Thursday, November 11, 2010

ಸಾ೦ಗತ್ಯ


ಆ ಕನಸು ಹೀಗೆ ಸಾಗಿತು...
ಟೆರೇಸಿನ ಅಂಚಿನಲ್ಲಿ ನಿಂತು ಮುಸ್ಸಂಜೆಯ ಹೊಂಬಣ್ಣದ ಬೆಳಕಲ್ಲಿ ಉಲ್ಲಸಿತಗೊಳ್ಳುತ್ತಿದ್ದೆ. ಎದುರಿಗೆ ಸುಂದರವಾಗಿ ಹರಡಿಕೊಂಡಿದ್ದ ಮೋಡಗಳು ಬೆನ್ನ ಹಿಂದೆಲ್ಲೋ ಅಡಗಿ ಕುಳಿತು ಹಾಗೇ ಮರೆಯಯಲ್ಲೇ ಹೊರಟುಬಿಡಲು ಏರ್ಪಾಡು ಮಾಡಿಕೊಳ್ಳುತ್ತಿದ್ದ ನೇಸರನೊಡನೆ ಆಟವಾಡುತ್ತಿದ್ದಂತೆ ತೋರುತ್ತಿದ್ದವು. ನಾನು ಕಳೆದ ದಿನಗಳ ನೆನಪುಗಳ ಆಶ್ರಯ ಪಡೆಯದೇ, ಮುಂಬರುವ ಕ್ಷಣಗಳ ನಿರೀಕ್ಷೆಯ ಕನಸುಗಳಲ್ಲಿ ಕಳೆದು ಹೋಗದೇ, ಬರಿಯ ನಾನೇ ಆಗಿ ಉಳಿದು 'ವಾಸ್ತವ' ದೊಂದಿಗೆ ಮಿಳಿತವಾದ ಆನಂದವನ್ನು ಮನದಲ್ಲಿ ಸೆರೆ ಹಿಡಿಯುತ್ತಿದ್ದೆ.
ಹೀಗೇ ಮುಗಿಲಿನಲ್ಲಿ ಚೆಲ್ಲಿದ್ದ ಬಣ್ಣಗಳು ತಮ್ಮ ತೀಕ್ಷ್ಣತೆಯನ್ನು ಕಳೆದುಕೊಳ್ಳುತ್ತಾ, ಮಾಸಲಾದಂತೆ ಮತ್ತೊಮ್ಮೆ ಆ ಮಾಸಲು ಬಣ್ಣವೆ ಒಂದು ನವಿರಾದ ಭಾವವಾಗಿ ಹೊಸತನವನ್ನು ತೋರಿ ಆತ್ಮೀಯವಾಗುತ್ತಾ ಬದಲಾಗುತ್ತಿತ್ತು. ಹೀಗೇ ಕಾಣದ ಅನಂತತೆಯೆಡೆಗೆ ನನ್ನ ಮನ ಹೊರಳುತ್ತಿರಲು, ಬಾನಿನ ರಂಗೆಲ್ಲಾ ಒಮ್ಮೆಲೇ ಕಸಿವಿಸಿಯಾದಂತೆ, ಯಾರಿಗೋ ಶರಣಾದಂತೆ ಕಂಡವು. ಕೆಲವೇ ನಿಮಿಷಗಳಲ್ಲಿ ಬಣ್ಣ, ಭಾವಗಳೆಲ್ಲಾ ತೂರಿಹೋಗಿ ನೆರಳೊಂದು ಆಗಸವನ್ನು ಕವಿಯಲಾರಂಭಿಸಿದಾಗ, ತನ್ನ ಕರ್ತವ್ಯಕ್ಕೆ ಹಾಜರಾಗಲು 'ಇರುಳು' ಸ್ವಲ್ಪ ಆತುರಾತುರವಾಗೇ ಇತ್ತ ಬರುತ್ತಿದ್ದುದು ಅರಿವಾಯಿತು.

ಕಣ್ಣುಗಳು ಕೊಂಚ ಸಮಯ ಪರದಾಡಿದವು. ಎಲ್ಲಿಯ ಮುಗಿಲಿನ ಆ ಹೊಳಪು? ಎಲ್ಲಿಯ ಕಪ್ಪು ಕತ್ತಲೆ? ಹೀಗೇ 'ಬದಲಾವಣೆ'ಯ ಪಜೀತಿಯಿಂದ ಕಷ್ಟಪಟ್ಟು ಹೊರಬಂದ ನಯನಗಳು ಮತ್ತೆ ತಮ್ಮ ಎಂದಿನ ಲಹರಿಗೆ ವಾಪಸ್ಸಾಗಲಾರಂಭಿಸಿದವು. 'ಅನಂತತೆ'ಯೆಡೆಗೆ ವಾಲುತ್ತಿದ್ದ ಮನದ ಹಾದಿಯನ್ನು ನಾನು ಈಗ 'ಶಾಶ್ವತತೆ'ಯೆಂದು ಹೆಸರಿಸಿ ಅದರೆಡೆಗೆ ಕರೆದೊಯ್ಯಲಾರಂಭಿಸಿದೆ. ಅಂತಹ ಅಮೋಘವಾದ ದೃಶ್ಯವನ್ನು ತನ್ನೊಳಗೆ ಸೇರಿಸಿಕೊಂಡು, ಈಗ ತನ್ನದೇ ಛಾಪು ಮೂಡಿಸಿ ಅನನ್ಯವಾಗಿ ನಿಂತ ಇರುಳು ನನಗೆ ಇಷ್ಟವಾಗತೊಡಗಿತು. ನಾನು ಇರುಳನ್ನು ಪ್ರೀತಿಸಲಾರಂಭಿಸಿದೆ. ಹೊರಗಿನ ವೈಭವಗಳಲ್ಲಿ ಸೇರಿಕೊಂಡಿದ್ದ ನನ್ನ 'ವಾಸ್ತವ' ಈಗ ಕತ್ತಲಿನ ನೀರವತೆಯಲ್ಲಿ, ನನ್ನನ್ನೇ ಮತ್ತೆ ಬಂದು ಸೇರಿತು. ನನ್ನೊಳಗಿನ 'ಮಾನವ'ನನ್ನು ನಾನು ಮರೆತೇಬಿಟ್ಟೆದ್ದೆನೇನೋ ಎನ್ನಿಸುತ್ತಲೇ, ಇರುಳು ಮತ್ತಷ್ಟು ಅಪ್ಯಾಯಮಾನವಾಯಿತು. 'ಪ್ರೀತಿ' ಮತ್ತಷ್ಟು ಗಾಢವಾಯಿತು.

ಅಷ್ಟರಲ್ಲಿ ಮೌನದ ಗಾಂಭೀರ್ಯವನ್ನು ಇಷ್ಟೂ ಅವಮಾನಿಸದೇ ಇರುಳು, ನನ್ನೊಡನೆ ಮಾತಿಗೆ ತೊಡಗಿತು., ನಾನು ಗಾಬರಿಗೊಂಡೆನೆಂದು ಬಗೆದು ಅದೆಂದಿತು, "ಸಂಜೆಯ ಸೌಂದರ್ಯವನ್ನು ಕಣ್ಣಿನಲ್ಲಿ ಪ್ರತಿಫಲಿಸುತ್ತಿದ್ದ ನೀನೂ ಈಗ ಕತ್ತಲಿನಲ್ಲಿ 'ಕತ್ತಲೆಯ' ಭಾಗವೇ ಆಗಿ ಹೋಗಿರುವೆ. ಹಾಗೆಂದು ನಿನಗೆ ನಿನ್ನ ಬಗ್ಗೆಯೇ ದಿಗಿಲೇ? ಭಯಪಡಬೇಡ. ಇಲ್ಲಿ ಎಲ್ಲರೂ ಒಂದೇ."
"ನನಗೆ ಆದದ್ದು ಭಯವಲ್ಲ, ಆಶ್ಚರ್ಯವಷ್ಟೆ" ಹಾಗೆಂದುಕೊಂಡು, ಹೇಳಲು ಹೋಗದೇ ಸುಮ್ಮನಾದೆ
ಇರುಳು ಕೇಳಿತು "ಗೆಳತೀ, ನಿನ್ನ ಪ್ರೀತಿಗೆ ಧನ್ಯವಾದಗಳು. ಆದರೆ ಇಡೀ ಜಗತ್ತೇ ನನ್ನ ವ್ಯಾಪಕತೆಗೆ ಅಳುಕುತ್ತಿರಲು , ಎಲ್ಲ ಜೀವಿಗಳೂ ತಮ್ಮನ್ನೇ ತಾವು ಮರೆತು ನಿದ್ರೆಗೆ ಜಾರಿರುವ ಈ ಹೊತ್ತಿನಲ್ಲಿ ನೀನು ನನ್ನಲ್ಲೇ ಏನೋ 'ಬೆರಗು' ಕಂಡುಕೊಂಡು ಪ್ರೀತಿಸುತ್ತಿರುವೆಯಲ್ಲಾ, ಕಾರಣ ತಿಳಿಯ ಬಹುದೇ?"

"ಗೆಳೆಯಾ, ಹಾಗೆ ತೋರುವುದು ನಿಜ. ಆದರೆ ನಾನು ನಿನ್ನ ಮೂಲಕ 'ಬದುಕ'ನ್ನು ಪ್ರೀತಿಸತೊಡಗಿದ್ದೇನೆ. ಒಮ್ಮೆ, ವರ್ಣರಂಜಿತವಾಗಿ ಸ್ಮ್ರುತಿ ಪಟಲದಲ್ಲಿ ದಾಖಲಿಸಲೂ ಅಸಾದ್ಯವಾಗದಷ್ಟು ವೈವಿಧ್ಯತೆಗಳನ್ನು ತನ್ನದಾಗಿಸಿಕೊಂಡು, ಆಹ್ಲಾದಕರವಾಗಿ ಕಂಗೊಳಿಸುತ್ತಿದ್ದ ಬದುಕು, ಮುಂಬರುವ ಕತ್ತಲೆಯನ್ನು ಮನಗೊಂಡೂ ಅದಕ್ಕೆ ಸಿದ್ದವಾಗದೇ, ಇರುಳೊಳಗೆ ಮೇಳೈಸಿರುವ ಅಂತರಾರ್ಥವನ್ನು ಮನಗಾಣದೇ, ಆಘಾತದ ಸ್ಥಿತಿಯನ್ನು ಸದಾ ಹೊದ್ದುಕೊಂಡು ಮಲಗಿ ಬಿಡುತ್ತದೆ. ಗೆಳೆಯಾ ಇಂತಹ ಬದುಕಿಗೆ, ಎಲ್ಲಾ ಸಾದ್ಯತೆಗಳು, ಎಲ್ಲಾ ಪರಿಸ್ಥಿತಿಗಳೊಳಗೂ 'ಲೀನ'ವಾಗಿರುವ ಪ್ರೀತಿಯ ಅರಿವು ಮೂಡಿಸಬೇಕಾಗಿದೆಯಲ್ಲವೇ. ಹಾಗಾಗಿಯೇ ನಾನು ನಿನ್ನನ್ನು ಅವಿರತವಾಗಿ ಪ್ರೀತಿಸತೊಡಗಿದ್ದೇನೆ."ನಾನು ಉತ್ತರಿಸಿದೆ.

ಕತ್ತಲು ಉಸುರಿತು, "ನಿನ್ನ ಮಾತು ಸತ್ಯ ಗೆಳತೀ. ನಿನ್ನ ವಿಚಾರ ನನಗೆ ಬಹಳವಾಗಿ ಇಷ್ಟವಾಯಿತು. ನನಗೂ ಬದುಕನ್ನು ಪ್ರೀತಿಸಲು ಕಲಿಸುವೆಯಾ? ನಾನು ಬಂದಕೂಡಲೇ ಎಲ್ಲರೂ ಬೆದರಿ ಓಡುವ ಪರಿಯನ್ನು ಪ್ರತಿನಿತ್ಯ ಕಾಣುತ್ತಾ, ನನಗೇ ನಾನು ಏನೋ ಆಗಿಬಿಟ್ಟಿದ್ದೇನೆನಿಸುತ್ತಿದೆ. ನಾನೇನು ಮಾಡಲಿ?"
ಇದು 'ಇರುಳಿನ; ಧನಿಯೇ? ನನಗೆ ಅಚ್ಚರಿಯಾಯಿತು!
ಪ್ರತಿಯಾಗಿ ನಾನೆಂದೆ, "ಹಾಗಾದರೆ ನೀನು ನನ್ನನ್ನು ಪ್ರೀತಿಸು.."

"ಗೆಳೆಯಾ, ಬೆಳಕಿನೊಡನೆ ಹೊಂದಿಕೊಂಡಿರುವ ಕರ್ತವ್ಯಗಳಿಂದ ಬೇಸತ್ತೋ, ಹಗಲಿನ ತೀಕ್ಷಕಿರಣಗಳಿಗೆ ಕಣ್ಣು ಸೇರಿಸಲಾರದೆಯೋ, ಬದುಕಿನ ಜಂಝಾಟಗಳ ನಡುವೆ,ಆಕಾಶದ ಬಣ್ಣಗಳಿಗೆ ಕಲ್ಪನೆಯ ಸಾಂಗತ್ಯವನ್ನು ಕಟ್ಟಿಕೊಡಲಾಗದೆಯೋ, ಇರುಳಿನ ತಂಪಿಗೆ, ಅದರ ಮಧುರ ನೀರವತೆಗೆ, ಚೆಂದದ ಮೌನಕ್ಕೆ ಮನಸೋತು ನಿನ್ನ ಬರುವಿಕೆಗೆ ಎಂದಿಗೂ ಕಾತರಿಸುತ್ತಾ, ನಿನ್ನ ಧೀರ್ಘವಾದ ಇರುವಿಕೆಯನ್ನು ಆಶಯಿಸುವ ನನ್ನನ್ನು ಕಂಡರೆ ನಿನ್ನ ಪ್ರಾಮುಖ್ಯತೆಯ ಬಗೆಗೆ ನಿನಗೇ ಅಭಿಮಾನ ಮೂಡುವುದಲ್ಲವೇ? ನನ್ನನ್ನು ಪ್ರೀತಿಸುವುದೆಂದರೆ ನಿನ್ನ 'ಬದುಕನ್ನೇ' ನೀನು ಪ್ರೀತಿಸಿಕೊಂಡಂತೆ ತಾನೆ?" ಸ್ಪಷ್ಟ ಪಡಿಸಿದೆ.
ಇರುಳು ಧ್ಯಾನಿಸಿದಂತೆ ನುಡಿಯಿತು, "ನನಗನ್ನಿಸುತ್ತಿದೆ. ಅಂತರಾಳದ 'ದೀಪ್ತಿ' ಉರಿಯಲು ಅವಶ್ಯಕವಾದ ಆಮ್ಲಜನಕವೇ ಪ್ರೀತಿ. ಅದನ್ನು ಬಾಹ್ಯ 'ವಸ್ತು'ಗಳ ಮೇಲೆ ಆರೋಪಿಸಿಕೊಂಡವರು ಜೀವಿಸುವರು ಆದರೆ ಬದುಕಲಾರರು"

ಬೆಳಕು, ಕತ್ತಲೆಯ 'ಬದಲಾವಣೆ' ಗಳಲ್ಲಿ 'ಶಾಶ್ವತ'ವಾದದ್ದು ಮೌನ. ನಮ್ಮ ಬದುಕುಗಳ 'ಸಾರಾಂಶ'ವನ್ನು ಕಂಡುಕೊಂಡ ನಾನು, ಇರುಳು ಮೌನದ 'ದ್ವನಿ'ಗಳೊಡನೆ ಸಂಭಾಷಿಸುತ್ತಾ, ಮತ್ತೆದ್ದು ಬರುವ ಹಗಲಿನ ತಿಳುವಿನಡಿಯಲ್ಲಿಯೇ ಜೀವನದ 'ಪ್ರೀತಿ' ಯನ್ನು, ಸತ್ಯದ 'ಅನಂತ'ತೆಯನ್ನು ಮನಗಂಡೆವು.
---**---

**ಇತ್ತೀಚಿನ 'ಮರಳ ಮಲ್ಲಿಗೆ' ಸ೦ಚಿಕೆಯಲ್ಲಿ ಪ್ರಕಟವಾಗಿದೆ
*Image- web

Monday, March 22, 2010

'ತಮಸೋಮ'


೧೯-೦೮-೨೦೦೭ ರ ಕರ್ಮವೀರ ಸಾಪ್ತಾಹಿಕದಲ್ಲಿ ಪ್ರಕಟವಾದ 'ತಮಸೋಮ' ಶೀರ್ಷಿಕೆಯ ಕನಸಿನ ಬರಹವಿದು...

Friday, March 12, 2010

'ಕನಸು'ಗಳ ಕತೆ 'ಕೆ೦ಡಸ೦ಪಿಗೆ' ಯಲ್ಲಿ

ಆತ್ಮೀಯರೇ,
ನನ್ನ ಕನಸುಗಳ ಕುರಿತಾದ ಲೇಖನ,
ಸುಷ್ಮಾ ಕಾಣುವ 'ಕನಸು'ಗಳ ಕತೆ 'ಕೆ೦ಡಸ೦ಪಿಗೆ ’ಯಲ್ಲಿ ಪ್ರಕಟವಾಗಿದೆ..
ದಯವಿಟ್ಟು ಇಲ್ಲಿ
(
ಸುಷ್ಮಾ ಕಾಣುವ 'ಕನಸು'ಗಳ ಕತೆ) ಕ್ಲಿಕ್ಕಿಸಿ...

Thursday, January 28, 2010

ನನ್ನ ಕನಸಿನ ಬರಹ ರೂಪ, 'ನಾನು ಯಾರು?'


ಇದು ೨೦೦೬ ರ ಕರ್ಮವೀರ ದೀಪಾವಳಿ ವಿಶೇಷಾ೦ಕದಲ್ಲಿ ಪ್ರಕಟವಾಗಿದೆ...

Tuesday, September 8, 2009

ಸ್ಥಿತ್ಯಂತರ

ಈ ಕನಸಿಗೀಗ ಐದು ವರುಷಗಳು. ಮೊದಲಬಾರಿಗೆ ಸಂಭಾಷಣೆಗಳು ಮೂಡಿದ ಮೊದಲ ಪುಟ್ಟ ಕನಸಿದು. ನಂತರದ ಕನಸುಗಳು ಮತ್ತಷ್ಟು ವಿಸ್ತೃತವಾಗುತ್ತಾ ಹೋದವು

ಸ್ಥಿತ್ಯಂತರ

ನಿಚ್ಚಳವಾಗಿ ಹಸಿರಿರುವ, ಸಮೃದ್ಧ ವಾತಾವರಣದ ಶ್ರೀಮಂತಿಕೆಯನ್ನು ದಿಟ್ಟಿಸುತ್ತಾ ನಡುವೆ ನಾನು ನಿಂತಿದ್ದೆ. ಮನಸ್ಸು ಮಾತ್ರ ಅಸಂಬದ್ದ ಆಲೋಚನೆಗಳ ಮೇಲೆ ಸವಾರಿ ಮಾಡುತ್ತಾ ಖಿನ್ನವಾದಂತಿತ್ತು. ಯಾವ ಯೋಚನೆಗಳೂ ನಾನು ಬೊಟ್ಟುಮಾಡಿ ಪರೀಕ್ಷಿಸುವಷ್ಟು ಸ್ಪಷ್ಟವಾಗಿರಲಿಲ್ಲ. ಹೀಗಿದ್ದಾಗ, ವಸ್ತುವೊಂದು ಸರ್ರನೆ ನನ್ನಿಂದ ಸ್ವಲ್ಪ ದೂರದಲ್ಲಿ ಚಲಿಸಿತು.

ಅಲ್ಲೊಂದು ಅತ್ಯಾಕರ್ಷಕವಾದ ಕೊಡೆ ನನ್ನ ಗಮನವನ್ನು ತನ್ನತ್ತ ಸೆಳೆದುಕೊಂಡಿತು. ಅದು ಕಾಮನಬಿಲ್ಲಿನ ವರ್ಣಗಳಿ೦ದ ಲೇಪಗೊ೦ಡು ಗಾಳಿ ಬಂದತ್ತ ಓಡುತ್ತಲಿತ್ತು. ನಾನು ಅರಿವಾಗುವ ಮೊದಲೇ ಕೊಡೆಯನ್ನು ಹಿಡಿಯುವುದೇ ನನ್ನ ಪರಮ ಗುರಿಯೇನೋ ಎಂಬಂತೆ ಅದರ ಹಿಂದೆ ಓಡಲಾರ೦ಭಿಸಿದೆ. ನನ್ನ ದೃಷ್ಟಿ ಎಷ್ಟು ಸೀಮಿತವಾಗಿತ್ತೆ೦ದರೆ ನಾನೆಲ್ಲಿ ಹೋಗುತ್ತಿದ್ದೇನೆ೦ಬುದನ್ನು ಯೋಚಿಸುವ ಗೋಜಿಗೇ ನಾನು ಹೋಗಲಿಲ್ಲ. ಇದರ ಮಧ್ಯದಲ್ಲೇ ನಾನು 'ಕೊಡೆ ಗಾಳಿಗೆ ಅನುಗುಣವಾಗಿ ಚಲಿಸುತ್ತಿಲ್ಲ ಬದಲಾಗಿ ಒಂದು ನಿರ್ಧಿಷ್ಟ ವೇಗದಲ್ಲಿ ಮುನ್ನುಗ್ಗುತ್ತಿದೆ' ಎಂಬುದನ್ನೂ ಕಂಡುಕೊಂಡೆ.

ಹೀಗೇ ಸಾಗುತ್ತಿದ್ದ ಕೊಡೆ ಅಚಾನಕ್ಕಾಗಿ ತನ್ನ ವೇಗ ಹೆಚ್ಚಿಸಿಕೊ೦ಡು ನನ್ನಿಂದ ದೂರ, ದೂರವಾಗಿ ಕಣ್ಮರೆಯಾಯಿತು. ಸುಸ್ತು, ನಿರಾಸೆಗಳ ಕೂಪವಾಗಿ ಅಲ್ಲಿ ನಿಂತ ನಾನು ಸುತ್ತಲೂ ದೃಷ್ಟಿ ಹಾಯಿಸಿದವಳೇ ದಿಗ್ಬ್ರಾ೦ತಳಾದೆ!ಅರೆ! ಅದೊಂದು ಬರಡು, ಬಂಜರು ಭೂಮಿ. ಹಸಿರು, ಸೌ೦ದರ್ಯವೆಲ್ಲಾ ಕಳೆದು ಹೋಗಿದೆ! ಮಂಡಿಯೂರಿ ಅಲ್ಲಿಯೇ ಕುಸಿದೆ. ಕೊಡೆ ಕಣ್ಮರೆಯಾದ ಸ್ಥಳದಿಂದ ಸ್ವರವೊಂದು ಹೊರಟಿತು, "ನೀನು ಓಡಿದೆ, ಓಡಿದೆ..., ಅಂದು ಗಳಿಗೆಯಲ್ಲಿ ಅಗತ್ಯವೇ ಇಲ್ಲದ ವಸ್ತುವಿಗಾಗಿ! ಮಳೆಯಾಗಲಿ, ಬಿಸಿಲಾಗಲಿ ಇಲ್ಲದಿದ್ದ ಜಾಗದಲ್ಲಿ ಒಂದು ಕೊಡೆಯ ಹಿಂದೆ! ಕ್ಷಣ ನಿನಗೆ ಒದಗಿಸಲಾಗಿದ್ದ ಸಂಪತ್ತನ್ನು ನೀನು ಮನಗಾಣಲೇ ಇಲ್ಲ. ಈಗ ನೀನು ಇಲ್ಲಿದ್ದೀಯ. ತನ್ನ ಒಣ ಹುಲ್ಲಿನಷ್ಟೇ ಬರಡಾದ ಆಲೋಚನೆಗಳನ್ನು ಆಹ್ವಾನಿಸುವ ಖಾಲಿ ಖಾಲಿ ಜಾಗದಲ್ಲಿ ಕೈಚೆಲ್ಲಿ ಕುಳಿತಿದ್ದೀಯ..."

(image- web)
ಇದು 'ಡ್ರೀಂ ವೀಲ್'ಗು೦ಪಿನಲ್ಲಿ ಸುತ್ತಿ ಬ೦ದಿರುವ ಕನಸು!

Wednesday, August 19, 2009

ಹೀಗೊಂದು ತರ್ಕ!

ಇದು, ಇತ್ತೀಚಿಗೆ ಮೂಡಿ, ಕಾಡಿದ ಕನಸುಗಳಲ್ಲೊಂದು.

ನಸಿನಲ್ಲಿ ಕಣ್ತೆರೆದಾಗ ಒಂದು ವಿಚಿತ್ರವಾದ ಪರಿಸರದಲ್ಲಿದ್ದೆ. ಪಾಳು ಪಾಳಾದ ಜಾಗದ ನಡುವೆ ಕುರ್ಚಿ, ಬೆಂಚುಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ನಾನು ಹೊಸ ಅನುಭವವೊ೦ದರ ವೈಚಿತ್ರ್ಯಕ್ಕೆ ಹೊ೦ದಿಕೊಳ್ಳುವಷ್ಟರಲ್ಲಿ ಗುಂಪೊಂದರ ಶಿಸ್ತಾದ ನಡುಗೆಯ ಸದ್ದು ಕಿವಿತಾಗಿತು. ಅತ್ತ ಕತ್ತು ತಿರುಗಿಸಿ ಒಂದು ಕ್ಷಣ ಸ್ತಬ್ಧವಾಗಿ ಹೋದೆ.'ಶಿರ'ಗಳೇ ಇಲ್ಲದ ಮನುಜರ ಗುಂಪೊಂದನ್ನು ಶಿರವೆತ್ತಿ ನಡೆಯುತ್ತಿದ್ದ ಯುವತಿಯೊಬ್ಬಳು ಮುನ್ನಡೆಸಿಕೊಂಡು ಬರುತ್ತಿದ್ದಳು. ಅವರೆಲ್ಲಾ ಬೆಲೆ ಬಾಳುವ ಉಡುಗೆಗಳನ್ನು ತೊಟ್ಟಿದ್ದರು. ಗುಂಪು ನನ್ನ ಸನಿಹದಲ್ಲೇ ಹಾದು ಹೋಯಿತು. ಆಕೆ ಒಮ್ಮೆ ನನ್ನನ್ನು ದಿಟ್ಟಿಸಿ ನೋಡಿ ಮುನ್ನಡೆದಳು. ಎಲ್ಲರೂ ಅಲ್ಲಿಯೇ ಜೋಡಿಸಿದ್ದ ಕುರ್ಚಿಗಳಲ್ಲಿ ಕುಳಿತುಕೊ೦ಡರು.

ಎಲ್ಲವೂ ನನಗೆ ವಿಚಿತ್ರಕ್ಕಿ೦ತ ಹಚ್ಚೇ 'ಕಗ್ಗಂಟಾಗಿ' ಕಂಡಿತು. ಆಕೆ ಅಧಿಕಾರಯುತ ವಾಣಿಯಲ್ಲಿ ನನಗೆ ತಿಳಿಯದ ಕೆಲವು ವಿಷಯಗಳನ್ನು ಕುರಿತು ಎಲ್ಲರನ್ನುದ್ದೇಶಿಸಿ ಮಾತನಾಡಲಾರ೦ಭಿಸಿದಳು. ಹತ್ತಿರದಲ್ಲೇ ಮಂಡಿಯೂರಿ ನಾನು ನೋಡುತ್ತಾ ಕುಳಿತೆ. ಆಕೆ ಏನೇ ವಿಷಯವನ್ನು ಪ್ರಸ್ತಾಪಿಸಿದರೂ, ಮಧ್ಯ ಮಾತು ತುಂಡರಿಸಿ ನಿಲ್ಲಿಸಿದರೂ 'ತಲೆ'ಯಿಲ್ಲದ ಮನುಜರು ಚಪ್ಪಾಳೆ ತಟ್ಟುತ್ತಿದ್ದರು. ಇದು ಹೀಗೇ ಮುಂದುವರೆಯಿತು.

ಚಪ್ಪಾಳೆಗಳು ಎಲ್ಲೆಲ್ಲೂ ಪ್ರತಿಧ್ವನಿಸಿದವು. ಅಷ್ಟರಲ್ಲಿ ಆಕೆ ನನ್ನನ್ನೇ ಸುಧೀರ್ಘವಾಗಿ ನಿಟ್ಟಿಸುತ್ತಾ ತನ್ನ ಎಂದಿನ ಧಾಟಿಯನ್ನು ಕಾಯ್ದುಕೊಂಡು ಹೀಗೆ೦ದಳು.. "ಆತ್ಮಿಯರೇ, ಉನ್ನತ ಆಲೋಚನೆಗಳಿರುವುದೇ ಒಪ್ಪಿಕೊಂಡು ಅನುಸರಿಸಲು. ಅಂತಹುದನ್ನು ಪ್ರಶ್ನಿಸುವ ಧೈರ್ಯ ತೋರುವವರನ್ನು ಶಿಕ್ಷಿಸದೇ ಬಿಡಲಾಗದು." ಆಶ್ಚರ್ಯ, ತುಸು ಗಾಬರಿಗಳೆರಡೂ ನನ್ನನ್ನು ಕಾಡ ಹತ್ತಿದವು. ಆಕೆಯ ಮಾತು ಸಾಗಿತು, "ಅಮೂಲ್ಯ ವಿಚಾರಗಳು ಬೆಂಬಲಿಗರನ್ನು ಗೆಲ್ಲುತ್ತವೆ. ಚಿ೦ತಿಸಬಲ್ಲವ ಮುನ್ನಡೆಸುತ್ತಾನೆ. ಆಗದವ ಹಿಂಬಾಲಿಸುತ್ತಾನೆ. ನಾಯಕತ್ವ ವಹಿಸಲು ಬೆಂಬಲಿಗರೂ ಇಲ್ಲದ, ಹೆಜ್ಜೆ ಸೇರಿಸಲು ಜೊತೆಗಾರರನ್ನೂ ಹೊಂದಿರದ, ಗೊತ್ತು ಗುರಿಯಿಲ್ಲದ ಅಲೆಮಾರಿ ನಮ್ಮ ಸಮಾಜಕ್ಕೆ, ಸಾಮಾಜಿಕ ವ್ಯವಸ್ಥೆಗೇ ಕಳ೦ಕವಿದ್ದ೦ತೆ. ಸ್ನೇಹಿತರೇ, ಇಲ್ಲಿಯೇ ನನಗೊಂದು 'ತಲೆ'ಯಿರುವ ಜೀವಿ ಗೊಚರಿಸುತ್ತಿದೆ!! ಅದು ಕೆಲಸ, ಉದ್ದೇಶವಿಲ್ಲದೆ ಅಲ್ಲಿ ಇಲ್ಲಿ ತಿರುಗಾಡುತ್ತಾ, ಅನಾವಶ್ಯಕವಾಗಿ ಚಿಂತಿಸುತ್ತಿದೆ. ಅದಕ್ಕೆ ತನ್ನ ಅಮೋಘ ಅಭಿವ್ಯಕ್ತಿಯಿ೦ದ ಜನರನ್ನು ಮೆಚ್ಚಿಸಲಿಕ್ಕೂ ಆಗದು, ಇಲ್ಲವೇ ಸುಮ್ಮನೆ ಸಾಮಾಜಿಕವಾಗಿ 'ಶ್ರೇಷ್ಥ'ವೆಂದು ಪರಿಗಣಿತವಾಗಿರುವ ಮೌಲ್ಯಗಳನ್ನು ಅನುಸರಿಸಲೂ ಆಗದು. ನಿಮಗೆ ಕುತೂಹಲವಿದ್ದರೆ ಒಮ್ಮೆ ಅದನ್ನು ನೋಡಿ ಬರಬಹುದು.." ಮಾತು ನಿಂತಿತು. ಚಪ್ಪಾಳೆಗಳು ಆರ್ಭಟಿಸಿದವು. ಆಕೆಯ ನಿಂದನೆ ಆಪಾದನೆಗಳಿ೦ದ ಬೇಸತ್ತು , ಸಾಕೆನ್ನದ೦ಬ೦ತೆ ನನ್ನನ್ನು 'ಅದು' ಎನ್ನುವಷ್ಟರ ಮಟ್ಟಿಗೆ ಸಂಭೋಧಿಸಿದ ರೀತಿಯಿಂದ ಅವಮಾನಿತಳಾಗಿ ನಾನು ಆಕೆಯನ್ನು ವಿರೋಧಿಸ ಬಯಸಿದೆ. ಆಕೆಯ ವಿತ೦ಡವಾದ, ಒಪ್ಪಲಸಾಧ್ಯವೆನಿಸಿದ ತರ್ಕದ ವಿರುದ್ದ ಧನಿಯೆತ್ತ ಬಯಸಿದೆ. ಇಲ್ಲ... ಆಗುತ್ತಿಲ್ಲ ಒಂದು ಪದವನ್ನೂ ಬಾಯಿ ಹೊರಗೆಡುವಲಿಲ್ಲ.ಸಂಪೂರ್ಣವಾಗಿ 'ಮೂಕ'ಳಾಗಿ ಹೋಗಿರುವ೦ತೆನಿಸಿತು. ಅಷ್ಟರಲ್ಲೇ ಅನಿಯಂತ್ರಿತವಾಗಿ ಕಾಲುಗಳು ಹಿಮ್ಮುಖವಾಗಿ ಚಲಿಸಲಾರ೦ಭಿಸಿದವು.... ಹೆಜ್ಜೆಗಳು ಹಿಂದೆ ಹಿಂದೆ.. ಕಡೆಗೆ, ನಿಜವಾಗಲೂ ಕಣ್ತೆರೆದಿದ್ದೆ!

(ಚಿತ್ರ - ಅ೦ತರ್ಜಾಲ)
This dream has been spinned in the online dream group ‘Dream Wheel’

Tuesday, August 11, 2009

ಕನಸು ಕದ್ದ ತಾಣ ಮಾಯವಾಗಿದೆ!

ಹಾಯ್,
ಕನಸು ಕದ್ದ ಬಗೆಗೆ ನೀಡಿದ ಬಹಳಷ್ಟು ಎಚ್ಚರಿಕೆ, ವಿರೋಧಗಳ ನಂತರ ಮಿ.ಪ್ಯಾ೦ಕಿ ಕಡೆಗೆ ತನ್ನ ಬ್ಲಾಗನ್ನೇ ಬ್ಲಾಗ್ ಲೋಕದಿ0ದ ತೆಗೆದು ಹಾಕಿದ್ದಾನೆ. ಈ ನಿಟ್ಟಿನಲ್ಲಿ ಕೈಜೋಡಿಸಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ತು೦ಬಾ ಧನ್ಯವಾಧಗಳು. ಮು೦ದೆ ಇ೦ತಹ ಯಾವುದೇ ಅಚಾತುರ್ಯ, ಸ೦ಕಷ್ಟಗಳು ಬ್ಲಾಗ್ ಪ್ರಪ೦ಚದಲ್ಲಿ ಎದುರಾಗುವುದಿಲ್ಲವೆ೦ದು ಆಶಿಸುತ್ತಾ ಮತ್ತೆ ಬ್ಲಾಗ್ ನಲ್ಲಿ ಕನಸುಗಳು ತೆರೆದುಕೊಳ್ಳಲು ಸಕಾಲವೆ೦ದು ಭಾವಿಸುತ್ತೇನೆ.
ಸದ್ಯದಲ್ಲೇ ಮತ್ತೊ೦ದು ಕನಸಿನ ಅನುಭವವನ್ನು ಬ್ಲಾಗ್ ಸೇರಿಸುತ್ತೇನೆ..
'ಇಲ್ಲಿ ಪ್ರಕಟವಾಗುವ ಬರಹಗಳ ಮೇಲಿನ ಹಕ್ಕುಗಳು ಖ೦ಡಿತ ನನ್ನ ಬಳಿಯಿರುತ್ತವೆ.'!!
ಇತ್ತ ಬರುತ್ತಿರಿ :)