್ಳುವ ಮೊದಲೇ ಮಿನುಗು `ತಾರೆ’ಗಳನ್ನು ಮುಡಿಗೇರಿಸಿಕೊಳ್ಳುವ ಕನಸು ಕಂಡಿದ್ದಳು. ತನ್ನ ಪುಟ್ಟ ಕಾಲುಗಳಿಂದ ಹೆಜ್ಜೆ ಹಾಕುತ್ತಾ ಭೂಮಿ,ಬಾಂದಳ ಸಂಧಿಸುವ `ದಿಗಂತ’ದೆಡೆಗೆ ಚುಕ್ಕಿಗಳ ಹಿಡಿಯಲು ಓಡಲಾರಂಭಿಸಿದ್ದಳು. ಆಗಸವ ನೋಡುತ್ತಾ ಸಾಗುತ್ತಿದ್ದ ಕಾಲುಗಳು ಕಲ್ಲುಗಳಿಂದ ಜರ್ಝರಿತವಾಗುತ್ತಿದ್ದವು. ತನ್ನ ಕೋಮಲತೆಯನ್ನೇ ಮರೆತಂತೆ ಗಟ್ಟಿಯಾಗುತ್ತಿದ್ದವು. ಮಧ್ಯೆ ತನ್ನ ಓಟವನ್ನು ನಿಲ್ಲಿಸಿ ತೂತಾಗಿದ್ದ ತನ್ನ ಕಾಲುಗಳನ್ನು ನೋಡುತ್ತಿದ್ದಳು. ಆಗಸದ ಚುಕ್ಕಿಗೂ, ಕಾಲ ಕೆಳಗಿನ ಕಲ್ಲುಗಳಿಗೂ ಇರುವ `ಅಂತರ’ವನ್ನು ಕಂಡು ದುಃಖಿಸುತ್ತಿದ್ದಳು. ಮತ್ತೆಲ್ಲೋ ಆ ಬಾಂದಳ ಧರೆಗಿಳಿದಂತೆ ಕಂಡ ಸ್ಥಳದೆಡೆಗೆ ಕುಂಟುತ್ತಾ ನಡೆಯುತ್ತಿದ್ದಳು...
ಕಾಲುಗಳೀಗ ಬಹಳ ಬೇಗ ಹೆಜ್ಜೆಹಾಕುವಷ್ಟು ಬಲಿಷ್ಠವಾಗಿದ್ದವು. ಆಕೆಯ ಕಣ್ಣುಗಳು ಆಗಸದ ನಕ್ಷತ್ರ, ಭೂಮಿಯ ಕಲ್ಲುಗಳ ಮಧ್ಯೆ ಇರುವ ಪ್ರಪಂಚವನ್ನು ನೋಡುತ್ತಿದ್ದವು. ತನ್ನ ಒಂಟಿ ಪಯಣದಲ್ಲಿ ಜೊತೆಗಾರರು ಯಾರಾದರೂ ಸಿಗಬಹುದೇ ಎಂದು ಹುಡುಕುತ್ತಿದ್ದವು... ಬದುಕು, ಜೀವನ, ಸಮಾಜ, ಕಟ್ಟುಪಾಡು ಎಂದು ಮನಸ್ಸು ಯೋಚಿಸುವಂತಾಗಿತ್ತು. ಯಾವುದೋ ನಿಲ್ದಾಣದಲ್ಲೊಮ್ಮೆ ಕುಳಿತಳು. ತನ್ನ ಮಾಸಲು ಬಟ್ಟೆಯನ್ನೊಮ್ಮೆ ನೋಡಿಕೊಂಡಳು..ಅದು ಮುಳ್ಳುಗಳಿಗೆ ಸಿಲುಕಿ ಹರಿದಿತ್ತು, ಕೈ ಕಾಲುಗಳ ಮೇಲೆ ಗಾಯದ ಗುರುತುಗಳಾಗಿದ್ದವು... ಎಲ್ಲಾ ಗಮನಿಸಿದ ಮೇಲೆ ತನ್ನ ಕಣ್ನನ್ನೊಮ್ಮೆ ಮುಚ್ಚಿ ತೆರೆದು ಅದರೊಳಗೆ ತನ್ನ ಸಾವಿರಾರು ಯೋಚನೆಗಳನ್ನು ಮುಚ್ಚಿಟ್ಟು ಮತ್ತೆ ಗುರಿಯೆಡೆಗೆ ಓಡಿದಳು.. ಅವಳ ಬೆನ್ನತ್ತಿದ್ದ ’ಕಾಲ’ ಆಕೆಯ ಹಿಂದೆ, ಮುಂದೆ, ಜೊತೆ ಜೊತೆಯಾಗಿ ಓಡಿ ಬರುತ್ತಿತ್ತು.
ಅವಳ ಕಾಲುಗಳೀಗ ಕೊಂಚ ನಿಧಾನವಾಗುತ್ತಿದ್ದವು....ತಾನು ಅಂದುಕೊಂಡ ನಕ್ಷತ್ರವನ್ನು ಹಿಡಿಯಲಾಗುವುದಿಲ್ಲವೇನೋ ಎಂದು ಮನಸ್ಸು ಚಡಪಡಿಸುತ್ತಿತ್ತು. ದೇಹ ವಿಶ್ರಾಂತಿ ಬಯಸುತ್ತಿತ್ತು, ನಕ್ಷತ್ರ ಹಿಡಿಯುವುದರಲ್ಲಿ ಮೊದಲಿದ್ದ ಉತ್ಸಾಹ ಕಡಿಮೆಯಾದಂತಿತ್ತು. ತನ್ನ ಮನಸ್ಸಿನ ಭಾವನೆಗಳಿಗೆ ಮನ್ನಣೆ ಕೊಟ್ಟು ಆಕೆ ಬಹಳ ದಿನಗಳ ನಂತರ ಬಿಡುವು ಮಾಡಿಕೊಂಡು ಪ್ರಪಂಚವನ್ನು ಕಂಡಳು... ಪ್ರಪಂಚವಿಡೀ ತನ್ನನ್ನೇ ನೋಡುತ್ತಿರುವಂತೆ ಅವಳಿಗೆ ಭಾಸವಾಗತೊಡಗಿತು.. ಅವಳ ಕಣ್ಣಿಗೆ ಅಮ್ಮಂದಿರು, ಎಷ್ಟೋ ಭಾವನೆಗಳನ್ನು ತುಂಬಿಕೊಂಡ ಜನರು, ಕನಸುಗಳಿಗಾಗಿಯೇ ಹುಟ್ಟಿದಂತಿರುವ ಮಕ್ಕಳು ಕಂಡರು.. ಆಕೆ ತಲೆಯೆತ್ತಿ ಮೇಲೆ ನೋಡಿದಳು. ಅನಂತವಾದ ದಾರಿಯ ಹೊರತು ಮತ್ತೇನೂ ಕಾಣಲಿಲ್ಲ. ಅವಳ ಕಣ್ಣುಗಳು ಮತ್ತೆ ಮತ್ತೆ ಹೊಳೆದವು.. ಕನಸುಗಳು ತುಂಬಿ ಬಂದಂತಾದವು..ಯಾವ ನಕ್ಷತ್ರ ಹಿಡಿಯಲು ಹೊರಟಿದ್ದಳೋ ಆ `ನಕ್ಷತ್ರ’ವೇ ಅವಳಾಗಿ ಬಿಟ್ಟಿದ್ದಳು....

~ಸುಷ್ಮ ಸಿ೦ಧು
೨೦೦೫ ರಲ್ಲಿ ಬ೦ದು, ದಾಖಲಿಸಿರುವ 'ಕನಸು'.
Many thanx for all comments & votes @kendasamige.
(image courtesy-web)

Friday, September 12, 2008

ಮತ್ತೊಂದು ಕನಸು..

ಅಲ್ಲೊಂದು ಉದ್ಯಾನವನದ ನೂರಾರು ಗಿಡ, ಮರಗಳ ನಡುವೆ 'ಆ' ಗಿಡ ತನ್ನ ಅಂದಕ್ಕೆ ತಾನೆ ಮಾರು ಹೋದಂತಿತ್ತು. ತನ್ನಲ್ಲರಳಿದ ಹವಳದ ಬಣ್ಣದ ಹೂವನ್ನು ಕಂಡು ಹಿರಿಹಿರಿ ಹಿಗ್ಗುತ್ತಿತು...ತನ್ನ ಸುತ್ತ ಮುತ್ತಲಿದ್ದ ಗಿಡ-ಮರಗಳಿಗೆ ತನ್ನ ಅಂದವನ್ನು ವಿವರಿಸುತ್ತಾ ಹೆಮ್ಮೆ ಪಡುತ್ತಿತ್ತು. ಅಲ್ಲಿದ್ದ ಎಲ್ಲರಿಗೂ 'ಅವಳ ಸಮಾನವಿಲ್ಲ' ಎಂಬ ಭಾವನೆ ಅಚ್ಚೊತ್ತಿ ಬಿಟ್ಟಿತ್ತು.
ಈ ರೀತಿ ಆ ಗಿಡ ಹಾಡಿ, ಹೊಗಳಿಕೊಳ್ಳುತ್ತಿದ್ದುದನ್ನು ಅದರ ಪಕ್ಕದಲ್ಲೇ ಭೂಮಿಯ ಬೆಚ್ಚಗಿನ ಗರ್ಭ ಸೀಳಿ ಆಗತಾನೇ ಹೊರಬಂದು, ತಲೆಯೆತ್ತಿ ತನ್ನ ಬಂಧುಗಳನ್ನು ನೋಡುತ್ತಿದ್ದ 'ಮೊಳಕೆ'ಯೊಂದು ನೋಡಿತು. ಒಮ್ಮೆ ನಕ್ಕು ಅದು ಸುಮ್ಮನಾಯಿತು. ಹೀಗೇ ಒಂದು ದಿನ ಅದು ಸು೦ದರಿ ಗಿಡದ ಬಳಿ ಅದು ಕೇಳಿತು, "ಗೆಳತೀ, ನೀನು ಸುಂದರಿ ಎನ್ನುವುದು ಸತ್ಯವಾದ ವಿಷಯವೇ. ಆದರೆ ನೀನೇ ಬಿಡುವ ಆ ಹೂವಿನ ಭಾರ ತಾಳಲಾರದೇ ನೀನೇಕೆ ನೆಲವನ್ನೇ ನೋಡುತ್ತಿರುತ್ತೀಯಾ? ಕತ್ತೆತ್ತಿ ಒಮ್ಮೆ ನಿನ್ನ ಅಣ್ಣ೦ದಿರನ್ನು ನೋಡು... ಒಮ್ಮೆ ಮಾತ್ರ..." ಆ 'ಸುಂದರಿ' ಗಿಡ ಪೆಚ್ಚಾಗಿ ಹೋಯಿತು. ಏನೇ ಮಾಡಿದರೂ ಬಗ್ಗಿದ ಹೂವಿನ ತಲೆ ಮೇಲೆತ್ತಲಾಗಲಿಲ್ಲ! ತನ್ನ ದುರ್ಬಲತೆ ಕಂಡು ಕುಗ್ಗಿ ಹೋಯಿತು...

ಹೀಗಿರುವಾಗ ಆ ಮೊಳಕೆಯ ಪುಟ್ಟ ದೊಡ್ಡವನಾಗಿ ಬೆಳೆದ. ಸುಂದರಿಯ ಪಕ್ಕದಲ್ಲೇ ಧೃಢವಾಗಿ ನಿಂತ. ಅಲ್ಲೇ ಅಡ್ಡಾಡುತ್ತಿದ್ದ ಮಾಲಿ ಅ 'ಸುಂದರಿ' ಗಿಡದ ತಲೆಯೆತ್ತಿ 'ಪುಟ್ಟು' ಗಿಡಕ್ಕೆ ಬಿಗಿದ..ಈಗ ಸುಂದರಿ ತಲೆಯೆತ್ತಿ ನೋಡಿದಳು...ತನ್ನ ಅಣ್ಣ೦ದಿರನ್ನು, ಹಾಗೆಯೇ ಆ 'ಪುಟ್ಟ'ನನ್ನು. ಆಗ ಪುಟ್ಟ ಹೇಳಿದ, "ನೀನೀಗ ನಿಜವಾದ 'ಸುಂದರಿ'.ನಿನ್ನ ಈ ಅಂದವಾದ 'ಮೌನ' ನಿನ್ನನ್ನು ಸುಂದರಗೊಳಿಸಿದೆ." ಸುಂದರಿ ಒಮ್ಮೆ ನಕ್ಕಳು. ಸಂತಸದಿಂದ ಇಡೀ ಉದ್ಯಾನವನವೇ ಮುಗುಳ್ನಕ್ಕಿತು...

('ಶೋಧ'ದ ಮತ್ತೊಂದು ತುಣುಕು. ೨೦೦೪ರಲ್ಲಿ ಮೂಡಿದ ಕನಸು. ನನ್ನ ಪುಸ್ತಕದಲ್ಲಿ ದಾಖಲಾಗಿದೆ..)
~ಸುಷ್ಮ ಸಿ೦ಧು.

(image courtesy-web)

Wednesday, August 27, 2008

ನನ್ನ 'ಕನಸು'!!

ಹಾಯ್,
ಇದು ನನ್ನ ಕನಸುಗಳ ತಾಣ. ಹಾಗೆಂದು ಇವು ನಾನು ಕಂಡುಕೊಂಡ ಕನಸುಗಳಲ್ಲ! ತಾವಾಗೇ ಬಂದು ಬಿದ್ದಕನಸುಗಳು! ಈಗ ಐದು ವರುಷಗಳಿಂದ ನಾನು ಸಾಕಷ್ಟು ಬದಲಾಗಿದ್ದೇನೆ. ಅದೆಷ್ಟರ ಮಟ್ಟಿಗೆ ಎಂದರೆ ನನ್ನ ಬದುಕಿನ ಅಷ್ಟೂ seriousness ಕನಸುಗಳೊಳಗೆ ತೂರಿ ಹೋಗಿ ನಾನು ನಿರಾಳವಾಗಿಬಿಟ್ಟಿದ್ದೇನೆ! ಮೊದ ಮೊದಲು ಸಲಹೆಯಂತೆ, ಸಮಾಧಾನದಂತೆ ಮೂಡಿ ಬಂದು ನನ್ನಲ್ಲಿ ಸಂದೇಹ ಹುಟ್ಟಿಸುತ್ತಿದ್ದ ಕನಸುಗಳು ನಂತರ 'ನನ್ನಿಂದ' ದೂರವಾಗಿ ನಾನು ಕಾಣದ, ಕೇಳದ ವಿಷಯಗಳನ್ನು ಆರಂಭ, ಅಂತ್ಯಗೊಡನೆ ಹುದುಗಿಸಿ ಕತೆಗಳಾಗಿಬಿಟ್ಟವು.
ಅಮ್ಮನಿಗೆ ಎಲ್ಲಾ ಕತೆಗಳನ್ನು ಹೇಳುತ್ತಾ record ಮಾಡಲಾರಂಭಿಸಿದವಳು ನಂತರ ಅಮ್ಮನ ಸಲಹೆಯಂತೆ ಬರೆಯಲಾರಂಭಿಸಿದೆ.. ಇಂತಹ ಬರಹಗಳು ನನ್ನನ್ನು ಸಾಕಷ್ಟು 'ಅತ೦ತ್ರ' ಸ್ಥಿತಿಯಲ್ಲೂ ತಳ್ಳಿವೆ........ 'alter ಮಾಡು, ಆರಂಭ ಸರಿಯಿಲ್ಲ, ಅಂತ್ಯ ಸ್ವಲ್ಪ ಬದಲಾಗಬೇಕಿತ್ತು, ಇನ್ನಷ್ಟು ಚೆಂದವೋ, ಬೇರೆಯದೇ ವಿಷಯ ಆಗಿದ್ದಿದ್ದರೆ...' ಎಂದರೆ ನಾನೂ ಏನೂ ಮಾಡಲು ಅಸಹಾಯಕಳು!!! ಕಥೆಯೆ೦ದೋ, ಲಹರಿಯೆ೦ದೋ ಏನೆಂದೋ ಹೆಸರಿಸಲು ಅವಕ್ಕೆ ಅವುಗಳದ್ದೇ ಅದ ಚೌಕಟ್ಟು, ಬದ್ದತೆಗಳಿರುತ್ತವೆ. ಕಡೆಗೆ 'ಎಲ್ಲಿಯೂ ಸಲ್ಲದ' ಅಥವಾ 'ಎಲ್ಲಿಗೂ ಸೇರದ' ಕನಸುಗಳನ್ನು, 'ಕನಸುಗಳು' ಎಂಬ ಶೀರ್ಷಿಕೆಯಡಿಯಲ್ಲಿಯೇ ಆರಾಮವಾಗಿರಿಸೋಣವೆ೦ದರೆ 'ಕನಸುಗಳತಾಣ'ವೆಂದು ಯಾವ ಪತ್ರಿಕೆಯಲ್ಲಿಯೂ ಸ್ಥಾನವಿಲ್ಲ..! ಹಾಗೆಯೇ 'ಕನಸೇ!?' ಎಂಬಂತಹ ಉದ್ಗಾರಗಳಿಗೆ ಸಾಕ್ಷ್ಯಧಾರಗಳ ಸಮೇತ ಉತ್ತರಿಸಲೂ ಸಾದ್ಯವಿಲ್ಲ. ಇಂತಹ ಎಷ್ಟೋ ಚಿತ್ರ-ವಿಚಿತ್ರ ಸನ್ನಿವೇಶಗಳಿಗೆ, ಹಲವಾರು ವೈಯಕ್ತಿಕ ಗೊಂದಲಗಳಿಗೆ ನನ್ನ ಕನಸುಗಳು ನನ್ನನ್ನು ತಳ್ಳಿದರೂ, 'ಆನೆ ನಡೆದದ್ದೇ ದಾರಿ..' ಎನ್ನುವಂತೆ ಅವು ಮು೦ದುವರಿದೇ ಇವೆ!
ಕನಸುಗಳ ಮೂಲ, existence ಬಗ್ಗೆ ತಲೆ ಕೆಡಿಸಿಕೊಳ್ಳುವ ಕಾಲ ಮುಗಿದು, ನನ್ನನ್ನು ಎಲ್ಲೋ ಕರೆದೊಯ್ದು ಬುದ್ದಿಹೇಳಿ, ಮೊಟಕಿ ಮತ್ತೆ ತಂದು ಬಿಡುವ ಪ್ರೀತಿಯ ಕನಸುಗಳು ಬಂದಾಗ 'ಒಹ್..' ಎಂದು ಅಚ್ಚರಿಸುತ್ತಾ, 'ಇದೇ ನನ್ನ ಕಡೆಯ ಕನಸಿರಬೇಕು. ಇನ್ನೆಷ್ಟು ವಿಷಯ ಹೀಗೆ ಬರಲು ಸಾಧ್ಯವಮ್ಮಾ..' ಎಂದು ಎಷ್ಟೋ ವರುಷಗಳಿಂದ ಅಮ್ಮನಿಗೆ ಹೇಳುತ್ತಾ, 'ಸುಮ್ಮನೆ ಬಂದದ್ದನ್ನು ಬರೆದಿಡು' ಎಂದೆನ್ನಿಸಿಕೊ೦ಡು ಗುಡ್ದೆಯಷ್ಟಿರುವ ಸರಕಿನಲ್ಲಿ ಆಗಾಗ್ಗೆ ಒಂದೊಂದನ್ನು ಆಯ್ದು ಬರೆಯುತ್ತಿದ್ದೇನೆ. ಅನಿಯ೦ತ್ರಿತ thoughts ಗಳನ್ನು 'like dreaming' ಎನ್ನಲಸಾದ್ಯವಾದ್ದರಿ೦ದ 'like minded' ಜನರೊಡನೆ share ಮಾಡಿಕೊಳ್ಳುವ ಬಯಕೆಯಿ೦ದಲೇ 'ಕ೦ಡೆ ನಾನೊಂದು ಕನಸು'ವಿನಲ್ಲಿ ನನ್ನ ಪ್ರಕಟಗೊಂಡಿರುವ ಪುಟ್ಟ ಪುಟ್ಟ 'online reading' ಗೆ ಸರಿಹೊಂದುವ ಕನಸುಗಳನ್ನು ತೆರೆದಿಡುತ್ತಿದ್ದೇನೆ.
~ಸುಷ್ಮ ಸಿ೦ಧು

(image courtesy-web)

Friday, August 8, 2008

ಶೋಧ.........

(ಇದು ನನ್ನ ಕನಸಿನ ಕಥೆ 'ಶೋಧ'ದ ತುಣುಕು.. ಕನಸುಗಳ ಕಥೆಯ ಸಂಗ್ರಹ 'ಪಯಣ ಸಾಗಿದಂತೆ.....'ಯಲ್ಲಿ ಪ್ರಕಟವಾಗಿದೆ.ಮತ್ತು ಮಯೂರದ 'ಗುಬ್ಬಚ್ಚಿಗೂಡು'ವಿನಲ್ಲಿ ಪ್ರಕಟವಾದ 'ಕರುಣಾಳು ಬಾ ಕನಸೇ' ಯಲ್ಲಿಯೂ ಸೇರಿಕೊಂಡಿದೆ. ಇದರ ಆ೦ಗ್ಲ ಭಾಷಾಂತರ 'the pot full of water' ,yahoo dreams group ನಲ್ಲಿ ಚರ್ಚೆಗೊಳಗಾಗಿದೆ.. )

ಏನನ್ನೋ ಅರಸುತ್ತಾ ದಾರಿಯ ಮಧ್ಯೆ ನಡೆದು ಬರುವ ನಾನು 'ಒಳಗೆ ಏನೋ ಇದೆ' ಎಂದು ಮನಗಂಡು ಪ್ರವೇಶಿಸಿದ ಗಾಜಿನ ಕಟ್ಟಡದ ಗೋಡೆಯ ಮೇಲೆ ಮೂರು ದೃಶ್ಯಗಳು ಮೂಡಿದವು . ಅದನ್ನು ನಾನು, ಹಾಗೂ ನನ್ನ ಸಾಲಿನಲ್ಲಿಯೇ, ನನ್ನ ಪಕ್ಕದ ಕುರ್ಚಿಯನ್ನು 'ಖಾಲಿ' ಬಿಟ್ಟು 'ಅಂತರ'ವೊಂದನ್ನು ಕಾಪಾಡಿಕೊಂಡು ಕೂರುವ ಸುಂದರ ಯುವತಿ ನೋಡಿದೆವು.. ಗೋಡೆಯ ಮೇಲಿನ ಚಿತ್ತಾರ ಕಥೆಯೊಂದನ್ನು ನಮ್ಮೆದುರಿತ್ತಿತು.

ಅಲ್ಲೊಂದು ನದಿ. ಸುಮಾರು ಮೈಲಿ ದೂರದಿಂದ ನೀರು ತೆಗೆದುಕೊಂಡು ಹೋಗಲು ಹುಡುಗಿಯೊಬ್ಬಳು ಅಲ್ಲಿಗೆ ಬರುತ್ತಿದ್ದಳು. ಎರಡು ತುಂಬಿದ ಕೊಡದೊಡನೆ ಹಿಂದಿರುಗುತ್ತಿದ್ದಳಾದರೂ ಮನೆ ಸೇರುವ ಹೊತ್ತಿಗೆ ನೀರು ಅರ್ಧಕ್ಕೇ ಇಳಿದು ಬಿಡುತ್ತಿತ್ತು.. ಹೀಗೇ ಎಷ್ಟೋ ದಿನಗಳು ಅ ಹುಡುಗಿಯ ನಿರಾಸೆ, ಅಸಹಾಯಕತೆಗಳೊಡನೆ ಕಳೆಯುತ್ತಿತ್ತು. ಅವಳು ನದಿಯೆಡೆಗೆ ಹೋದಾಗಲೆಲ್ಲ ಅದಕ್ಕೆ ಹೂವುಗಳನ್ನು ಕಿತ್ತು ಅರ್ಪಿಸಿ ಬೇಡುತ್ತಿದ್ದಳು, 'ಓ ಶಕ್ತಿಯೇ ಇಂದಾದರೂ ಕೊಡದ ತುಂಬ ನೀರುಳಿಸು...' ಆಕೆಯ ಸಮಸ್ಯೆ ದಿನಗಳುರುಳಿದರೂ ಬಗೆಹರಿಯಲಿಲ್ಲ. ಅಂದು ನಿರ್ಧರಿಸಿಕೊಂಡು ಒಂದೇ ಕೊಡ ತಂದಳು. ನೀರನ್ನು ತುಂಬಿ ತುಂಬ ಜಾಗರೂಕಳಾಗಿ ವರ್ತಿಸುತ್ತ ಮನೆಗೆ ಬಂದಳು..ಅವಳಿಗೆ ಪರಮಾನಂದವಾಗಿ ಹೋಯಿತು. ಏನಾಶ್ಚರ್ಯ ! ಅಂದು ಕೊಡ ತುಂಬಿತ್ತು.. ಅನಂದದಿಮ್ದ ಉಬ್ಬಿ ಹೋದವಳು ಮರುದಿನ ನದಿಯೆಡೆಗೆ ಬಂದು ಹೂಗಳನ್ನರ್ಪಿಸಿ ಶಕ್ತಿಗೆ ಕೃಥಜ್ೞಥೆಗಳನ್ನರ್ಪಿಸಿ ಕೂಗಿದಳು, 'ಕೊನೆಗೂ ನನ್ನ ಅಸೆ ಈಡೇರಿಸಿದೆಯಲ್ಲಾ. ನಾನು ನಿನಗೆ ಋಣಿ.. '. ಅಷ್ಟರಲ್ಲಿ ಅಶರೀರವಾಣಿಯೊಂದು ಹೇಳಿತು , "ತಂಗೀ, ಒಮ್ಮೆ ಆ ದಿನವನ್ನು ಸರಿಯಾಗಿ ನೆನೆಪಿಸಿಕೋ. ಅಂದು ನಿನ್ನ ಮನದಲ್ಲಿ ನಾನಿರಲಿಲ್ಲ.. ಇದ್ದದ್ದು ಕೊಡ, ನೀರು ಮಾತ್ರ!." ಅವಳು ಹಿಗ್ಗಿ ಹೋದಳು 'ಅರೆ! ದೇವರೇ ನನ್ನೊಡನೆ ಮಾತನಾಡಿದ..' ಸಂತಸದಿಂದ ಓಡಿ ಹೋಗಿ ಊರಿಗೆಲ್ಲ ಸುದ್ದಿ ತಿಳಿಸಿದಳು, 'ದೇವರು ಮಾತನಾಡಿದ!'
ಮಾರನೆಯ ದಿನ ವಿಷಯ ನಿರೂಪಿಸಲು ಎಲ್ಲರೊಡಗೂಡಿ ನದಿಯ ತೀರಕ್ಕೆ ಬಂದು ಅಂದಿನಂತೆಯೇ ಹೇಳಿದಳು, "ಕೊನೆಗೂ ನನ್ನಾಸೆ ಈಡೇರಿಸಿದೆಯಲ್ಲಾ...........ನಿನಗೆ ನಾನು ಋಣಿ..." ಎಷ್ಟು ಬಾರಿ ಚೀರಿದರೂ ಯಾವ ವಾಣಿಯೂ ಪ್ರತಿಕ್ರಿಯಿಸಲಿಲ್ಲ..ಎಲ್ಲರು ಚೇಡಿಸಿದರು, ಅವಮಾನಿಸಿದರು.ಎಲ್ಲ ಹೋದ ಮೇಲೆ ಕೊಡ ಹೊತ್ತು ನಿರಾಸೆಯಿಂದ ಮನೆಗೆ ತೆರಳುತ್ತಿದ್ದವಳಿಗೆ ಕೊಡದ ನೀರಿನಲ್ಲಿ ತನ್ನ ಪ್ರತಿಬಿಂಬ ಕಾಣಿಸಿತು. ಅದು ಹೇಳಿತು, "ಅಯ್ಯೋ ಹುಚ್ಚಿ, ನಿನ್ನನ್ನೇ ನೀನು ಗುರುತಿಸಲಾರಳಾದೆಯಾ? ನಿನ್ನನ್ನು ಗೆಲ್ಲುವಂತೆ ಮಾಡಿದ್ದು ನಿನ್ನ ಗಮನ ಮಾತ್ರ.. ಇಡೀ ಪ್ರಪಂಚಕ್ಕೆ ಶಕ್ತಿಯ ವಿಷಯ ತಿಳಿಸಲು ಹೊರಟು ನಿನ್ನನ್ನೇ ನೀನು ಅರಿಯಲಾರಳಾದೆ..ಮೊದಲು ನಿನ್ನೊಳಗೆ ಅನುದಿನ,ಅನುಕ್ಷಣ ನೆರೆದಿರುವ 'ನಿನ್ನತನ'ವನ್ನು ನಂಬು. ಯಾವ ಅಸ್ತಿತ್ವವನ್ನು ಅಲ್ಲ..." ನೀರಿನ ಪ್ರತಿಬಿಂಬ ಅವಳ ಮನವನ್ನು ಕಲಕಿತು. ಅಂದು ಕೊಡ ತುಂಬಿತ್ತು. ಒಳಗೆ ಅವಳೇ ತಂದ ನೀರಿತ್ತು..
~ಸುಷ್ಮ ಸಿ೦ಧು

(image courtesy-web)